ಅಹಮದಾಬಾದ್ : ಸರಿಯಾಗಿ ಒಂದು ವರ್ಷದ ಹಿಂದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಏರ್ ಇಂಡಿಯಾ ವಿಮಾನ ದುರಂತದ ಕರಾಳ ನೆನಪುಗಳನ್ನು ಮರೆತು, ಆ ಜಾಗದಲ್ಲೇ ಅಭಿವೃದ್ಧಿಯ ಹೊಸ ಅಧ್ಯಾಯ ಬರೆಯಲು ಗುಜರಾತ್ ಸರ್ಕಾರ ಮುಂದಾಗಿದೆ. ಅಂದು ವಿಮಾನ ಅಪ್ಪಳಿಸಿ ಧ್ವಂಸಗೊಂಡಿದ್ದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಹಾಗೂ ಮೆಸ್ ಆವರಣವನ್ನು ಬರೋಬ್ಬರಿ 547 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ವೈದ್ಯಕೀಯ ಮತ್ತು ಶಿಕ್ಷಣ ಕೇಂದ್ರವಾಗಿ ಮರುಅಭಿವೃದ್ಧಿ ಮಾಡಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.
ದುರಂತದಲ್ಲಿ ಪ್ರಾಣ ಕಳೆದುಕೊಂಡ 260 ಜನರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಗುಜರಾತ್ ಆರೋಗ್ಯ ಸಚಿವ ಪ್ರಫುಲ್ ಪನ್ಸೇರಿಯಾ ಅವರು, ಈ ದುರಂತದ ನೋವನ್ನು ಬೆಳವಣಿಗೆಯ ಸಂಕಲ್ಪವಾಗಿ ಪರಿವರ್ತಿಸಿ, ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಲು ಈ ಹೆಲ್ತ್ ಹಬ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರಾಳ ದುರಂತಕ್ಕೆ ಧ್ವಂಸಗೊಂಡಿದ್ದ ಕ್ಯಾಂಪಸ್
2025ರ ಜೂನ್ 12ರಂದು ಏರ್ ಇಂಡಿಯಾದ ಬೋಯಿಂಗ್ 737 ಡ್ರೀಮ್ಲೈನರ್ ವಿಮಾನವು ನಿಯಂತ್ರಣ ಕಳೆದುಕೊಂಡು ಅಹಮದಾಬಾದ್ನ ಅಸರ್ವಾ ಸಿವಿಲ್ ಆಸ್ಪತ್ರೆ ಪಕ್ಕದಲ್ಲಿರುವ ಕ್ಯಾಂಪಸ್ ಒಳಗಿನ ಹಾಸ್ಟೆಲ್ ಮತ್ತು ಮೆಸ್ ಕಟ್ಟಡಗಳ ಮೇಲೆ ಅಪ್ಪಳಿಸಿತ್ತು. ಈ ಭೀಕರ ಅಪಘಾತದಲ್ಲಿ ಅತುಲ್ಯಂ 1 ರಿಂದ 4 ಹಾಸ್ಟೆಲ್ ಬ್ಲಾಕ್ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದವು.
ವಿವಾಹಿತ ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದ 92 ವಸತಿಗೃಹಗಳೂ ಇದರಲ್ಲಿ ಸೇರಿದ್ದವು. ದುರಂತದ ಬೆನ್ನಲ್ಲೇ ತಕ್ಷಣ ಕಾರ್ಯಪ್ರವೃತ್ತರಾಗಿದ್ದ ಆರೋಗ್ಯ ಇಲಾಖೆಯು ಸಂತ್ರಸ್ತ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಿತ್ತು. ಇದೀಗ ಆ ಜಾಗದಲ್ಲಿ ಹೊಸ ಭವಿಷ್ಯ ಬರೆಯಲು ಯೋಜನೆ ಸಿದ್ಧವಾಗಿದೆ.
ಸಂಪೂರ್ಣ ಉರುಳಿಸಿ ಹೊಸ ಆಸ್ಪತ್ರೆಗಳ ನಿರ್ಮಾಣ
ದುರಂತ ನಡೆದ ಸ್ಥಳದಲ್ಲಿ ತೀವ್ರವಾಗಿ ಹಾನಿಗೊಳಗಾಗಿರುವ ಹಳೆಯ ಕಟ್ಟಡಗಳನ್ನು ಸಂಪೂರ್ಣವಾಗಿ ನೆಲಸಮಗೊಳಿಸಲು ಸರ್ಕಾರ ನಿರ್ಧರಿಸಿದೆ. ತೆರವಾಗುವ ಸುಮಾರು 25,000 ಚದರ ಮೀಟರ್ ಪ್ರದೇಶದಲ್ಲಿ ಮೊದಲ ಹಂತದ ಕಾಮಗಾರಿಗಳು ಆರಂಭವಾಗಲಿವೆ. ಇಲ್ಲಿ ಅತ್ಯಾಧುನಿಕ ಪ್ಯಾರಾಪ್ಲೇಜಿಯಾ ಮತ್ತು ಬೆನ್ನುಮೂಳೆ (Spine) ಆಸ್ಪತ್ರೆ, ಅತ್ಯಾಧುನಿಕ ಪುನರ್ವಸತಿ ಕೇಂದ್ರ (Rehabilitation Center), ಫಿಸಿಯೋಥೆರಪಿ ಕಾಲೇಜು ಮತ್ತು 500 ವಿದ್ಯಾರ್ಥಿ ಸಾಮರ್ಥ್ಯದ ನೂತನ ಹಾಸ್ಟೆಲ್ ನಿರ್ಮಾಣವಾಗಲಿದೆ. ಈ ನಿರ್ದಿಷ್ಟ ವಲಯದ ಕಾಮಗಾರಿಗಳಿಗಾಗಿಯೇ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಒಟ್ಟು 295 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ವಿದ್ಯಾರ್ಥಿಗಳಿಗೆ ಹೈಟೆಕ್ ಹಾಸ್ಟೆಲ್, ಮೆಸ್ ವ್ಯವಸ್ಥೆ
ವಿದ್ಯಾರ್ಥಿಗಳಿಗೆ ವಸತಿ ಮತ್ತು ಊಟದ ಸೌಲಭ್ಯವನ್ನು ವಿಸ್ತರಿಸಲು ಸರ್ಕಾರಿ ನೀಲನಕ್ಷೆಯಲ್ಲಿ ಆದ್ಯತೆ ನೀಡಲಾಗಿದೆ. ಹಾಲಿ ಇರುವ ಸೋಪಾನಂ ಹಾಸ್ಟೆಲ್ ಪಕ್ಕದಲ್ಲೇ ಸ್ನಾತಕೋತ್ತರ ವಿವಾಹಿತ ವಿದ್ಯಾರ್ಥಿಗಳಿಗಾಗಿ 192 ಕೋಟಿ ರೂ. ವೆಚ್ಚದಲ್ಲಿ ಜಿ+7 (ನೆಲಮಹಡಿ ಪ್ಲಸ್ 7 ಅಂತಸ್ತು) ಮಾದರಿಯ 8 ಬ್ಲಾಕ್ಗಳನ್ನು ನಿರ್ಮಿಸಲಾಗುತ್ತಿದ್ದು, ಇದರಲ್ಲಿ 510 ವಸತಿಗೃಹಗಳು ಲಭ್ಯವಿರಲಿವೆ. ಇದರೊಂದಿಗೆ ದುರಂತದಲ್ಲಿ ಹಾನಿಯಾಗಿದ್ದ ಮೆಸ್ ಮತ್ತು ಕ್ಯಾಂಟೀನ್ ಕಟ್ಟಡವನ್ನು 10 ಕೋಟಿ ರೂ. ವೆಚ್ಚದಲ್ಲಿ ಜಿ+1 ಮಾದರಿಯಲ್ಲಿ ಮರುನಿರ್ಮಾಣ ಮಾಡಲಾಗುತ್ತಿದ್ದು, ಇದು ಏಕಕಾಲಕ್ಕೆ 800 ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಕಲ್ಪಿಸಲಿದೆ.
ಅತ್ಯಾಧುನಿಕ ಲ್ಯಾಬ್
ಈ ಬೃಹತ್ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ರಾಜ್ಯದ ಔಷಧ ಪರೀಕ್ಷಾ ಮೂಲಸೌಕರ್ಯವನ್ನೂ ಮೇಲ್ದರ್ಜೆಗೇರಿಸಲಾಗುತ್ತಿದೆ. ಇದೇ ಕ್ಯಾಂಪಸ್ನಲ್ಲಿ ಸುಮಾರು 3,100 ಚದರ ಮೀಟರ್ ವಿಸ್ತೀರ್ಣದಲ್ಲಿ ಹೈಟೆಕ್ ‘ಆಹಾರ ಮತ್ತು ಔಷಧ ಪ್ರಯೋಗಾಲಯ’ (Food and Drugs Laboratory) ನಿರ್ಮಾಣವಾಗಲಿದೆ. ವಡೋದರಾದಲ್ಲಿರುವ ಪ್ರಸಿದ್ಧ ಎನ್ಎಬಿಎಲ್ (NABL) ಮಾನ್ಯತೆ ಪಡೆದ ಪ್ರಯೋಗಾಲಯದ ಮಾದರಿಯಲ್ಲೇ ಇದನ್ನು ವಿನ್ಯಾಸಗೊಳಿಸಲಾಗುತ್ತಿದ್ದು, ಇದಕ್ಕೆ ಒಟ್ಟು 50 ಕೋಟಿ ರೂ. ವೆಚ್ಚವಾಗಲಿದೆ. ಈ ಎಲ್ಲಾ ಯೋಜನೆಗಳು ಪೂರ್ಣಗೊಂಡಾಗ, ನ್ಯೂ ಮೆಂಟಲ್ ಕ್ಯಾಂಪಸ್ ರಾಜ್ಯದಲ್ಲೇ ವೈದ್ಯಕೀಯ ಸಂಶೋಧನೆ, ಶಿಕ್ಷಣ ಮತ್ತು ಆರೋಗ್ಯ ಸೇವೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ : ಹೈದರಾಬಾದ್ನಲ್ಲಿ ಉಸಿರಾಟದ ಸಮಸ್ಯೆಗೆ ಮೀನು ಪ್ರಸಾದ ಪಡೆಯಲು ಹರಿದುಬಂದ 2.7 ಲಕ್ಷ ಜನಸಾಗರ!



















