ಗುರುಗ್ರಾಮ: ಬೆಳಗ್ಗೆಯಿಂದ ಸಂಜೆಯವರೆಗೆ ನಗರದಾದ್ಯಂತ ಐಷಾರಾಮಿ ಸುತ್ತಾಟ ನಡೆಸಿ, ಚಾಲಕನಿಂದಲೇ ಹಣ ಸಾಲ ಪಡೆದು, ಊಟ-ತಿಂಡಿಯ ಬಿಲ್ ಅನ್ನೂ ಪಾವತಿಸುವಂತೆ ಮಾಡಿ, ಅಂತಿಮವಾಗಿ ಬಾಡಿಗೆ ಹಣ ಕೇಳಿದಾಗ ಚಾಲಕನ ವಿರುದ್ಧವೇ ಲೈಂಗಿಕ ದೌರ್ಜನ್ಯ ಮತ್ತು ಕಳ್ಳತನದ ಸುಳ್ಳು ದೂರು ನೀಡುವುದಾಗಿ ಮಹಿಳೆಯೊಬ್ಬರು ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಈ ಪ್ರಕರಣದ ವಿಚಾರಣೆಯ ವೇಳೆ ಆರೋಪಿತ ಮಹಿಳೆಯು ಈ ಹಿಂದೆಯೂ ಇದೇ ರೀತಿಯ ಕೃತ್ಯಗಳನ್ನು ಎಸಗಿರುವ ಕುಖ್ಯಾತ ‘ಸೀರಿಯಲ್ ವಂಚಕಿ’ ಎಂಬ ಸಂಗತಿ ಪೊಲೀಸ್ ತನಿಖೆಯಿಂದ ಬಯಲಿಗೆ ಬಂದಿದೆ.
ಮಂಗಳವಾರ ಬೆಳಗ್ಗೆ ಸುಮಾರು 8 ಗಂಟೆಯ ಹೊತ್ತಿಗೆ ಜ್ಯೋತಿ ದಲಾಲ್ ಎಂಬ ಮಹಿಳೆ ಜಿಯಾವುದ್ದೀನ್ ಎಂಬುವವರ ಕ್ಯಾಬ್ ಅನ್ನು ಬುಕ್ ಮಾಡಿದ್ದರು. ಸೆಕ್ಟರ್ 31ರಿಂದ ಪ್ರಯಾಣ ಆರಂಭಿಸಿದ ಅವರು, ಬಸ್ ನಿಲ್ದಾಣ, ಸೈಬರ್ ಸಿಟಿ ಸೇರಿದಂತೆ ಗುರುಗ್ರಾಮದ ಪ್ರಮುಖ ಪ್ರದೇಶಗಳಿಗೆ ಕರೆದೊಯ್ಯುವಂತೆ ಚಾಲಕನಿಗೆ ಸೂಚಿಸಿದ್ದರು. ದಿನವಿಡೀ ನಡೆದ ಈ ಮ್ಯಾರಥಾನ್ ಪ್ರಯಾಣದ ಸಮಯದಲ್ಲಿ ಮಹಿಳೆ ಚಾಲಕ ಜಿಯಾವುದ್ದೀನ್ ಅವರನ್ನೇ ಆರ್ಥಿಕವಾಗಿ ಶೋಷಿಸಿದ್ದಾರೆ. ಪ್ರಯಾಣದ ಮಧ್ಯೆ ಚಾಲಕನಿಂದಲೇ 700 ರೂಪಾಯಿ ನಗದು ಸಾಲ ಪಡೆದಿರುವ ಆಕೆ, ತಾನು ವಿವಿಧೆಡೆ ಸೇವಿಸಿದ ಊಟ ಮತ್ತು ಪಾನೀಯಗಳ ಬಿಲ್ ಅನ್ನೂ ಚಾಲಕನ ಕೈಯಿಂದಲೇ ಪಾವತಿಸುವಂತೆ ಒತ್ತಾಯಿಸಿದ್ದಾರೆ.
ಮಧ್ಯಾಹ್ನದ ನಂತರ ಪ್ರಯಾಣ ಮುಗಿದಾಗ, ಚಾಲಕ ಜಿಯಾವುದ್ದೀನ್ ಅವರು ಬಾಡಿಗೆ ಹಣ ಹಾಗೂ ತಾನು ನೀಡಿದ್ದ ಸಾಲದ ಮೊತ್ತವನ್ನು ಪಾವತಿಸುವಂತೆ ಮಹಿಳೆಯನ್ನು ಕೇಳಿದ್ದಾರೆ. ಈ ವೇಳೆ ಏಕಾಏಕಿ ರೊಚ್ಚಿಗೆದ್ದ ಜ್ಯೋತಿ ದಲಾಲ್, ಹಣ ಕೊಡುವ ಬದಲು ಚಾಲಕನನ್ನೇ ಬೆದರಿಸಲಾರಂಭಿಸಿದ್ದಾರೆ. ತಾನು ನೀಡಬೇಕಾದ ಹಣವನ್ನು ಕೇಳಿದರೆ, ನಿನ್ನ ವಿರುದ್ಧವೇ ಕಳ್ಳತನ ಮತ್ತು ಲೈಂಗಿಕ ಕಿರುಕುಳದ (Molestation) ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಆವಾಜ್ ಹಾಕಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಆಕೆ, ಚಾಲಕನನ್ನು ಸೆಕ್ಟರ್ 29ರ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿ ಅಲ್ಲಿಯೂ ಹೈಡ್ರಾಮಾ ಸೃಷ್ಟಿಸಿದ್ದಾರೆ.
ಠಾಣೆಯಲ್ಲಿ ರಂಪಾಟ ನಡೆಸಿ ಮಹಿಳೆ ತೆರಳಿದ ಬಳಿಕ, ಕಂಗಾಲಾದ ಚಾಲಕ ಜಿಯಾವುದ್ದೀನ್ ಪೊಲೀಸರಿಗೆ ನಡೆದ ಘಟನೆಯನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಚಾಲಕ ನೀಡಿದ ವಿವರಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಆಘಾತ ಕಾದಿತ್ತು. ಹೈಡ್ರಾಮಾ ಸೃಷ್ಟಿಸಿದ ಜ್ಯೋತಿ ದಲಾಲ್ ಅವರು ಈ ಮೊದಲೇ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂತು. ಈಕೆ ಕೆಲ ದಿನಗಳ ಹಿಂದಷ್ಟೇ ನಗರದ ಪ್ರತಿಷ್ಠಿತ ಸಲೂನ್ ಒಂದರಲ್ಲಿ ಸೇವೆ ಪಡೆದು ಬರೋಬ್ಬರಿ 20,000 ರೂಪಾಯಿ ಪಾವತಿಸದೆ ವಂಚಿಸಿದ್ದರು. ಅಲ್ಲದೆ, ಮತ್ತೊಬ್ಬ ಕ್ಯಾಬ್ ಚಾಲಕನಿಗೆ 2,000 ರೂ. ಬಾಡಿಗೆ ನೀಡದೆ ಸತಾಯಿಸಿದ್ದರು. ಅಷ್ಟೇ ಅಲ್ಲ, 2024ರ ಫೆಬ್ರವರಿಯಲ್ಲಿ ಇದೇ ಮಹಿಳೆ ಕ್ಯಾಬ್ ಚಾಲಕನೊಂದಿಗೆ ಬಾಡಿಗೆ ವಿಚಾರವಾಗಿ ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಎಂಬುದು ತನಿಖೆಯಿಂದ ದೃಢಪಟ್ಟಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಗುರುಗ್ರಾಮ ಪೊಲೀಸರು, ಆರೋಪಿ ಜ್ಯೋತಿ ದಲಾಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಂಚನೆ ಮತ್ತು ಇತರೆ ಪ್ರಮುಖ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸೆಕ್ಟರ್ 29ರ ಠಾಣಾಧಿಕಾರಿ ರವಿ ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಆರೋಪಿಯು ಅಭ್ಯಾಸಬಲದ ವಂಚಕಿ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಆಕೆಯನ್ನು ಶೀಘ್ರದಲ್ಲೇ ಬಂಧಿಸಿ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ಅಮಾಯಕ ಸೇವಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಸುಳ್ಳು ಪ್ರಕರಣಗಳ ಬೆದರಿಕೆ ಹಾಕಿ ವಂಚಿಸುತ್ತಿದ್ದ ಈಕೆಯ ಕೃತ್ಯ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: 24 ದಿನಗಳ ಸಾವು-ಬದುಕಿನ ಹೋರಾಟ ಅಂತ್ಯ | ಅರಿವಳಿಕೆ ಮದ್ದು ಹೆಚ್ಚಾಗಿ ಏಮ್ಸ್ ವೈದ್ಯೆ ಸಾವು


















