ಮೆಡಿಟರೇನಿಯನ್ ಸಮುದ್ರದ ಸುಂದರ ಪ್ರವಾಸಿ ತಾಣ ಈ ಟರ್ಕಿ…ಕೇವಲ 78 ಲಕ್ಷ ಜನಸಂಖ್ಯೆಯ ಈ ದೇಶ ಈಗ ಜಗತ್ತಿನಾದ್ಯಂತ ಸುದ್ದಿ ಮಾಡ್ತಿದೆ. ಹೌದು! ಕೇವಲ ಪ್ರವಾಸಿಗರ ಪಟ್ಟಿಯಲ್ಲಿರುತ್ತಿದ್ದ ಟರ್ಕಿ ಇವತ್ತು ಏಕಾಏಕಿ, ಅಮೆರಿಕ ಮತ್ತು ಭಾರತದ ಹಿಟ್ ಲಿಸ್ಟ್ ನಲ್ಲಿ ಬಂದದ್ದು ಹೇಗೆ. ಪಹಲ್ಗಾಮ್ ದುರಂತದ ಬಳಿಕ ಪಾಕ್ ವಿರುದ್ಧ ಪ್ರತೀಕಾರಕ್ಕೆ ಭಾರತ ರಣತಂತ್ರ ರೂಪಿಸುತ್ತಿದೆ. ಇಂತಹ ಹೊತ್ತಲೇ ಟರ್ಕಿ ಪಾಕಿಗೆ ಚಾಚಿದ ನೆರವಿನ ಹಸ್ತ, ಭಾರತದ ಸಹೋದರತ್ವವನ್ನು ಅಣಕಿಸಿದಂತಾಗಿದೆ.
ಕರಾಚಿಗೆ ಬಂತು ಟರ್ಕಿಯ ಯುದ್ಧ ನೌಕೆ
ಪಹಲ್ಗಾಮ್ ದಾಳಿ ಬಳಿಕ ಚೀನಾ ಹೊರತು ಪಡಿಸಿ ಉಳಿದೆಲ್ಲ ದೇಶಗಳು ಪಾಕ್ ನಿಂದ ಅಂತರ ಕಾಯ್ದುಕೊಂಡಿದ್ದವು. ಆದರೆ, ಸದ್ದಿಲ್ಲದೆ ಟರ್ಕಿ ತನ್ನ ಬೃಹತ್ ಸರಕು ಸೇವಾ ವಿಮಾನ ಸಿ 120ಯನ್ನು ರಾವಲ್ಪಿಯಂಡಿಯಲ್ಲಿ ಲ್ಯಾಂಡ್ ಮಾಡಿತ್ತು. ಈ ಮೂಲಕ ತನ್ನ ಸೇನಾ ನೆರವಿನ ಹಸ್ತವನ್ನು ಪಾಕ್ ಗೆ ಚಾಚಿತ್ತು. ಇದು ನಿಜಕ್ಕೂ ಭಾರತದ ಕಣ್ಣು ಕೆಂಪಗಾಗಿಸಿತ್ತು. ಇದರ ಬೆನ್ನಲ್ಲೇ ಇಂಧನ ಬರ್ತಿಗೆ ವಿಮಾನ ಲ್ಯಾಂಡ್ ಆಗಿತ್ತು ಅಂತಾ ಟರ್ಕಿ ಸಬೂಬು ನೀಡಿತ್ತು.
ಆದ್ರೆ ಟರ್ಕಿಯ ಕಳ್ಳಾಟವೀಗ ಮತ್ತೆ ಬಯಲಾಗಿದೆ, ತನ್ನ ಸೇನೆಯ ಟಿಸಿಜಿ ಬಯಕಡ ಯುದ್ಧ ನೌಕೆಯನ್ನು ಪಾಕ್ ಗೆ ರವಾನಿಸಿದ್ದು, ಆ ನೌಕೆ ಕರಾಚಿಯಲ್ಲಿ ಲಂಗರು ಹಾಕಿದೆ. ಈ ಮೂಲಕ ಭಾರತ 2023ರಲ್ಲಿ ಟರ್ಕಿಯಲ್ಲಿ ಸಂಭವಿಸಿದ್ದ ಭೂಕಂಪದ ವೇಳೆ ನೀಡಿದ್ದ ನೆರವಿನ ಹಸ್ತವನ್ನು ಮರೆತಿದೆ. ಎರಡು ದೇಶಗಳ ನಡುವಿನ ಸಹೋದರತ್ವಕ್ಕೆ ಟರ್ಕಿ ಎಳ್ಳುನೀರು ಬಿಟ್ಟಿದೆ.
ಮುಸ್ಲಿಂ ರಾಷ್ಟ್ರಗಳ ನಾಯಕತ್ವಕ್ಕೆ ಟರ್ಕಿ ಹಪಹಪಿ
ಮೇಲ್ನೋಟಕ್ಕೆ ಟರ್ಕಿ ರಾಜಕೀಯ ಇಚ್ಛಾಶಕ್ತಿಯಿಲ್ಲದ ತಟಸ್ಥ ರಾಷ್ಟ್ರ. ಆದ್ರೆ ಅದು ವಾಸ್ತವವಲ್ಲ. ಸಮಸ್ತ ಮುಸ್ಲಿಂ ರಾಷ್ಟ್ರಗಳ ನಾಯಕತ್ವವನ್ನು ತನ್ನ ಪಾಲಾಗಿಸಿಕೊಳ್ಳೋ ಹಪಹಪಿ ಟರ್ಕಿಗಿದೆ. ಸದ್ಯಕ್ಕೆ ಸೌದಿ ರಾಷ್ಟ್ರಗಳೇ ಮುಸ್ಲಿಂ ದೇಶಗಳ ಸಾರ್ವಭಾಮತ್ವ ಹೊಂದಿವೆ. ಆದ್ರೆ ಇದು ಟರ್ಕಿಗೆ ನುಂಗಲಾರದ ತುತ್ತಾಗಿದೆ. ಹೇಗಾದ್ರು ಮಾಡಿ ಸೌದಿಯನ್ನು ಮೀರಿ ತನ್ನ ಪಾರುಪತ್ಯ ಸಾಧಿಸಲು ಟರ್ಕಿಗೆ ಪಾಕ್ ನೆರವು ಅಗತ್ಯ. ಹೀಗಾಗಿ ಪಾಕ್ ಸೇರಿದಂತೆ, ಸಿರಿಯಾ, ಇರಾಕ್ ಗೂ ಟರ್ಕಿ ಅಭಯ ನೀಡ್ತಿದೆ. ಇದೊಂದೇ ಕಾರಣಕ್ಕೆ ಟರ್ಕಿ ಭಾರತದ ಶತ್ರುತ್ವ ಕಟ್ಟಿಕೊಳ್ಳೋದಕ್ಕೆ ಸಿದ್ಧ ಎನ್ನುವಂತೆ ವರ್ತಿಸಿದ್ತಿದೆ.