ದಾವಣಗೆರೆ : ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧದ ಪೋಕ್ಸೋ ಪ್ರಕರಣ ಈಗ ಅಂತಿಮ ಹಂತಕ್ಕೆ ತಲುಪಿದೆ. ಶ್ರೀಗಳ ಜಾಮೀನು ರದ್ದು ಕೋರಿ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಸಲ್ಲಿಸಿದ್ದ ಅರ್ಜಿಯ ಮಹತ್ವದ ತೀರ್ಪನ್ನು ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೋ ನ್ಯಾಯಾಲಯ ಇಂದು ಪ್ರಕಟಿಸಲಿದೆ.
ಪೊಲೀಸರು ಈಗಾಗಲೇ 410 ಪುಟಗಳ ಬಲವಾದ ಚಾರ್ಜ್ ಶೀಟ್ ಸಲ್ಲಿಸಿದ್ದು, ಇಂದು ಕೋರ್ಟ್ ಏನಾದರೂ ಜಾಮೀನು ರದ್ದು ಮಾಡಿದರೆ ವಚನಾನಂದ ಶ್ರೀಗಳಿಗೆ ಜೈಲು ಸೇರೋ ಭೀತಿ ಎದುರಾಗಿದೆ.
ಹಿನ್ನೆಲೆ :
ಪಂಚಮಸಾಲಿ ಪೀಠದ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳ ಮೇಲೆ ವಚನಾನಂದ ಸ್ವಾಮೀಜಿ ಲೈಂಗಿಕ ದೌರ್ಜನ್ಯದ ಜೊತೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ, ಹರಿಹರ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಸ್ ದಾಖಲಾಗುವ ಮುನ್ನವೇ ವಚನಾನಂದ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆದು, ತನಿಖೆಗೆ ಸಹಕಾರ ಕೊಟ್ಟಿದ್ದರು. ಅಲ್ಲದೇ ನಿರೀಕ್ಷಣಾ ಜಾಮೀನು ರದ್ದುಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮುಗಿದಿದ್ದು, ಇಂದು ಆದೇಶ ಪ್ರಕಟವಾಗಲಿದೆ. ಜೂನ್ 11ರಂದೇ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ಎರಡೂ ಕಡೆಯ ವಾದ ಪ್ರತಿವಾದವನ್ನು ಆಲಿಸಿದ್ದಾರೆ.
ಸಂತ್ರಸ್ತ ಬಾಲಕರ ಪರವಾಗಿ ವಾದ ಮಂಡನೆ ಮಾಡಿರುವ ಸರ್ಕಾರಿ ಅಭಿಯೋಜಕರಾದ ಬಸವರಾಜ್ ವಚನಾನಂದ ಸ್ವಾಮೀಜಿಗೆ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸಬೇಕು. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದು. ಜಾಮೀನಿನ ಮೇಲೆ ಹೊರಗಿದ್ದರೆ ಸಂತ್ರಸ್ತರಿಗೆ ಬೆದರಿಕೆ ಹಾಗೂ ಅಮೀಷ ಒಡ್ಡುವ ಮೂಲಕ ಪ್ರಕರಣವನ್ನು ಹಾದಿ ತಪ್ಪಿಸುವ ಸಾಧ್ಯತೆ ಇದೆ ಎಂದು ವಾದ ಮಂಡನೆ ಮಾಡಿದ್ದು, ಜೊತೆಗೆ ಸಂತ್ರಸ್ತರ ತಾಯಿ ದೂರದಾರರಾಗಿದ್ದು, ಅವರಿಗೆ ಸ್ವಾಮೀಜಿ ಬೆಂಬಲಿಗರು ಬೆದರಿಕೆ ಕರೆ ಮಾಡಿರುವ ಆಡಿಯೋವನ್ನು ಪೆನ್ ಡ್ರೈವ್ ಮೂಲಕ ನ್ಯಾಯಾಲಯದ ಮುಂದೆ ಒಪ್ಪಿಸಿದ್ದಾರೆ.
ಇತ್ತ ಸ್ವಾಮೀಜಿ ಪರ ವಕೀಲರಾದ ಎಸ್ವಿ ಪಾಟೀಲ್ ಕೂಡ ವಾದ ಮಂಡನೆ ಮಾಡಿದ್ದು, ವಚನಾನಂದ ಸ್ವಾಮೀಜಿಗಳನ್ನು ಮಠದಿಂದ ಹೊರ ಹಾಕಲು ಟ್ರಸ್ಟಿಗಳು ನಡೆಸಿದ ಷಡ್ಯಂತ್ರ ಇದು ಎಂದಿದ್ದಾರೆ. ಎರಡೂ ಕಡೆಯ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಇಂದಿಗೆ ಆದೇಶ ಕಾಯ್ದಿರಿಸಿದ್ದಾರೆ.
ಇನ್ನು ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಹೈಕೋರ್ಟ್ಗೆ ಸಂತ್ರಸ್ತ ಬಾಲಕನ ತಾಯಿ ಅರ್ಜಿ ಸಲ್ಲಿಕೆ ಮಾಡಿದ್ದು, ಸ್ವಾಮೀಜಿ ವಿರುದ್ಧ ಗಂಭೀರ ಸೆಕ್ಷನ್ಗಳುಳ್ಳ ಪೋಕ್ಸೋ ಕೇಸ್ ದಾಖಲಾಗಿದೆ. ದೂರು ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ಕೊಟ್ಟಿದ್ದಾರೆ. ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಕೊಟ್ಟ ರೀತಿ ಆಘಾತಕಾರಿ, ಮೇಲ್ನೋಟಕ್ಕೆ ನಿರೀಕ್ಷಣಾ ಜಾಮೀನು ನೀಡಿದ ವಿಧಾನ ಸರಿಯಲ್ಲ ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಇಂದು ಮಧ್ಯಾಹ್ನ ನ್ಯಾಯಾಧೀಶರು ನೀಡುವ ಆದೇಶದ ಮೇಲೆ ವಚನಾನಂದ ಸ್ವಾಮೀಜಿಗೆ ಜೈಲು ಅಥವಾ ಜಾಮೀನಿನ ಭವಿಷ್ಯ ನಿಂತಿದೆ.
ಇದನ್ನೂ ಓದಿ : ಅಮೆರಿಕದ ಮಿಲಿಟರಿ ಕಮಾಂಡ್ ಹೆಸರಿನಿಂದ ‘ಇಂಡೋ’ ಪದ ಔಟ್ : ಕ್ವಾಡ್ ಒಕ್ಕೂಟದ ಭವಿಷ್ಯದ ಬಗ್ಗೆ ಶಶಿ ತರೂರ್ ಆತಂಕ!


















