ಹೈದರಾಬಾದ್ : ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (ಟಿಜಿಎಸ್ಆರ್ಟಿಸಿ) ಬಸ್ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಅಮೀನ್ ಅಹ್ಮದ್ ಅನ್ಸಾರಿ ಅವರಿಗೆ ಅವರ ಅಸಾಮಾನ್ಯ ಎತ್ತರವೇ ಅತಿದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಂದ ಹಾಗೆ ಅನ್ಸಾರಿ ಅವರ ಎತ್ತರ ಬರೋಬ್ಬರಿ 6.6 ಅಡಿ. ತಾವು ಅಷ್ಟೊಂದು ಎತ್ತರವಿರುವ ಕಾರಣ ಅವರಿಗೆ ಬಸ್ ನೊಳಗೆ ನೆಟ್ಟಗೆ ನಿಂತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಸೀಮಿತ ಸ್ಥಳಾವಕಾಶವಿರುವ ಬಸ್ಗಳ ಒಳಗೆ ನಿರಂತರವಾಗಿ ಬಗ್ಗಿ ಕೆಲಸ ಮಾಡಿದ್ದರಿಂದ ತೀವ್ರ ಕುತ್ತಿಗೆ ಮತ್ತು ಬೆನ್ನುನೋವಿಗೆ ತುತ್ತಾಗಿದ್ದ ಅವರಿಗೆ, ಆರೋಗ್ಯದ ಹಿತದೃಷ್ಟಿಯಿಂದ ಸಾರಿಗೆ ಸಂಸ್ಥೆಯು ಇದೀಗ ಕಚೇರಿಯ ಬದಲಿ ಹುದ್ದೆಯನ್ನು ನೀಡಿ ಆದೇಶ ಹೊರಡಿಸಿದೆ.
ಬಸ್ ಒಳಗೆ ಸಂಚರಿಸಲು ಹರಸಾಹಸ
ಹೈದರಾಬಾದ್ನ ಮೆಹದಿಪಟ್ಟಣಂ ಡಿಪೋದಲ್ಲಿ ನಿರ್ವಾಹಕರಾಗಿರುವ ಅಮೀನ್ ಅಹ್ಮದ್ ಅನ್ಸಾರಿ 198 ಸೆಂಟಿಮೀಟರ್ (6 ಅಡಿ 6 ಇಂಚು) ಎತ್ತರವಿದ್ದಾರೆ. ಬಸ್ಸಿನ ಒಳಭಾಗದ ಚಾವಣಿ ಕಡಿಮೆ ಎತ್ತರದಲ್ಲಿರುವುದರಿಂದ ಹಾಗೂ ಪ್ರಯಾಣಿಕರ ಓಡಾಟದ ಮಾರ್ಗ ಇಕ್ಕಟ್ಟಾಗಿರುವುದರಿಂದ ಟಿಕೆಟ್ ನೀಡಲು ಅವರು ತೀವ್ರ ಮುಜುಗರ ಹಾಗೂ ದೈಹಿಕ ಶ್ರಮವನ್ನು ಎದುರಿಸುತ್ತಿದ್ದರು.
ನಿರಂತರವಾಗಿ ಬಗ್ಗಿ ನಡೆಯಬೇಕಾದ ಅನಿವಾರ್ಯತೆಯಿಂದಾಗಿ ತೀವ್ರ ಕುತ್ತಿಗೆ ಮತ್ತು ಬೆನ್ನು ನೋವಿನಿಂದ ಅವರು ಬಳಲುತ್ತಿದ್ದರು. ಈ ಹಿಂದೆ ಒಂದು ವರ್ಷದ ಮಟ್ಟಿಗೆ ಅವರಿಗೆ ಬದಲಿ ಹುದ್ದೆ ನೀಡಲಾಗಿತ್ತು. ಆದರೆ ಏಪ್ರಿಲ್ 28ರಂದು ಆ ಅವಧಿ ಮುಗಿದ ನಂತರ ಮತ್ತೆ ಬಸ್ ಕರ್ತವ್ಯಕ್ಕೆ ಮರಳಿದ್ದರಿಂದ ಅವರ ಆರೋಗ್ಯ ಸಮಸ್ಯೆ ಮತ್ತೆ ಉಲ್ಬಣಗೊಂಡಿತ್ತು.
ಮಾನವೀಯತೆ ಮೆರೆದ ಸಾರಿಗೆ ಇಲಾಖೆ
ನಿರ್ವಾಹಕ ಅಮೀನ್ ಅಹ್ಮದ್ ಅನ್ಸಾರಿ ಅವರ ದೈಹಿಕ ಸ್ಥಿತಿ ಮತ್ತು ಅವರು ಎದುರಿಸುತ್ತಿರುವ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿದ ಟಿಜಿಎಸ್ಆರ್ಟಿಸಿ, ಮೇ 5ರಂದು ಹೊಸ ಆದೇಶವನ್ನು ಹೊರಡಿಸಿದೆ. ಹೈದರಾಬಾದ್ನ ಮುಶೀರಾಬಾದ್ನಲ್ಲಿರುವ ಬಸ್ ಭವನದ ಪ್ರಧಾನ ಕಚೇರಿಯಿಂದ ಈ ಆದೇಶ ಹೊರಬಿದ್ದಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅನ್ಸಾರಿ ಅವರಿಗೆ ಮತ್ತೆ ‘ಔಟ್ ಆಫ್ ಡೆಸಿಗ್ನೇಶನ್’ (OD) ಕರ್ತವ್ಯವನ್ನು ಮುಂದುವರಿಸಲು ಅನುಮತಿ ನೀಡಲಾಗಿದೆ. ಇನ್ನು ಮುಂದೆ ಅವರನ್ನು ಅವರ ದೈಹಿಕ ಸ್ಥಿತಿಗೆ ಹೊಂದುವಂತಹ ಬಸ್ ಪಾಸ್ ವಿಭಾಗಗಳು ಅಥವಾ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಸ್ಥಳಗಳಲ್ಲಿ ಅಗತ್ಯಕ್ಕೆ ತಕ್ಕಂತೆ ನಿಯೋಜಿಸಲು ಸೂಚಿಸಲಾಗಿದೆ.
ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ
ಸಾರಿಗೆ ಸಂಸ್ಥೆಯ ಈ ಉದ್ಯೋಗಿ ಸ್ನೇಹಿ ನಿರ್ಧಾರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಸಾರ್ವಜನಿಕ ಸಾರಿಗೆಯಂತಹ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಹೊಂದುವಂತಹ ಮೂಲಸೌಕರ್ಯಗಳಿರುತ್ತವೆ, ಆದರೆ ವಿಶೇಷ ದೈಹಿಕ ಲಕ್ಷಣಗಳನ್ನು ಹೊಂದಿರುವ ಉದ್ಯೋಗಿಗಳಿಗೆ ಇದು ಸವಾಲಾಗುತ್ತದೆ. ಇಂತಹ ಸಂದರ್ಭದಲ್ಲಿ ಸಂಸ್ಥೆಯು ಉದ್ಯೋಗಿಯ ಕಷ್ಟಕ್ಕೆ ಸ್ಪಂದಿಸಿ, ಅವರ ಉತ್ಪಾದಕತೆಗೂ ಧಕ್ಕೆಯಾಗದಂತೆ ಸೂಕ್ತ ಕೆಲಸ ನೀಡಿರುವುದು ಕಾರ್ಯಸ್ಥಳದ ಹೊಂದಾಣಿಕೆಗೆ ಒಂದು ಅತ್ಯುತ್ತಮ ನಿದರ್ಶನವಾಗಿದೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ‘ಸಿಟಿಲೈಟ್ಸ್ ದುನಿಯಾ’ ಟ್ರೆಂಡ್ ಬಹುಪರಾಕ್..!


















