ಬೆಂಗಳೂರು : ಮಾಜಿ ಸಚಿವ ಕೆ.ಎನ್ ರಾಜಣ್ಣ ಮತ್ತೆ ಸಚಿವ ಸ್ಥಾನ ಪಡೆಯಲು ತೀವ್ರ ಕಸರತ್ತು ಆರಂಭಿಸಿದ್ದಾರೆ ಎಂಬ ಚರ್ಚೆ ರಾಜ್ಯ ರಾಜಕೀಯದಲ್ಲಿ ಜೋರಾಗಿದೆ. ತುಮಕೂರು ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸುಮಾರು 20 ನಿಮಿಷಗಳ ಕಾಲ ನಡೆದ ರಹಸ್ಯ ಮಾತುಕತೆ ಇದೀಗ ಕಾಂಗ್ರೆಸ್ ವಲಯದಲ್ಲಿ ಕುತೂಹಲ ಹುಟ್ಟಿಸಿದೆ. ಸಚಿವ ಸ್ಥಾನ ಕಳೆದುಕೊಂಡ ಬಳಿಕ ಮತ್ತೆ ಸಂಪುಟಕ್ಕೆ ಸೇರ್ಪಡೆಯಾಗಲು ರಾಜಣ್ಣ ಹಲವು ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಸಚಿವ ಸ್ಥಾನ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಮಾಜಿ ಸಚಿವ ಕೆ.ಎನ್ ರಾಜಣ್ಣ ವಿಶೇಷ ಮನವಿ ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲೇ ದೆಹಲಿಗೆ ತೆರಳಿ ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲಿರುವ ಸಿಎಂ, ಆ ವೇಳೆ ತನ್ನ ಹೆಸರನ್ನೂ ಪ್ರಸ್ತಾಪಿಸಬೇಕೆಂದು ರಾಜಣ್ಣ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ತನ್ನಿಂದ ಯಾವುದೇ ತಪ್ಪು ಆಗದೇ ಇದ್ದರೂ, ಯಾರೋ ಮಾಡಿದ ತಪ್ಪಿನ ಪರಿಣಾಮವಾಗಿ ಸಚಿವ ಸ್ಥಾನ ಕಳೆದುಕೊಳ್ಳುವಂತಾಯಿತು ಎಂದು ರಾಜಣ್ಣ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ತಪ್ಪು ಅರ್ಥೈಸಿಕೆಯ ಪರಿಣಾಮ ತನ್ನ ರಾಜಕೀಯ ಬದುಕಿಗೆ ಮಸಿ ಬಿದ್ದಿದೆ. ಹೀಗಾಗಿ ವರಿಷ್ಠರೊಂದಿಗೆ ಮಾತನಾಡಿ ಮತ್ತೆ ಸಚಿವ ಸ್ಥಾನ ಕೊಡಿಸುವಂತೆ ಸಿಎಂ ಬಳಿ ರಾಜಣ್ಣ ಮನವಿ ಮಾಡಿದ್ದಾರೆ ಎಂದು ರಾಜಕೀಯ ಮೂಲಗಳು ತಿಳಿಸಿವೆ. ರಾಜಣ್ಣ ಮನವಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, “ಹೈಕಮಾಂಡ್ ಕರೆದಾಗ ಈ ವಿಚಾರವನ್ನು ಅಲ್ಲಿ ಮಾತನಾಡುತ್ತೇನೆ” ಎಂದು ಭರವಸೆ ನೀಡಿರುವ ಮಾಹಿತಿಯೂ ಹರಿದಾಡುತ್ತಿದೆ.
ರಾಜಣ್ಣಗೆ ಮತ್ತೆ ಸಚಿವ ಸ್ಥಾನ ಸಿಗುತ್ತಾ?
ಈಗಾಗಲೇ ಸಂಪುಟ ಪುನಾರಚನೆ ಕುರಿತು ಕಾಂಗ್ರೆಸ್ ವಲಯದಲ್ಲಿ ಚರ್ಚೆಗಳು ಗರಿಗೆದರಿದ್ದು, ಶೀಘ್ರದಲ್ಲೇ ಸಿಎಂ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಒಂದು ವೇಳೆ ಸಂಪುಟ ಪುನಾರಚನೆ ನಡೆದರೆ ಮಾಜಿ ಸಚಿವ ಕೆ.ಎನ್ ರಾಜಣ್ಣಗೆ ಮತ್ತೊಮ್ಮೆ ಅವಕಾಶ ಸಿಗುತ್ತಾ ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಯಾಗಿದೆ. ಸಿಎಂ ಜೊತೆ ನಡೆದ ರಹಸ್ಯ ಮಾತುಕತೆ, ದೆಹಲಿ ಭೇಟಿ, ಹೈಕಮಾಂಡ್ ಮಟ್ಟದ ಚರ್ಚೆಗಳು—ಇವೆಲ್ಲವೂ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಆನೇಕಲ್ ಕ್ರಿಕೆಟ್ ಸ್ಟೇಡಿಯಂ ಯೋಜನೆಗೆ KRS ಪಕ್ಷ ವಿರೋಧ – ಬನ್ನೇರುಘಟ್ಟ ಅರಣ್ಯ ಉಳಿಸಲು ಆಗ್ರಹ!



















