ಬೆಂಗಳೂರು : ಭಾರತ ಕ್ರಿಕೆಟ್ ತಂಡದ ಹಿರಿಯ ಆರಂಭಿಕ ಬ್ಯಾಟರ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 2027ರ ಏಕದಿನ ವಿಶ್ವಕಪ್ಗಾಗಿ ಭಾರತ ಈಗಿನಿಂದಲೇ ಯುವ ತಂಡವನ್ನು ಕಟ್ಟುವ ಪ್ರಯತ್ನ ಆರಂಭಿಸಬಹುದು ಎಂಬ ವರದಿಗಳ ಬೆನ್ನಲ್ಲೇ, ರೋಹಿತ್ ಅವರನ್ನು ಏಕದಿನ ತಂಡದಿಂದ ಹೊರಗಿಡುವ ಸಾಧ್ಯತೆಗಳ ಬಗ್ಗೆಯೂ ಊಹಾಪೋಹಗಳು ಹರಿದಾಡುತ್ತಿವೆ.
ಈ ಚರ್ಚೆಗಳ ನಡುವೆ ಕ್ರಿಕೆಟ್ ವಲಯದಲ್ಲಿ ಮತ್ತೊಂದು ಅಭಿಪ್ರಾಯವೂ ಬಲವಾಗಿ ಕೇಳಿಬರುತ್ತಿದೆ. ರೋಹಿತ್ ಶರ್ಮಾ ಅವರನ್ನು ಈಗಲೇ ಭಾರತ ತಂಡದಿಂದ ಕೈಬಿಡುವುದು ಸೂಕ್ತ ನಿರ್ಧಾರವಾಗುವುದಿಲ್ಲ. ಅವರ ಅನುಭವ, ನಾಯಕತ್ವ, ದೊಡ್ಡ ಪಂದ್ಯಗಳಲ್ಲಿ ಒತ್ತಡ ನಿಭಾಯಿಸುವ ಸಾಮರ್ಥ್ಯ ಮತ್ತು ಇನ್ನೂ ತಂಡಕ್ಕೆ ನೀಡಬಹುದಾದ ಕೊಡುಗೆಗಳನ್ನು ಗಮನಿಸಿದರೆ ಅವರು ಭಾರತ ತಂಡದ ಅವಿಭಾಜ್ಯ ಅಂಗವಾಗಿಯೇ ಉಳಿಯಬೇಕು ಎನ್ನುವುದು ಅನೇಕ ಮಾಜಿ ಕ್ರಿಕೆಟಿಗರು ಹಾಗೂ ವಿಶ್ಲೇಷಕರ ಅಭಿಪ್ರಾಯವಾಗಿದೆ. ಕ್ರಿಕೆಟ್ ವಿಶ್ಲೇಷಣಾ ವೆಬ್ಸೈಟ್ ಕ್ರಿಕ್ ಅಡಿಕ್ಟರ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ರೋಹಿತ್ ಶರ್ಮಾರನ್ನು ಏಕದಿನ ತಂಡದಿಂದ ಕೈಬಿಡಬಾರದು ಎಂಬುದಕ್ಕೆ ಐದು ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದೆ.
ಭಾರತದ ವಿಶ್ವಾಸಾರ್ಹ ಮ್ಯಾಚ್ ವಿನ್ನರ್
ಕಳೆದ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಭಾರತದ ಏಕದಿನ ಕ್ರಿಕೆಟ್ಗೆ ರೋಹಿತ್ ಶರ್ಮಾ ಭದ್ರ ಅಡಿಪಾಯವಾಗಿದ್ದಾರೆ. ಆರಂಭಿಕ ಬ್ಯಾಟರ್ ಆಗಿ ತಂಡಕ್ಕೆ ವೇಗದ ಆರಂಭ ನೀಡುವಲ್ಲಿ ಅವರು ಸದಾ ಯಶಸ್ವಿಯಾಗಿದ್ದಾರೆ. ಮೂರು ದ್ವಿಶತಕಗಳನ್ನು ಬಾರಿಸಿದ ವಿಶ್ವದ ಏಕೈಕ ಏಕದಿನ ಬ್ಯಾಟರ್ ಎಂಬ ಅಪರೂಪದ ದಾಖಲೆಯೂ ಅವರ ಹೆಸರಿನಲ್ಲಿದೆ. 264 ರನ್ಗಳ ವಿಶ್ವದಾಖಲೆ ವೈಯಕ್ತಿಕ ಸ್ಕೋರ್ ಇನ್ನೂ ಅಜೇಯವಾಗಿ ಉಳಿದಿದೆ.
ದೊಡ್ಡ ಪಂದ್ಯಗಳಲ್ಲಿ ಒತ್ತಡವನ್ನು ಲೆಕ್ಕಿಸದೇ ಬ್ಯಾಟ್ ಬೀಸುವ ಸಾಮರ್ಥ್ಯ ರೋಹಿತ್ ಅವರ ವಿಶೇಷತೆ. ವಿಶ್ವಕಪ್, ಏಷ್ಯಾಕಪ್ ಹಾಗೂ ಐಸಿಸಿ ಟೂರ್ನಿಗಳಲ್ಲಿ ಅವರು ಆಡಿರುವ ಹಲವು ನಿರ್ಣಾಯಕ ಇನ್ನಿಂಗ್ಸ್ಗಳು ಭಾರತಕ್ಕೆ ಗೆಲುವು ತಂದುಕೊಟ್ಟಿವೆ. ಇಂತಹ ಆಟಗಾರನನ್ನು ಕೇವಲ ವಯಸ್ಸಿನ ಆಧಾರದ ಮೇಲೆ ಕೈಬಿಡುವುದು ಸರಿಯಾದ ನಿರ್ಧಾರವಾಗುವುದಿಲ್ಲ ಎಂಬ ವಾದ ಕೇಳಿಬರುತ್ತಿದೆ.
ಯುವ ನಾಯಕ ಶುಭಮನ್ ಗಿಲ್ಗೆ ರೋಹಿತ್ ಮಾರ್ಗದರ್ಶನ ಅಗತ್ಯ
ಭಾರತ ತಂಡದ ನಾಯಕತ್ವದ ಹೊಣೆ ಈಗ ಯುವ ಆಟಗಾರ ಶುಭಮನ್ ಗಿಲ್ ಅವರ ಹೆಗಲಿನ ಮೇಲಿದೆ. ಪ್ರತಿಭಾವಂತ ನಾಯಕನಾಗಿದ್ದರೂ ಅಂತಾರಾಷ್ಟ್ರೀಯ ಮಟ್ಟದ ಒತ್ತಡದ ಪಂದ್ಯಗಳನ್ನು ನಿಭಾಯಿಸಲು ಅನುಭವಿಗಳ ಮಾರ್ಗದರ್ಶನ ಅತ್ಯಗತ್ಯ. ಒಂದು ಕಾಲದಲ್ಲಿ ವಿರಾಟ್ ಕೊಹ್ಲಿಗೆ ಎಂ.ಎಸ್. ಧೋನಿ ಬೆಂಬಲ ನೀಡಿದ ರೀತಿಯಲ್ಲೇ, ಈಗ ಗಿಲ್ಗೆ ರೋಹಿತ್ ಶರ್ಮಾ ನೆರವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನಾಯಕತ್ವದ ಜೊತೆಗೆ ಫೀಲ್ಡ್ ಸೆಟ್ಟಿಂಗ್, ಪಂದ್ಯ ಪರಿಸ್ಥಿತಿಗೆ ತಕ್ಕ ತಂತ್ರ ರೂಪಿಸುವುದು, ಒತ್ತಡದ ಕ್ಷಣಗಳಲ್ಲಿ ತಂಡವನ್ನು ಸಮತೋಲನದಲ್ಲಿ ಇಡುವುದು ಸೇರಿದಂತೆ ಹಲವು ವಿಷಯಗಳಲ್ಲಿ ರೋಹಿತ್ ಅವರ ಅನುಭವ ಭಾರತಕ್ಕೆ ದೊಡ್ಡ ಬಲವಾಗಬಹುದು.
ಜೈಸ್ವಾಲ್ ಪ್ರತಿಭಾವಂತ, ಆದರೆ ಇನ್ನೂ ಅನುಭವದ ಕೊರತೆ
ಯಶಸ್ವಿ ಜೈಸ್ವಾಲ್ ಭಾರತ ಕ್ರಿಕೆಟ್ನ ಭವಿಷ್ಯದ ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಏಕದಿನ ಕ್ರಿಕೆಟ್ನಲ್ಲಿ ಅವರ ಅನುಭವ ಇನ್ನೂ ಸೀಮಿತವಾಗಿದೆ. ಕೆಲವೇ ಪಂದ್ಯಗಳ ಪ್ರದರ್ಶನದ ಆಧಾರದ ಮೇಲೆ ಹಿರಿಯ ಆಟಗಾರನ ಸ್ಥಾನವನ್ನು ಅವರಿಗೆ ಸಂಪೂರ್ಣವಾಗಿ ಒಪ್ಪಿಸುವುದು ಸೂಕ್ತವಲ್ಲ ಎನ್ನುವುದು ವರದಿಯ ಅಭಿಪ್ರಾಯ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನಿರಂತರ ಯಶಸ್ಸು ಸಾಧಿಸಲು ಸಮಯ ಬೇಕಾಗುತ್ತದೆ. ಹೀಗಾಗಿ ಜೈಸ್ವಾಲ್ರನ್ನು ನಿಧಾನವಾಗಿ ಬೆಳೆಸುತ್ತಾ, ರೋಹಿತ್ ಅವರ ಅನುಭವವನ್ನು ಇನ್ನೂ ಕೆಲವು ವರ್ಷ ಬಳಸಿಕೊಳ್ಳುವುದು ಭಾರತಕ್ಕೆ ಹೆಚ್ಚು ಲಾಭದಾಯಕವಾಗಬಹುದು ಎಂದು ವಿಶ್ಲೇಷಿಸಲಾಗಿದೆ.
ಡ್ರೆಸ್ಸಿಂಗ್ ರೂಮ್ನ ಸ್ಥಿರತೆಗೆ ರೋಹಿತ್ ಪ್ರಮುಖ ವ್ಯಕ್ತಿ
ರೋಹಿತ್ ಶರ್ಮಾ ಕೇವಲ ಬ್ಯಾಟರ್ ಮಾತ್ರವಲ್ಲ. ತಂಡದ ಹಿರಿಯ ಆಟಗಾರನಾಗಿ ಡ್ರೆಸ್ಸಿಂಗ್ ರೂಮ್ನಲ್ಲಿ ಅಪಾರ ಗೌರವ ಹೊಂದಿದ್ದಾರೆ. ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವುದು, ಒತ್ತಡದ ಸಂದರ್ಭಗಳಲ್ಲಿ ಆತ್ಮವಿಶ್ವಾಸ ತುಂಬುವುದು ಹಾಗೂ ತಂಡದೊಳಗಿನ ಸಮತೋಲನ ಕಾಪಾಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಅವರನ್ನು ಏಕಾಏಕಿ ತಂಡದಿಂದ ಕೈಬಿಟ್ಟರೆ ಅದು ಕೇವಲ ತಂಡದ ಬ್ಯಾಟಿಂಗ್ ಮೇಲಷ್ಟೇ ಅಲ್ಲ, ಡ್ರೆಸ್ಸಿಂಗ್ ರೂಮ್ನ ವಾತಾವರಣದ ಮೇಲೂ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಿಶ್ವಕಪ್ನಂತಹ ದೊಡ್ಡ ಟೂರ್ನಿಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಅನುಭವಿ ಆಟಗಾರರ ಉಪಸ್ಥಿತಿ ತಂಡಕ್ಕೆ ಹೆಚ್ಚುವರಿ ಆತ್ಮವಿಶ್ವಾಸ ನೀಡುತ್ತದೆ.
2027ರ ವಿಶ್ವಕಪ್ ಗುರಿಯಾಗಿಸಿಕೊಂಡೇ ಫಿಟ್ನೆಸ್ ಸುಧಾರಣೆ
ಕಳೆದ ಕೆಲವು ವರ್ಷಗಳಲ್ಲಿ ರೋಹಿತ್ ಶರ್ಮಾ ತಮ್ಮ ಫಿಟ್ನೆಸ್ ಮೇಲೆ ವಿಶೇಷ ಗಮನ ಹರಿಸಿದ್ದಾರೆ. ದೇಹದ ತೂಕವನ್ನು ಗಮನಾರ್ಹವಾಗಿ ಕಡಿಮೆ ಮಾಡಿಕೊಂಡಿರುವ ಅವರು ಮೈದಾನದಲ್ಲೂ ಹಿಂದಿಗಿಂತ ಹೆಚ್ಚು ಚುರುಕಾಗಿ ಕಾಣಿಸುತ್ತಿದ್ದಾರೆ. ದಕ್ಕೆ ಪ್ರಮುಖ ಕಾರಣ 2027ರ ಏಕದಿನ ವಿಶ್ವಕಪ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿಯೇ ಎನ್ನಲಾಗುತ್ತಿದೆ. ಫಿಟ್ನೆಸ್ ಸುಧಾರಣೆ, ಗಾಯಗಳಿಂದ ವೇಗವಾಗಿ ಚೇತರಿಸಿಕೊಳ್ಳುವ ಸಾಮರ್ಥ್ಯ ಹಾಗೂ ಆಟದ ಮೇಲಿನ ಬದ್ಧತೆ ಅವರು ಇನ್ನೂ ಉನ್ನತ ಮಟ್ಟದಲ್ಲಿ ಆಡಲು ಸಿದ್ಧರಾಗಿದ್ದಾರೆ ಎಂಬ ಸಂದೇಶವನ್ನು ನೀಡುತ್ತಿದೆ.
ಬಿಸಿಸಿಐಯಿಂದ ಇನ್ನೂ ಯಾವುದೇ ಅಧಿಕೃತ ನಿರ್ಧಾರ ಇಲ್ಲ
ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯದ ಬಗ್ಗೆ ಹಲವು ವರದಿಗಳು ಹರಿದಾಡುತ್ತಿದ್ದರೂ, ಬಿಸಿಸಿಐ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಇತ್ತೀಚೆಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕೂಡ ರೋಹಿತ್ ನಿವೃತ್ತಿ ಅಥವಾ ಅವರನ್ನು ತಂಡದಿಂದ ಕೈಬಿಡುವ ಕುರಿತು ನಡೆಯುತ್ತಿರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿ, ಅವರು ಭಾರತ ತಂಡದ ಯೋಜನೆಯ ಭಾಗವಾಗಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವು ವರದಿಗಳ ನಡುವೆಯೂ ಅಂತಿಮ ನಿರ್ಧಾರವನ್ನು ಬಿಸಿಸಿಐ ಆಯ್ಕೆ ಸಮಿತಿ ಮತ್ತು ತಂಡದ ಆಡಳಿತವೇ ತೆಗೆದುಕೊಳ್ಳಲಿದೆ.
ಭಾರತೀಯ ಕ್ರಿಕೆಟ್ ಈಗ ಪರಿವರ್ತನೆಯ ಹಂತದಲ್ಲಿದೆ. ಒಂದು ಕಡೆ ಯುವ ಆಟಗಾರರಿಗೆ ಅವಕಾಶ ನೀಡುವ ಅಗತ್ಯವಿದ್ದರೆ, ಮತ್ತೊಂದು ಕಡೆ ಅನುಭವಿ ಆಟಗಾರರ ಸೇವೆಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದೂ ಅಷ್ಟೇ ಮುಖ್ಯ. ರೋಹಿತ್ ಶರ್ಮಾ ಇನ್ನೂ ಭಾರತ ತಂಡಕ್ಕೆ ಪಂದ್ಯಗಳನ್ನು ಗೆಲ್ಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂಬುದನ್ನು ಅವರ ಇತ್ತೀಚಿನ ಪ್ರದರ್ಶನಗಳು ತೋರಿಸಿವೆ.
2027ರ ವಿಶ್ವಕಪ್ವರೆಗೆ ಭಾರತ ತಂಡದ ಯೋಜನೆ ಹೇಗಿರಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾರನ್ನು ಏಕದಿನ ತಂಡದಿಂದ ಕೈಬಿಡಬಾರದು ಎಂಬ ವಾದಕ್ಕೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ. ಅನುಭವ, ನಾಯಕತ್ವ ಮತ್ತು ದೊಡ್ಡ ಪಂದ್ಯಗಳಲ್ಲಿ ಗೆಲುವು ತಂದುಕೊಡುವ ಸಾಮರ್ಥ್ಯವನ್ನು ಪರಿಗಣಿಸಿದರೆ, ‘ಹಿಟ್ಮ್ಯಾನ್’ ಇನ್ನೂ ಭಾರತೀಯ ಏಕದಿನ ತಂಡಕ್ಕೆ ಅಗತ್ಯವಾದ ಆಟಗಾರ ಎನ್ನುವುದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ : ನಿವೃತ್ತಿ ಊಹಾಪೋಹಗಳ ನಡುವೆಯೂ ರೋಹಿತ್ಗೆ ಲಾಲ್ಚಂದ್ ರಾಜ್ಪುತ್ ಬೆಂಬಲ!



















