ಲಖನೌ: ಉತ್ತರ ಪ್ರದೇಶ ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ರಾಜ್ಯ ಸರ್ಕಾರವು ಶೇ.2ರಷ್ಟು ಏರಿಕೆ (DA Hike) ಮಾಡಿದೆ. 2025ರ ಜನವರಿ 1ರಿಂದಲೇ ಪೂರ್ವಾನ್ವಯ ಆಗುವಂತೆ ಡಿಎ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವ ತುಟ್ಟಿಭತ್ಯೆಯ ಪ್ರಮಾಣವು ಶೇ.53ರಿಂದ ಶೇ.55ಕ್ಕೆ ಏರಿಕೆಯಾಗಿದೆ.
ಏಪ್ರಿಲ್ ತಿಂಗಳ ಸಂಬಳದಲ್ಲಿಯೇ ಡಿಎ ಹೆಚ್ಚಳವಾಗಲಿದೆ. ಇದರಿಂದಾಗಿ ರಾಜ್ಯದ 16 ಲಕ್ಷ ನೌಕರರು ಹೆಚ್ಚಿನ ಸಂಬಳ ಪಡೆಯಲಿದ್ದಾರೆ. ಹಾಗೆಯೇ, 12 ಲಕ್ಷ ನಿವೃತ್ತ ನೌಕರರು ಕೂಡ ತುಟ್ಟಿಭತ್ಯೆ ಪರಿಹಾರವನ್ನು ಪಡೆಯಲಿದ್ದಾರೆ. ನಿವೃತ್ತ ನೌಕರರಿಗೂ ಶೇ.2ರಷ್ಟು ತುಟ್ಟಿಭತ್ಯೆ ಪರಿಹಾರ ಹೆಚ್ಚಿಸಲಾಗಿದೆ.
ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರವು ಕೇಂದ್ರ ನೌಕರರಿಗೆ ಶೇ.2ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿದೆ. ಕೇಂದ್ರ ಸರ್ಕಾರದ ತೀರ್ಮಾನದಿಂದ 48.66 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 66.55 ಲಕ್ಷ ಪಿಂಚಣಿದಾರರು ಮೂಲ ವೇತನ ಅಥವ ಪಿಂಚಣಿಯಲ್ಲಿ ಅಸ್ತಿತ್ವದಲ್ಲಿರುವ ಶೇ 53 ದರಕ್ಕಿಂತ ಶೇ 2ರ ಹೆಚ್ಚಳ ಪಡೆಯುತ್ತಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ವಾರ್ಷಿಕ 6,614 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
2025ರ ಜನವರಿಯಿಂದಲೇ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ, ಕರ್ನಾಟಕದಲ್ಲೂ ರಾಜ್ಯ ಸರ್ಕಾರಿ ನೌಕರರಿಗೆ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕರ್ನಾಟಕ ಸರ್ಕಾರವು ಯಾವಾಗ ತುಟ್ಟಿಭತ್ಯೆ ಏರಿಕೆ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.



















