ಹಾಸನ: ಹಾಸನ ಜಿಲ್ಲೆಯಲ್ಲಿ ನಿಗೂಢ ಸ್ಪೋಟ ಪ್ರಕರಣ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಸಂಭವಿಸಿದ ನಿಗೂಢ ಸ್ಫೋಟದಿಂದ ದಂಪತಿ ಹಾಗೂ ಮಗು ಗಂಭೀರವಾಗಿ ಗಾಯಗೊಂಡ ಘಟನೆ ಆಲೂರು ತಾಲೂಕಿನ ಹಳೇಆಲೂರು ಗ್ರಾಮದಲ್ಲಿ ನಡೆದಿತ್ತು.
ಸ್ಫೋಟದಲ್ಲಿ ಗಾಯಗೊಂಡ ಸುದರ್ಶನ್ ಆಚಾರ್ (40), ಪತ್ನಿ ಕಾವ್ಯ (28) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸ್ಫೋಟದಿಂದ ಮನೆ ಹಾನಿಗೊಳಗಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಉಂಟಾಗಿದೆ. ಮನೆಯ ಹೊರಗಡೆ ಈ ಸ್ಫೋಟ ಆಗಿದ್ದು, ಮನೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಕಾಂಪೌಂಡ್ ಕುಸಿದುಬಿದ್ದಿದೆ. ಸ್ಫೋಟದ ತೀವ್ರತೆ ನೋಡಿದರೆ ಇದು ಜಿಲೆಟಿನ್ ಅಥವಾ ಡಿಟೋನೇಟರ್ ಇರಬಹುದೇ ಎಂಬ ಅನುಮಾನ ಮೂಡಿದೆ. ಅದೃಷ್ಟವಶಾತ್, ಮನೆ ಒಳಗಿದ್ದ ಮಕ್ಕಳಿಬ್ಬರು ಅಪಾಯದಿಂದ ಪಾರಾಗಿದ್ದರು.
ಈ ಮನೆ ಒಂಟಿ ಮನೆಯಾಗಿದ್ದು, ಅಕ್ಕಪಕ್ಕ 50 ಮೀಟರ್ ದೂರದಲ್ಲಿ ಯಾವುದೇ ಮನೆಗಳಿಲ್ಲ. ಹೀಗಾಗಿ ಮತ್ತಷ್ಟು ಅನಾಹುತ ತಪ್ಪಿದೆ. ಆಲೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಸಕಲೇಶಪುರ ಉಪವಿಭಾಗದ ಡಿ.ವೈ.ಎಸ್.ಪಿ ಪ್ರಮೋದ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಲಿಂಡರ್ ಸ್ಫೋಟ ಅಥವಾ ಜಿಲೆಟಿನ್ ಸ್ಫೋಟವಾಗಿದೆ ಎಂದು ಶಂಕಿಸಲಾಗಿದೆ.



















