ನವದೆಹಲಿ : ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ಸ್ಥಳದಲ್ಲಿ ಬಲಪಂಥೀಯ ಸಂಘಟನೆಯೊಂದು ‘ಶುದ್ಧೀಕರಣ’ ಮತ್ತು ಹವನ ನಡೆಸಿದ ಘಟನೆಯು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಭಾರೀ ವಿವಾದ ಸೃಷ್ಟಿಸಿದೆ. ಬಿಜೆಪಿ ಆಡಳಿತವಿರುವ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಈ ಘಟನೆಯು ಸಂಸತ್ ಮುಂಗಾರು ಅಧಿವೇಶನದ ಕೊನೆಯ ದಿನವಾದ ಗುರುವಾರ ರಾಜ್ಯಸಭೆಯಲ್ಲಿ ಭಾರೀ ಗದ್ದಲ ಮತ್ತು ವಾಗ್ವಾದಕ್ಕೆ ಕಾರಣವಾಗಿದೆ.
ಸಂವಿಧಾನ ಹಾಗೂ ದಲಿತ ನಾಯಕನಿಗೆ ಆದ ಅಪಮಾನ :
ರಾಜ್ಯಸಭೆಯ ಕಲಾಪ ಪ್ರಾರಂಭವಾಗುತ್ತಿದ್ದಂತೆ ಈ ವಿಷಯವನ್ನು ಪ್ರಸ್ತಾಪಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಆಗಸ್ಟ್ 8 ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಾನು ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ್ದೆ. ನಾನು ಯಾವುದೇ ಜಾತಿ, ಧರ್ಮದ ಬಗ್ಗೆ ಮಾತನಾಡದೆ ಕೇವಲ ಜನರ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ್ದೆ.
ಆದರೆ ನನ್ನ ಭಾಷಣ ಮುಗಿದ ಎರಡು ದಿನಗಳ ನಂತರ ಬಿಜೆಪಿ ಕಾರ್ಯಕರ್ತರು ಆ ವೇದಿಕೆಯನ್ನು ‘ಶುದ್ಧೀಕರಣ’ ಮಾಡಲು ಹವನ ನಡೆಸಿದ್ದಾರೆ. ನಾನು ಪರಿಶಿಷ್ಟ ಜಾತಿಗೆ ಸೇರಿದ ದಲಿತ ನಾಯಕನೆಂಬ ಕಾರಣಕ್ಕೆ ನನ್ನನ್ನು ಅಸ್ಪೃಶ್ಯನಂತೆ ಕಂಡು, ಈ ರೀತಿ ಅಪಮಾನ ಮಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಇದು ಸೂಕ್ತವೇ? ನೀವು ಸಂವಿಧಾನವನ್ನು ಹೇಗೆ ರಕ್ಷಿಸುತ್ತಿದ್ದೀರಿ?” ಎಂದು ಭಾವುಕರಾಗಿ ಪ್ರಶ್ನಿಸಿದರು.
ಬಿಜೆಪಿಗೂ ಇದಕ್ಕೂ ಸಂಬಂಧವಿಲ್ಲ: ಜೆ.ಪಿ. ನಡ್ಡಾ ಸ್ಪಷ್ಟನೆ
ಖರ್ಗೆ ಅವರ ಗಂಭೀರ ಆರೋಪಕ್ಕೆ ಸದನದಲ್ಲಿ ತಕ್ಷಣವೇ ಸ್ಪಂದಿಸಿದ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಜೆ.ಪಿ. ನಡ್ಡಾ, ಈ ಘಟನೆಯನ್ನು ಅತ್ಯಂತ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. ಆದರೆ ಇದರಲ್ಲಿ ಬಿಜೆಪಿ ಕಾರ್ಯಕರ್ತರ ಪಾತ್ರವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಅವರು, “ಬಿಜೆಪಿ ಎಂದಿಗೂ ಇಂತಹ ಕೃತ್ಯಗಳನ್ನು ಬೆಂಬಲಿಸುವುದಿಲ್ಲ. ಖರ್ಗೆ ಅವರ ಮನಸ್ಸಿಗೆ ನೋವಾಗಿರುವುದು ನಮಗೂ ವಿಷಾದದ ಸಂಗತಿ. ಈ ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆದರೆ ಕೃತ್ಯದ ಹೊಣೆಯನ್ನು ಬಿಜೆಪಿ ಮೇಲೆ ಹೊರಿಸುವುದು ಸರಿಯಲ್ಲ” ಎಂದರು.
ಸಭಾಪತಿಯಿಂದಲೂ ಖಂಡನೆ
ಈ ವಾಗ್ವಾದದ ಮಧ್ಯೆ ಪ್ರವೇಶಿಸಿದ ರಾಜ್ಯಸಭಾ ಸಭಾಪತಿಯವರು, “ಅಸ್ಪೃಶ್ಯತೆಗಿಂತ ದೊಡ್ಡ ಪಾಪ ಮತ್ತೊಂದಿಲ್ಲ. ಖರ್ಗೆ ಅವರಿಗೆ ಆದ ಅಪಮಾನ ಇಡೀ ಸದನಕ್ಕೆ ಆದ ಅಪಮಾನ” ಎಂದು ಹೇಳಿ, ಪಕ್ಷಾತೀತವಾಗಿ ಈ ಕೃತ್ಯವನ್ನು ಖಂಡಿಸಿದರು. ಘಟನೆಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಬೇಕೆಂದು ಸೂಚಿಸಿದರು.
ಆಗಿದ್ದೇನು?
ಉತ್ತರಾಖಂಡದ ಹಲ್ದ್ವಾನಿ ರಾಮಲೀಲಾ ಮೈದಾನದಲ್ಲಿ ಖರ್ಗೆ ಸಮಾವೇಶ ಮುಗಿದ ನಂತರ ಬಲಪಂಥೀಯ ಸಂಘಟನೆಯಾದ ‘ಶ್ರೀ ರಾಮ ಸೇನೆ’ ಈ ಶುದ್ಧೀಕರಣ ಪ್ರಕ್ರಿಯೆ ನಡೆಸಿದೆ. ಇದು ಬಿಜೆಪಿ ಪ್ರಾಯೋಜಿತ ಕೃತ್ಯ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಬಿಜೆಪಿ ಈ ಆರೋಪವನ್ನು ನಿರಾಕರಿಸಿದ್ದು, ಸಮಾವೇಶದ ವೇಳೆ ಸನಾತನ ಧರ್ಮದ ಭಾವನೆಗಳಿಗೆ ಧಕ್ಕೆ ತರುವಂತಹ ಘೋಷಣೆಗಳನ್ನು ಕೂಗಿದ್ದರಿಂದ ಸ್ಥಳೀಯ ಸನಾತನ ಧರ್ಮದ ಬೆಂಬಲಿಗರು ಈ ಪೂಜೆ ನಡೆಸಿದ್ದಾರೆ ಎಂದು ಸಮರ್ಥಿಸಿಕೊಂಡಿದೆ. ಪ್ರಸ್ತುತ ಈ ವಿಷಯವು ರಾಜಕೀಯ ಹಾಗೂ ಸಂಸದೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಅಮೆರಿಕದಲ್ಲಿ ಭಾರತೀಯ ಮೂಲದ ಬಾಲಕನಿಂದ ಅಮ್ಮ, ತಮ್ಮನ ಭೀಕರ ಹತ್ಯೆ!



















