ಫಿರೋಜಾಬಾದ್ : ಪ್ರೀತಿ ಮತ್ತು ಮದುವೆಗೆ ಅಡ್ಡಿಯಾಗಿದ್ದಾನೆ ಎಂಬ ಏಕೈಕ ಕಾರಣಕ್ಕಾಗಿ ಒಂದೂವರೆ ವರ್ಷದ ಮಗುವನ್ನು ವ್ಯಕ್ತಿಯೊಬ್ಬ ನೆಲಕ್ಕೆ ಬಡಿದು ಅತ್ಯಂತ ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ನಡೆದಿದೆ. ಮಗುವಿನ ತಾಯಿಯನ್ನೇ ಪ್ರೀತಿಸುತ್ತಿದ್ದ ಆರೋಪಿ, ಅವಳನ್ನು ಮದುವೆಯಾಗಲು ಈ ಮಗುವೇ ತನಗೆ ಮುಳ್ಳಾಗಿದ್ದಾನೆ ಎಂದು ಭಾವಿಸಿ ಈ ಘೋರ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಕೊಲೆಯಾದ ದುರ್ದೈವಿ ಮಗುವನ್ನು ಆರವ್ ಎಂದು ಗುರುತಿಸಲಾಗಿದೆ. ಈ ಭೀಕರ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಇಡೀ ಸಮಾಜವೇ ತಲೆತಗ್ಗಿಸುವಂತಿದೆ. ಆರೋಪಿಯು ಮಗುವಿನ ಸಂಬಂಧಿಕರ ಮನೆಯ ಹೊರಗಿನ ನಿರ್ಜನ ಗಲ್ಲಿಯಲ್ಲಿ ಮಗುವನ್ನು ಎತ್ತಿಕೊಂಡು ಹೋಗುವುದು ಮತ್ತು ನಂತರ ಯಾರೂ ಇಲ್ಲದ್ದನ್ನು ನೋಡಿ ಕಂದಮ್ಮನನ್ನು ರಸ್ತೆಗೆ ಪದೇ ಪದೇ ಬಲವಾಗಿ ಅಪ್ಪಳಿಸುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಯ ರಾಕ್ಷಸೀಯ ದಾಳಿಗೆ ಒಳಗಾದ ಮಗು ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡು ನಿಶ್ಚಲವಾಗಿ ಬಿದ್ದಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಚಾಕೊಲೇಟ್ ಕೊಡಿಸುವ ನೆಪದಲ್ಲಿ ಅಪಹರಣ
ಪೊಲೀಸ್ ತನಿಖೆಯ ಪ್ರಕಾರ, ಮಗುವಿನ ತಾಯಿ ರತಿ ತನ್ನ ಪತಿ ಸುಮಿತ್ ಜೊತೆ ವಾಸಿಸುತ್ತಿದ್ದಳು. ಆದರೆ ಆರೋಪಿ ವಿರಾಜ್ ಎಂಬಾತ ರತಿಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಹಾಗೂ ಅವಳನ್ನು ಮದುವೆಯಾಗಲು ಬಯಸಿದ್ದ ಎನ್ನಲಾಗಿದೆ. ಶುಕ್ರವಾರ ರತಿ ತನ್ನ ತವರು ಮನೆಯಿಂದ ಹತ್ತಿರದ ಚಿಕ್ಕಮ್ಮನ ಮನೆಗೆ ಬಂದಿದ್ದಾಳೆ ಎಂಬ ವಿಷಯ ತಿಳಿದ ವಿರಾಜ್ ಅಲ್ಲಿಗೆ ಧಾವಿಸಿದ್ದಾನೆ. ಮಗುವಿಗೆ ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಮನೆಯಿಂದ ಹೊರಗೆ ಕರೆದೊಯ್ದ ಆರೋಪಿ, ನಿರ್ಜನ ರಸ್ತೆಗೆ ಬರುತ್ತಿದ್ದಂತೆ ಮಗುವಿನ ಮೇಲೆ ದಾಳಿ ನಡೆಸಿದ್ದಾನೆ.
ತಲೆಮರೆಸಿಕೊಂಡ ಆರೋಪಿಗಾಗಿ ತೀವ್ರ ಹುಡುಕಾಟ
ರಸ್ತೆಯಲ್ಲಿ ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ ಮಗು ಈಗಾಗಲೇ ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೃತ್ಯ ಎಸಗಿದ ತಕ್ಷಣ ಆರೋಪಿ ವಿರಾಜ್ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ತೀವ್ರ ಶೋಧ ಕೈಗೊಂಡಿದ್ದಾರೆ.
ಇದನ್ನೂ ಓದಿ : ಬಕ್ರೀದ್ ದಿನವೇ ಸ್ನೇಹಿತನಿಗೆ ಚಾಕು ಇರಿದಿದ್ದ ಹಂತಕ ಎನ್ಕೌಂಟರ್ಗೆ ಬಲಿ!


















