ತುಮಕೂರು : ಮಹಿಳೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಸಿಎಸ್ ಪುರದ ಹಿಂಡಸ್ಗೆರೆಯ ತೋಟದ ಮನೆಯಲ್ಲಿ ನಡೆದಿದೆ. ಮಂಜುಳ (38) ಕೊಲೆಯಾದ ಮಹಿಳೆ.
ಮಂಜುಳ ತನ್ನ ಗಂಡ ಕಾಲವಾದ ಬಳಿಕ ಮಗನ ಜೊತೆ ತೋಟದ ಮನೆಯಲ್ಲಿ ವಾಸವಾಗಿದ್ದಳು. ತೋಟ ನೋಡಿಕೊಂಡು ಜೀವನ ಮಾಡುತಿದ್ದ ಮಂಜುಳ, ಇತ್ತೀಚಿಗೆ ಮಗನಿಗೆ ಮದುವೆ ಕೂಡ ಮಾಡಿದ್ದಳು. ಇದೀಗ ಮಗ ತನ್ನ ಹೆಂಡತಿ ಮನೆಗೆ ಹೊಗಿದ್ದಾಗ ಹಂತಕ ಕೃತ್ಯ ಎಸಗಿ ಪರಾರಿಯಾಗಿದ್ದಾನೆ.
ನಿನ್ನೆ ಬೆಳಿಗ್ಗೆ ಮಂಜುಳನ ಗಂಡನ ಸಹೋದರ ಮನೆ ಬಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಸಿಎಸ್ ಪುರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ಎರಡು ವರ್ಷದಿಂದ ಮನೆಗೆ ಬಂದು ಹೋಗುತಿದ್ದ ಮಧು ಎಂಬಾತನ ಮೇಲೆ ಶಂಕೆ ಇದ್ದು, ಈತ ಮಂಜುಳ ತಂದೆಯಿಂದ ಒಂದು ಲಕ್ಷ ಹಣ ಪಡೆದಿದ್ದ ಎನ್ನಲಾಗಿದೆ. ಹಣ ಕೊಡೊದಾಗಿ ಹೇಳಿ ಸತಾಯಿಸುತಿದ್ದ ಮಂಜುಳ, ಹಾಗೂ ಮಧು ಮಧ್ಯೆ ಆಗಾಗ ಜಗಳವಾಗುತ್ತಿದ್ದರೂ ಪೊಲೀಸರಿಗೆ ದೂರು ನೀಡಿರಲಿಲ್ಲ.
ಶವ ಪತ್ತೆಯಾದ ದಿನದ ಹಿಂದಿನ ರಾತ್ರಿ ಸಹ ಮಂಜುಳ ಮನೆ ಬಳಿ ಮಧು ಬಂದಿದ್ದ. ಈ ವೇಳೆ ಹಣಕೊಡುವಂತೆ ಮಂಜುಳ ಗಲಾಟೆ ಮಾಡಿದ್ದರು. ಅದಾದ ಮರುದಿನ ಬೆಳಿಗ್ಗೆ ಮಂಜುಳ ಶವವಾಗಿ ಪತ್ತೆಯಾಗಿದ್ದಾರೆ. ಹೀಗಾಗಿ ಆತನೇ ಕೊಲೆ ಮಾಡಿರೋ ಅನುಮಾನದ ಮೇಲೆ ದೂರು ದಾಖಲಾಗಿದೆ. ಸದ್ಯ ಎಫ್ಐಆರ್ ದಾಖಲಿಸಿಕೊಂಡ ಸಿಎಸ್ ಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ದೈವವನ್ನು ಅಣಕಿಸಿದ ರಣ್ವೀರ್ ಸಿಂಗ್ ವಿರುದ್ದ ದೂರು ದಾಖಲು!



















