ಅಹಮದಾಬಾದ್ : ಹದಿನೆಂಟು ವರ್ಷಗಳ ಸುದೀರ್ಘ ಕಾದುವಿಕೆಯ ಬಳಿಕ ತಮ್ಮ ಚೊಚ್ಚಲ ಟ್ರೋಫಿ ಎತ್ತಿಹಿಡಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ, ಇದೀಗ ಕೇವಲ ಹನ್ನೆರಡು ತಿಂಗಳ ಅಂತರದಲ್ಲಿಯೇ ತಮ್ಮ ಎರಡನೇ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಆದರೆ ಈ ಮಹತ್ವದ ಕದನಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ಆಟಗಾರರು ವಿಮಾನಯಾನ ವಿಳಂಬದಿಂದಾಗಿ ತೀವ್ರ ದೈಹಿಕ ಹಾಗೂ ಮಾನಸಿಕ ಆಯಾಸಕ್ಕೆ ಒಳಗಾಗಿದ್ದಾರೆ.
ಕ್ವಾಲಿಫೈಯರ್ 2 ಪಂದ್ಯದ ಬಳಿಕ ಮುಲ್ಲನ್ಪುರದಿಂದ ಅಹಮದಾಬಾದ್ಗೆ ಪ್ರಯಾಣ ಬೆಳೆಸಿದ್ದ ಗುಜರಾತ್ ತಂಡ, ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ನಿಗದಿತ ಸಮಯಕ್ಕಿಂತ ಬಹಳ ತಡವಾಗಿ ತಲುಪಿದೆ. ಶನಿವಾರ ಮಧ್ಯಾಹ್ನದ ವೇಳೆಗೆ ಅಹಮದಾಬಾದ್ ತಲುಪಬೇಕಿದ್ದ ಶುಭಮನ್ ಗಿಲ್ ನೇತೃತ್ವದ ತಂಡ, ರಾತ್ರಿ 10:45ರ ಸುಮಾರಿಗೆ ಬಂದಿಳಿದು, ಮಧ್ಯರಾತ್ರಿ ಹೊತ್ತಿಗೆ ಹೋಟೆಲ್ ಸೇರಿಕೊಳ್ಳುವಂತಾಯಿತು.
ವಿಶ್ರಾಂತಿ ಕೊರತೆ ಹಾಗೂ ಆರ್ಸಿಬಿಗೆ ಲಾಭ
ಮತ್ತೊಂದೆಡೆ, ಮಂಗಳವಾರ (ಮೇ 26) ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಮಣಿಸಿದ್ದ ಆರ್ಸಿಬಿ ತಂಡವು ಅಂದಿನಿಂದಲೇ ಅಹಮದಾಬಾದ್ನಲ್ಲಿದ್ದು, ಫೈನಲ್ ಪಂದ್ಯಕ್ಕಾಗಿ ಭರ್ಜರಿ ತಾಲೀಮು ನಡೆಸುವ ಜೊತೆಗೆ ಸಾಕಷ್ಟು ವಿಶ್ರಾಂತಿಯನ್ನೂ ಪಡೆದುಕೊಂಡಿದೆ. ಆದರೆ ಗುಜರಾತ್ ಟೈಟಾನ್ಸ್ ತಂಡವು ಎರಡನೇ ಕ್ವಾಲಿಫೈಯರ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಠಿಣ ಹೋರಾಟ ನಡೆಸಿ ಫೈನಲ್ಗೆ ಲಗ್ಗೆಯಿಟ್ಟಿತ್ತು. ಈ ಪ್ರಯಾಸದ ಜೊತೆಗೆ ಹವಾಮಾನ ವೈಪರೀತ್ಯದಿಂದ ಉಂಟಾದ ಪ್ರಯಾಣದ ವಿಳಂಬವು ತಂಡದ ಆಟಗಾರರನ್ನು ಮತ್ತಷ್ಟು ಬಳಲಿಸಿದೆ. ಫೈನಲ್ನಂತಹ ಮಹತ್ವದ ಪಂದ್ಯಕ್ಕೆ ಸಜ್ಜಾಗಲು ಗುಜರಾತ್ ತಂಡಕ್ಕೆ ಸಾಕಷ್ಟು ಸಮಯ ಹಾಗೂ ವಿಶ್ರಾಂತಿ ಸಿಗದೇ ಇರುವುದು ಸವಾಲಾಗಿ ಪರಿಣಮಿಸಿದೆ.
ಮೀಸಲು ದಿನಕ್ಕೆ ಪಂದ್ಯ ಮುಂದೂಡಬೇಕಿತ್ತು ಎಂದ ಗವಾಸ್ಕರ್
ಗುಜರಾತ್ ಟೈಟಾನ್ಸ್ ತಂಡದ ಈ ಪರಿಸ್ಥಿತಿಯನ್ನು ಗಮನಿಸಿದ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಬಿಸಿಸಿಐ ನಿರ್ಧಾರದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಈ ಐಪಿಎಲ್ ಫೈನಲ್ ಪಂದ್ಯವನ್ನು ಮೀಸಲು ದಿನವಾದ ಸೋಮವಾರಕ್ಕೆ (ಜೂನ್ 1) ಮುಂದೂಡಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಆಟಗಾರರಿಗೆ ಖಂಡಿತವಾಗಿಯೂ ವಿಶ್ರಾಂತಿಯ ಅಗತ್ಯವಿದೆ. ವಿಮಾನ ಯಾವಾಗ ಹಾರಾಟ ನಡೆಸುತ್ತದೆ ಎಂಬ ಅನಿಶ್ಚಿತತೆಯು ಆಟಗಾರರಲ್ಲಿ ಆತಂಕವನ್ನು ಮೂಡಿಸುತ್ತದೆ. ಇದರಿಂದ ದೈಹಿಕ ಆಯಾಸದ ಜೊತೆಗೆ ಮಾನಸಿಕವಾಗಿಯೂ ಅವರು ಕುಗ್ಗುತ್ತಾರೆ. ಫೈನಲ್ ಪಂದ್ಯಕ್ಕೆ ಮೀಸಲು ದಿನವಿದ್ದಾಗ, ಈ ಅನಿರೀಕ್ಷಿತ ಘಟನೆಯನ್ನು ಪರಿಗಣಿಸಿ ಗುಜರಾತ್ ಟೈಟಾನ್ಸ್ ತಂಡಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪಂದ್ಯವನ್ನು ಒಂದು ದಿನ ಮುಂದೂಡಬೇಕಿತ್ತು,” ಎಂದು ಗವಾಸ್ಕರ್ ‘ಇಂಡಿಯಾ ಟುಡೇ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ನಿಖರ ಬೌಲಿಂಗ್ ತಂತ್ರದ ಮೂಲಕ ಗುಜರಾತ್ ಟೈಟನ್ಸ್ ಪಡೆಯನ್ನು ಕಟ್ಟಿಹಾಕಿದ ಆರ್ಸಿಬಿ!



















