ಬೆಂಗಳೂರು : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಮುಂಬರುವ ಟಿ20 ಸರಣಿಗಳಿಗೆ ಟೀಮ್ ಇಂಡಿಯಾದ ನೂತನ ನಾಯಕನನ್ನಾಗಿ ಶ್ರೇಯಸ್ ಅಯ್ಯರ್ ಅವರನ್ನು ನೇಮಕ ಮಾಡಿದೆ. ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ, ಶ್ರೇಯಸ್ ಅವರ ಸಹೋದರಿ ಶ್ರೇಷ್ಠಾ ಅಯ್ಯರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಹಾಗೂ ಭಾವುಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಸಹೋದರನ ಏಳು-ಬೀಳುಗಳು, ಗಾಯದ ಸಮಸ್ಯೆಗಳು ಹಾಗೂ ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರಿಸಿ ನಾಯಕನ ಪಟ್ಟಕ್ಕೇರಿದ ಸ್ಫೂರ್ತಿದಾಯಕ ಪಯಣವನ್ನು ಅವರು ಈ ಪೋಸ್ಟ್ನಲ್ಲಿ ಮೆಲುಕು ಹಾಕಿದ್ದಾರೆ. ಕೇವಲ ಕ್ರಿಕೆಟ್ ಪ್ರೀತಿಸುತ್ತಿದ್ದ ಸಾಮಾನ್ಯ ಹುಡುಗನೊಬ್ಬ ಇಂದು ಭಾರತ ತಂಡದ ನಾಯಕನಾಗಿ ಬೆಳೆದು ನಿಂತಿರುವ ಬಗೆಯನ್ನು ಅವರು ಕೊಂಡಾಡಿದ್ದಾರೆ.
ಮೂರು ಗಂಭೀರ ಗಾಯ, ಆದರೂ ಕುಗ್ಗದ ಛಲ
ಮೈದಾನದಲ್ಲಿ ಆಟಗಾರನೊಬ್ಬನ ಯಶಸ್ಸು ಮಾತ್ರವೇ ಜನರಿಗೆ ಕಾಣುತ್ತದೆ, ಆದರೆ ಆ ಯಶಸ್ಸಿನ ಹಿಂದಿರುವ ನೋವು, ತ್ಯಾಗ ಹಾಗೂ ಒಂಟಿ ಹೋರಾಟಗಳು ಯಾರಿಗೂ ತಿಳಿಯುವುದಿಲ್ಲ ಎಂದು ಶ್ರೇಷ್ಠಾ ಬರೆದುಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ 3 ಗಂಭೀರ ಗಾಯದ ಸಮಸ್ಯೆಗಳನ್ನು ಉಲ್ಲೇಖಿಸಿರುವ ಅವರು, ಗಾಯದ ಸಮಸ್ಯೆಯಿಂದ ಕುಟುಂಬವೇ ಕಣ್ಣೀರು ಹಾಕುವ ಪರಿಸ್ಥಿತಿಯಲ್ಲಿದ್ದಾಗಲೂ ಶ್ರೇಯಸ್ ನಗುತ್ತಲೇ ‘ಯಾರ್, ಮೈ ಏಕ್ದಮ್ ಮಸ್ತ್ ಹೂಂ, ಮೈ ಫಿಟ್ ಹೂಂ’ (ನಾನು ಚೆನ್ನಾಗಿದ್ದೇನೆ, ಸಂಪೂರ್ಣ ಫಿಟ್ ಆಗಿದ್ದೇನೆ) ಎಂದು ಹೇಳುತ್ತಿದ್ದ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ನಿಂದ ಹೊರಬಿದ್ದು, ಶಾರ್ಟ್ ಪಿಚ್ ಎಸೆತಗಳ ಕುರಿತು ಎದ್ದ ಟೀಕೆಗಳನ್ನು ಮೆಟ್ಟಿ ನಿಂತು, ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿದ ಶ್ರೇಯಸ್ ಅವರ ಹೋರಾಟದ ಹಾದಿ ಸಾಮಾನ್ಯವಾದದ್ದಲ್ಲ ಎಂದು ಅವರು ಶ್ಲಾಘಿಸಿದ್ದಾರೆ.
ಐಪಿಎಲ್ನ ಅದ್ಭುತ ನಾಯಕತ್ವವೇ ಶ್ರೀರಕ್ಷೆ
ಶ್ರೇಯಸ್ ಅಯ್ಯರ್ ಅವರನ್ನು ರಾಷ್ಟ್ರೀಯ ತಂಡದ ನಾಯಕನನ್ನಾಗಿ ಆಯ್ಕೆ ಮಾಡುವಲ್ಲಿ ಅವರ ಐಪಿಎಲ್ (IPL) ನಾಯಕತ್ವದ ಟ್ರ್ಯಾಕ್ ರೆಕಾರ್ಡ್ ಪ್ರಮುಖ ಪಾತ್ರ ವಹಿಸಿದೆ. 2020 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ಹಾಗೂ 2025 ರಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದ ಅವರು, 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು. ಕೇವಲ ನಾಯಕನಾಗಿ ಮಾತ್ರವಲ್ಲದೆ ಬ್ಯಾಟರ್ ಆಗಿಯೂ ಅಬ್ಬರಿಸಿದ್ದ ಶ್ರೇಯಸ್, ಐಪಿಎಲ್ 2025 ರಲ್ಲಿ 175.07 ರ ಸ್ಟ್ರೈಕ್ ರೇಟ್ನಲ್ಲಿ 604 ರನ್ ಹಾಗೂ ಐಪಿಎಲ್ 2026 ರಲ್ಲಿ 168.81 ರ ಸ್ಟ್ರೈಕ್ ರೇಟ್ನಲ್ಲಿ 498 ರನ್ ಸಿಡಿಸಿ ಮಿಂಚಿದ್ದರು. ಈ ಸ್ಥಿರ ಪ್ರದರ್ಶನವೇ ಅವರಿಗೆ ಟೀಮ್ ಇಂಡಿಯಾ ನಾಯಕತ್ವದ ಬಾಗಿಲು ತೆರೆಯುವಂತೆ ಮಾಡಿದೆ.
‘ಅದೃಷ್ಟದಿಂದ ಸಿಕ್ಕಿದ್ದಲ್ಲ, ನಿನ್ನ ಪರಿಶ್ರಮದ ಫಲ’
ಭಾರತ ತಂಡದ ನಾಯಕತ್ವ ಎಂಬುದು ಯಾರು ಸುಮ್ಮನೆ ತಂದುಕೊಟ್ಟಿದ್ದಲ್ಲ, ಅದು ಕಠಿಣ ಪರಿಶ್ರಮ, ದೃಢಸಂಕಲ್ಪ ಹಾಗೂ ಅಚಲ ವಿಶ್ವಾಸದಿಂದ ಸಂಪಾದಿಸಿದ್ದು ಎಂದು ಶ್ರೇಷ್ಠಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. “ನಿನ್ನ ಈ ಪಯಣದಲ್ಲಿ ಸಾಗಿಬರಲು ಎಲ್ಲರಿಂದಲೂ ಸಾಧ್ಯವಿಲ್ಲ. ನೀನು ಸಾಧಿಸಿದೆ ಶ್ರೇಯಸ್. ಇದು ಕೇವಲ ಆರಂಭವಷ್ಟೇ ಎಂದು ನನಗನಿಸುತ್ತಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಅದ್ಭುತಗಳು ನಡೆಯಲಿವೆ,” ಎಂದು ಅವರು ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ. ಶ್ರೇಯಸ್ ಅಯ್ಯರ್ ಇದೀಗ ಭಾರತೀಯ ಬಿಳಿ-ಚೆಂಡಿನ ಕ್ರಿಕೆಟ್ನಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದು, ಆಯ್ಕೆಗಾರರ ನಂಬಿಕೆಯನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ : ‘ನಮ್ಮ ನಿರ್ಧಾರ ಕಳಪೆಯಾಗಿದ್ದವು’- DRS ಎಡವಟ್ಟಿನ ಬಗ್ಗೆ ಅಫ್ಘಾನ್ ಕೋಚ್ ಬೇಸರ



















