ಶಿವಮೊಗ್ಗ: ರಾಜ್ಯದಲ್ಲಿ ಜನ ಹಾಗೂ ಹಿಂದೂ ವಿರೋಧಿ ಸರ್ಕಾರವಿದೆ. ಅವರಿಗೆ(ರಾಜ್ಯ ಸರ್ಕಾರಕ್ಕೆ) ಕೇವಲ ಅಲ್ಪಸಂಖ್ಯಾತರ ನೋವು, ಭಾವನೆ ಮಾತ್ರ ಕಾಣಿಸುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಪ್ರತಿ ಬಜೆಟ್ನಲ್ಲಿ ಅಲ್ಪಸಂಖ್ಯಾತ ವರ್ಗಕ್ಕೆ ಮಾತ್ರ ಯೋಜನೆ, ಸವಲತ್ತು ಘೋಷಣೆ ಮಾಡುತ್ತಾರೆ. ಅವರಿಗಾಗಿ ಯೋಜನೆ ಹಾಗೂ ಪರಿಹಾರ ಇರುತ್ತದೆ. ಕೇರಳದಲ್ಲಿ ಪ್ರಿಯಾಂಕ ಗಾಂಧಿ ಕ್ಷೇತ್ರದಲ್ಲಿ ಆನೆ ತುಳಿದು ಸತ್ತರೇ ಅವರಿಗೆ 10 ಕೋಟಿ ಪರಿಹಾರ ನೀಡುತ್ತಾರೆ. ನಮ್ಮ ಶಾಸಕರು ಹಣ ಕೇಳಿದರೆ ಅವರಿಗೆ ದುಡ್ಡಿಲ್ಲ ಎಂದು ಹೇಳುತ್ತಾರೆ ಎಂದು ಸರ್ಕಾರ ವಿರುದ್ಧ ಗುಡುಗಿದ್ದಾರೆ.
ಆರ್ಸಿಬಿ ಕಾಲ್ತುಳಿತ ಸರ್ಕಾರವೇ ತಂದುಕೊಂಡ ಸಮಸ್ಯೆ. ಆರ್ಸಿಬಿ ಸರ್ಕಾರದ ಯೋಜನೆ ಅಲ್ಲ. ಸರ್ಕಾರದ ಆಟವೂ ಅಲ್ಲ. ಒಲಂಪಿಕ್ ಅಲ್ಲಿ ಗೆದ್ದು ಬಂದವರು ಅಲ್ಲ. ದುಡ್ಡಿಗಾಗಿ ಆಟವಾಡಿದವರು. ವಿಧಾನಸೌಧ ಮೆಟ್ಟಿಲು ಹಾಗೂ ಸ್ಟೇಡಿಯಂ ಅಲ್ಲಿ ಕಾರ್ಯಕ್ರಮ ಮಾಡಿ, ಸಿಎಂ-ಡಿಸಿಎಂ ಪೈಪೋಟಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಲ್ಲಿ ಕಾಲ್ತುಳಿತದಿಂದ ಸತ್ತವರಿಗೆ ದುಡ್ಡು ಕೊಡುತ್ತಾರೆ. ಆದರೆ ಗಣಪತಿ ಮೆರವಣಿಗೆಯಲ್ಲಿ ಮೃತಪಟ್ಟವರಿಗೆ, ಗಾಯಾಳುಗಳಿಗೆ ಕೊಡಲು ಸರ್ಕಾರದ ಬಳಿ ಹಣವಿಲ್ಲವೆ ಎಂದು ಕೇಳಿದ್ದಾರೆ.
ಕಳೆದ ವರ್ಷ ನಾಗಮಂಗಲದಲ್ಲಿ ಗಣಪತಿಯ ವಿಸರ್ಜಾನೆ ವೇಳೆ ಪೊಲೀಸರು ಅರೆಸ್ಟ್ ಮಾಡಿದ್ದರು. ನಂತರ ಪೊಲೀಸ್ ಜೀಪ್ ಅಲ್ಲಿ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಿದರು. ಮುಸಲ್ಮಾನರಿಗೆ ನಾವು ಏನು ಮಾಡಿದರು ನಡೆಯುತ್ತದೆ ಎಂದು ಗೊತ್ತಾಗಿದೆ. ಅನಧಿಕೃತ ಮಸೀದಿಯಲ್ಲಿ ಕಲ್ಲು ಹೇಗೆ ಬಂದವು, ಕಲ್ಲು ಯಾರು, ಯಾವಾಗ ತಗೊಂಡು ಹೋದರು? ಪೊಲೀಸರಿಗೆ ಯಾಕೇ ಇದರ ಬಗ್ಗೆ ಮಾಹಿತಿ ಇರಲಿಲ್ಲ, ಪೊಲೀಸರು ಅನುಮತಿ ಕೊಟ್ಟ ಜಾಗದಲ್ಲೇ ಮೆರವಣಿಗೆ ನಡೆಯುವುದು. ಮಸೀದಿ ಇದ್ದ ಬಗ್ಗೆ ಗೊತ್ತಿರಲಿಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಕೇಳಿದರೆ ನಮಗೆ ಉಲ್ಟಾ ಮಾತನಾಡುತ್ತೀರಾ. ಹಿಂದೂ ವಿರೋಧಿ ಕೆಲಸ ನಡೆಯಲು ಸಿಎಂ, ಡಿಸಿಎಂ ಅವರೆ ನೇರ ಕಾರಣ. ಚಾಮುಂಡಿ ಬೆಟ್ಟ ಹಿಂದುಗಳದ್ದು ಅಲ್ಲ ಎನ್ನುವ ಆಹಂಕಾರದ ಮಾತನಾಡುತ್ತಾರೆ. ಈ ಮೂಲಕ ರಾಜ್ಯದ ಜನತೆಗೆ ಯಾವ ಸಂದೇಶ ಕೊಡಲು ಹೊರಟಿದ್ದೀರಿ. ಹಿಂದುಗಳಿಗೆ ದೇವಾಲಯದ ಮೇಲೆ ರೈಟ್ಸ್ ಇಲ್ಲವಾ? ಸಾಂಪ್ರದಾಯ, ಧಾರ್ಮಿಕತೆ ಕಾಪಾಡುವ ಆಸಕ್ತಿ ನಿಮಗೆ ಇಲ್ಲ. ನಿಮಗೆ ಪರಿಹಾರ ಕೊಡುವುದಕ್ಕೆ ಆಗಿಲ್ಲ ಎಂದರೆ ಸರ್ಕಾರ ಬಿಟ್ಟು ಹೋಗಿ ಎಂದು ಸವಾಲ ಹಾಕಿದ್ದಾರೆ.



















