ಬೆಂಗಳೂರು : ನಗರದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ತಯಾರಿ ಜೋರಾಗಿದ್ದು, ಹಬ್ಬಕ್ಕೆ ಒಂದೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಹೆಚ್ಚಾಗಿದೆ. ಗಾಂಧಿಬಜಾರ್, ಬಸವನಗುಡಿ, ಕೆ.ಆರ್. ಮಾರ್ಕೆಟ್ ಸೇರಿದಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂದಿದೆ. ಲಕ್ಷ್ಮೀ ಅಲಂಕಾರಿಕ ವಸ್ತುಗಳು, ಹೂವು ಹಾಗೂ ಹಣ್ಣುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಹಬ್ಬದ ಸಂಭ್ರಮದ ನಡುವೆಯೇ ಹೂವು-ಹಣ್ಣುಗಳ ಬೆಲೆ ಭಾರೀ ಏರಿಕೆಯಾಗಿದೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕನಕಾಂಬರದ ಬೆಲೆ ₹2 ಸಾವಿರದಿಂದ ₹5–6 ಸಾವಿರಕ್ಕೆ ಏರಿಕೆಯಾಗಿದೆ. ಮಲ್ಲಿಗೆ ₹500ರಿಂದ ₹1,200ಕ್ಕೆ ಹಾಗೂ ಸೇವಂತಿಗೆ ₹150ರಿಂದ ₹450ಕ್ಕೆ ಜಿಗಿದಿದೆ.

ಇನ್ನೊಂದೆಡೆ ಹಣ್ಣುಗಳ ಬೆಲೆಯಲ್ಲೂ ಭಾರೀ ಏರಿಕೆ ಕಂಡುಬಂದಿದೆ. ಸೇಬು ₹110ರಿಂದ ₹270ಕ್ಕೆ, ದಾಳಿಂಬೆ ₹120ರಿಂದ ₹260ಕ್ಕೆ, ಕಿತ್ತಳೆ ₹80ರಿಂದ ₹180ಕ್ಕೆ ಹೆಚ್ಚಾಗಿದೆ. ಏಲಕ್ಕಿ ಬಾಳೆ ₹50ರಿಂದ ₹100ಕ್ಕೆ ಹಾಗೂ ಮೂಸಂಬಿ ₹100ರಿಂದ ₹150ಕ್ಕೆ ಏರಿಕೆಯಾಗಿದೆ.
ಹಬ್ಬದ ಖರೀದಿಗೆ ಮಾರುಕಟ್ಟೆಗಳಲ್ಲಿ ಜನರು ಮುಗಿಬೀಳುತ್ತಿರುವ ಬೆನ್ನಲ್ಲೇ ಹೂವು ಮತ್ತು ಹಣ್ಣುಗಳ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಹೆಚ್ಚುವರಿ ಹೊರೆಯಾಗಿದ್ದು, ಹಬ್ಬದ ಹೆಸರಿನಲ್ಲಿ ಬೆಲೆ ಏರಿಕೆಯಾಗುತ್ತಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ಗಾಯಾಳು ಜೆಮಿಮಾ ಜಾಗಕ್ಕೆ ಪ್ರತಿಕಾ ರಾವಲ್ ; ಇದು ಆಯ್ಕೆ ಸಮಿತಿಯ ಜೂಜಾಟವೇ?


















