ನವದೆಹಲಿ: ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ತೆರಳಲಿರುವ ಭಾರತದ ಮೊದಲ ಗಗನಯಾತ್ರಿಯಾಗಿ ಇತಿಹಾಸ ನಿರ್ಮಿಸಲಿದ್ದಾರೆ. ಆಕ್ಸಿಯಮ್ ಮಿಷನ್-4 (Ax-4) ಭಾಗವಾಗಿ ಜೂನ್ 8 ರಂದು ನಾಲಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ಎಕ್ಸ್ನ ಡ್ರಾಗನ್ ಬಾಹ್ಯಾಕಾಶ ನೌಕೆಯಲ್ಲಿ ಶುಕ್ಲಾ ನಭಕ್ಕೆ ಚಿಮ್ಮಲಿದ್ದಾರೆ. ಈ 14 ದಿನಗಳ ಯೋಜನೆಯಲ್ಲಿ ಶುಕ್ಲಾ ನಾಸಾ, ಇಸ್ರೋ ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಯೋಗದಲ್ಲಿ ಐದು ಪ್ರಮುಖ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದ್ದಾರೆ. ಈ ಮಿಷನ್ ಭಾರತದ ಗಗನಯಾನ ಯೋಜನೆಗೆ ಸಂಬಂಧಿಸಿದಂತೆಯೂ ಮಹತ್ವ ಪಡೆದಿದೆ.

ಶುಭಾಂಶು ಶುಕ್ಲಾ ಮತ್ತು ಎಎಕ್ಸ್-4 ಮಿಷನ್
ಶುಭಾಂಶು ಶುಕ್ಲಾ, 2,000 ಗಂಟೆಗಳಿಗಿಂತಲೂ ಹೆಚ್ಚಿನ ವಿಮಾನ ಚಾಲನಾ ಅನುಭವ ಹೊಂದಿರುವ ಅನುಭವಿ ಟೆಸ್ಟ್ ಪೈಲಟ್. ಇವರು ಈ ಯೋಜನೆಯಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ತಂಡವನ್ನು ನಾಸಾದ ಮಾಜಿ ಗಗನಯಾತ್ರಿ ಪೆಗ್ಗಿ ವಿಟ್ಸನ್ ನೇತೃತ್ವ ವಹಿಸಲಿದ್ದು, ಪೋಲೆಂಡ್ನ ಸ್ಲಾವೊಸ್ಜ್ ಉಜ್ನಾನ್ಸ್ಕಿ-ವಿನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೊರ್ ಕಪು ಅವರಂತಹ ಮಿಷನ್ ಸ್ಪೆಶಲಿಸ್ಟ್ಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಮಿಷನ್ ಭಾರತದ ಎರಡನೇ ಗಗನಯಾತ್ರಿಯಾಗಿ (1984 ರಲ್ಲಿ ರಾಕೇಶ್ ಶರ್ಮಾ ಅವರ ನಂತರ) ಶುಕ್ಲಾ ಅವರನ್ನು ಗುರುತಿಸಲಿದೆ.
ಶುಭಾಂಶು ನಡೆಸಲಿರುವ 5 ಪ್ರಯೋಗಗಳು
ಶುಕ್ಲಾ ಅವರು ಐಎಸ್ಎಸ್ನಲ್ಲಿ 14 ದಿನಗಳ ಕಾಲ ಒಟ್ಟು 5 ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದ್ದಾರೆ. ಅವೆಂದರೆ,
ಸೈನೊಬ್ಯಾಕ್ಟೀರಿಯಾ ಅಧ್ಯಯನ: ಈ ಪ್ರಯೋಗವು ಸೂರ್ಯನ ಬೆಳಕನ್ನು ಬಳಸಿಕೊಂಡು ಆಮ್ಲಜನಕವನ್ನು ಉತ್ಪಾದಿಸುವ ಸೈನೊಬ್ಯಾಕ್ಟೀರಿಯಾದ ಬೆಳವಣಿಗೆಯ ವೇಗ ಮತ್ತು ಜೈವಿಕ ರಾಸಾಯನಿಕ ಚಟುವಟಿಕೆಯನ್ನು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಹೋಲಿಕೆ ಮಾಡಲಿದೆ. ಇದು ಭವಿಷ್ಯದ ಬಾಹ್ಯಾಕಾಶ ನೌಕೆಗಳಿಗೆ ಸಹಾಯ ಮಾಡಲಿದೆ.
ಮಯೋಜೆನೆಸಿಸ್ ಅಧ್ಯಯನ: ಈ ಪ್ರಯೋಗವು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಸ್ನಾಯು ಅಂಗಾಂಶದ ಬೆಳವಣಿಗೆ ಮತ್ತು ಪುನರ್ಜನನಕ್ಕೆ ಸಂಬಂಧಿಸಿದ ಮಾರ್ಗಗಳನ್ನು ಗುರುತಿಸಲಿದೆ. ಗಗನಯಾತ್ರಿಗಳ ಸ್ನಾಯು ಕ್ಷಯವನ್ನು ತಡೆಯಲು ಮತ್ತು ಭೂಮಿಯ ಮೇಲಿನ ಸ್ನಾಯು-ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲು ಈ ಅಧ್ಯಯನವು ನೆರವಾಗಲಿದೆ.
ವೋಯೇಜರ್ ಟಾರ್ಡಿಗ್ರೇಡ್ಸ್ ಅಧ್ಯಯನ: ಈ ಪ್ರಯೋಗವು “ವಾಟರ್ ಬೇರ್ಸ್” ಎಂದು ಕರೆಯಲ್ಪಡುವ ಟಾರ್ಡಿಗ್ರೇಡ್ಗಳ (ಸೂಕ್ಷ್ಮ ಜೀವಿಗಳು) ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಬದುಕುಳಿಯುವಿಕೆ ಮತ್ತು ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ಪರೀಕ್ಷಿಸಲಿದೆ. ಇವುಗಳ ಜೈವಿಕ ಗುಣಲಕ್ಷಣಗಳು ಬಾಹ್ಯಾಕಾಶ ಮತ್ತು ಭೂಮಿಯಲ್ಲಿ ಜೈವಿಕ ತಂತ್ರಜ್ಞಾನ ಪರಿಹಾರಗಳಿಗೆ ಸಹಾಯಕವಾಗಬಹುದು.
ಸ್ಟೆಮೊನ್ಸ್ಟ್ರೇಷನ್ಸ್ ಮತ್ತು ಸ್ಪ್ರೌಟ್ಸ್: ಈ ಯೋಜನೆಯು ಭಾರತೀಯ ವಿದ್ಯಾರ್ಥಿಗಳಿಗಾಗಿ STEAM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಕಲೆ ಮತ್ತು ಗಣಿತ) ಔಟ್ರೀಚ್ ಚಟುವಟಿಕೆಗಳನ್ನು ಒಳಗೊಂಡಿದೆ. ಜೊತೆಗೆ, ಹಸಿರು ಕಾಳು ಮತ್ತು ಮೆಂತ್ಯ ಬೀಜಗಳ ಬೆಳವಣಿಗೆಯನ್ನು ಬಾಹ್ಯಾಕಾಶದಲ್ಲಿ ಅಧ್ಯಯನ ಮಾಡಲಾಗುವುದು. ಇದು ಭವಿಷ್ಯದ ಬಾಹ್ಯಾಕಾಶ ಕೃಷಿಗೆ ನೆರವಾಗಲಿದೆ.
ವಾಯೇಜರ್ ಡಿಸ್ಪ್ಲೇಸ್: ಈ ಪ್ರಯೋಗವು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಕಂಪ್ಯೂಟರ್ ಪರದೆಗಳ ಬಳಕೆಯ ಭೌತಿಕ ಮತ್ತು ಅರಿವಿನ ಪರಿಣಾಮಗಳನ್ನು ಅಧ್ಯಯನ ಮಾಡಲಿದೆ. ಗಗನಯಾತ್ರಿಗಳ ಕಣ್ಣಿನ ಚಲನೆ, ಗಮನ ಮತ್ತು ಒತ್ತಡದ ಮಟ್ಟವನ್ನು ಪರಿಶೀಲಿಸಲಾಗುತ್ತದೆ. ಇದು ಭವಿಷ್ಯದ ದೀರ್ಘಕಾಲೀನ ಬಾಹ್ಯಾಕಾಶ ಮಿಷನ್ಗಳಿಗೆ ಉಪಯುಕ್ತವಾಗಲಿದೆ.
ಗಗನಯಾನ ಯೋಜನೆಗೆ ಮಹತ್ವ
ಈ ಮಿಷನ್ ಭಾರತದ ಮೊದಲ ಸ್ವದೇಶಿ ಮಾನವ ಬಾಹ್ಯಾಕಾಶ ಯಾನ ಯೋಜನೆಯಾದ ಗಗನಯಾನಕ್ಕೆ ಸಂಬಂಧಿಸಿದಂತೆ ಅತ್ಯಗತ್ಯ ಅನುಭವವನ್ನು ಒದಗಿಸಲಿದೆ. ಶುಕ್ಲಾ ಅವರ ತರಬೇತಿ ಮತ್ತು ISS ನಲ್ಲಿನ ಕಾರ್ಯಾಚರಣೆಯ ಅನುಭವವು 2027 ರಲ್ಲಿ ಯೋಜಿತವಾಗಿರುವ ಗಗನಯಾನ ಮಿಷನ್ಗೆ ತಾಂತ್ರಿಕ ಮತ್ತು ಕಾರ್ಯಾಚರಣೆಯ ಒಳನೋಟಗಳನ್ನು ನೀಡಲಿದೆ. ಈ ಪ್ರಯೋಗಗಳ ಫಲಿತಾಂಶಗಳು ದೀರ್ಘಕಾಲೀನ ಬಾಹ್ಯಾಕಾಶ ಮಿಷನ್ಗಳಿಗೆ ಜೀವನ ಬೆಂಬಲ ವ್ಯವಸ್ಥೆಗಳು, ಆಹಾರ ಉತ್ಪಾದನೆ ಮತ್ತು ಗಗನಯಾತ್ರಿಗಳ ಆರೋಗ್ಯವನ್ನು ಕಾಪಾಡುವ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲಿದೆ.
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ Ax-4 ಮಿಷನ್ ಭಾರತದ ಬಾಹ್ಯಾಕಾಶ ಯಾನದಲ್ಲಿ ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಈ ಯೋಜನೆಯು ಭಾರತವನ್ನು ಜಾಗತಿಕ ಬಾಹ್ಯಾಕಾಶ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿಡಲಿದೆ ಮತ್ತು ಗಗನಯಾನ ಯೋಜನೆಗೆ ದೃಢವಾದ ಅಡಿಪಾಯವನ್ನು ಒದಗಿಸಲಿದೆ. “ಇದು ಕೇವಲ ಒಂದು ಯಾನವಲ್ಲ. ಇದು 1.4 ಶತಕೋಟಿ ಭಾರತೀಯರ ಆಕಾಂಕ್ಷೆಯ ಸಂಕೇತ” ಎಂದು ಶುಕ್ಲಾ ಹೇಳಿದ್ದಾರೆ.