ಚಿಕ್ಕಬಳ್ಳಾಪುರ: ವ್ಯಕ್ತಿಯೋರ್ವ ಅಕ್ರಮ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಹತ್ತಿರವೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಚಾಮರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಠಾಣೆ (Police Station) ಹತ್ತಿರವೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ. ಕರನಂಜಿಪುರದ ನಿವಾಸಿ ವಿದ್ಯಾ ಎಂಬ ಮಹಿಳೆಯನ್ನು ಸೋಮವಾರಪೇಟೆ (Somwarpet) ನಿವಾಸಿ ಗಿರೀಶ್ ಕೊಲೆ ಮಾಡಿದ್ದಾನೆ.
8 ವರ್ಷಗಳ ಹಿಂದೆ ಗಿರೀಶ್ ಮತ್ತು ವಿದ್ಯಾ ಮದುವೆಯಾಗಿದ್ದರು. ವಿದ್ಯಾರಿಗೆ ದೊಡ್ಡಮೂಡಹಳ್ಳಿ ನಿವಾಸಿ ಶ್ರೀನಾಥ್ ಜೊತೆ ಅಕ್ರಮ ಸಂಬಂಧವಿತ್ತು ಎಂಬ ಆರೋಪವಿದೆ. ಮೂರು ತಿಂಗಳ ಹಿಂದೆ ಶ್ರೀನಾಥ್ ಜೊತೆ ವಿದ್ಯಾ ಓಡಿ ಹೋಗಿದ್ದರು. ಹೀಗಾಗಿ ಪ್ರಕರಣ ದಾಖಲಾಗಿತ್ತು. ಕೊಯಮತ್ತೂರಿನಲ್ಲಿದ್ದ ವಿದ್ಯಾ ಹಾಗೂ ಪ್ರಿಯಕರ ಶ್ರೀನಾಥ್ ನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಠಾಣೆಗೆ ಕರೆ ತಂದು ಬುದ್ಧಿ ಹೇಳಿದ್ದರು. ಈ ವೇಳೆ ವಿದ್ಯಾ ತನ್ನ ಪತಿಯೊಂದಿಗೆ ಹೋಗಲು ನಿರಾಕರಿಸಿದ್ದಳು ಎನ್ನಲಾಗಿದೆ.
ಆನಂತರ ಮಹಿಳೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಗಿರೀಶ್ ಮತ್ತು ವಿದ್ಯಾರನ್ನು ಠಾಣೆಗೆ ಕರೆಸಿಕೊಂಡು ಬುದ್ದಿವಾದ ಸಹ ಹೇಳಲಾಗಿತ್ತು. ಈ ವೇಳೆ ಠಾಣೆಯಿಂದ ಪತ್ನಿ ಹೊರ ಬರುತ್ತಿದ್ದಂತೆ ಪತಿಯು ಕೊಚ್ಚಿ ಕೊಲೆ ಮಾಡಿದ್ದಾನೆ. ಪತ್ನಿ ಓಡಿ ಹೋಗಿದ್ದಕ್ಕೆ ಪತಿ ತೀವ್ರ ಅವಮಾನ ಅನುಭವಿಸಿದ್ದ. ಹೀಗಾಗಿ ಕೊಲೆ ಮಾಡಿದ್ದ ಎನ್ನಲಾಗಿದೆ.