ಉಡುಪಿ : ಪೊಲೀಸರನ್ನು ನಂಬಿ ದಾಖಲೆಯೊಂದಕ್ಕೆ ಹಾಕಿದ ಒಂದು ಸಹಿ, ಅಮಾಯಕ ರಿಕ್ಷಾ ಚಾಲಕನೊಬ್ಬನನ್ನು ಒಂದೂವರೆ ವರ್ಷಗಳ ಕಾಲ ಕ್ರಿಮಿನಲ್ ಪ್ರಕರಣದ ಆರೋಪಿಯಾಗಿ ನಿಲ್ಲಿಸಿ, ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿತ್ತು. ಮಾನಸಿಕ ಯಾತನೆ, ಸಾಮಾಜಿಕ ಅವಮಾನ ಹಾಗೂ ಕುಟುಂಬದ ಆತಂಕಕ್ಕೆ ಕಾರಣವಾಗಿದ್ದ ಈ ಪ್ರಕರಣದಲ್ಲಿ ಕೊನೆಗೂ ಹೈಕೋರ್ಟ್ನಿಂದ ಶೀನ ಪೂಜಾರಿಗೆ ನ್ಯಾಯ ದೊರೆತಿದೆ. ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಕಾನೂನು ಹೋರಾಟದ ಬಳಿಕ ಶೀನ ಪೂಜಾರಿ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ, ಅವರನ್ನು ದೋಷಮುಕ್ತಗೊಳಿಸಿದೆ.

ಕುಂದಾಪುರ ತಾಲೂಕಿನ ಆಲೂರು ಗ್ರಾಮದ ನಿವಾಸಿ ಶೀನ ಪೂಜಾರಿ ರಿಕ್ಷಾ ಚಾಲಕರಾಗಿದ್ದು, ಹಗಲಿರುಳು ರಿಕ್ಷಾ ಓಡಿಸುವ ಮೂಲಕ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಅವರ ಪತ್ನಿ ಎಂಡೋಸಲ್ಫಾನ್ ಪೀಡಿತರಾಗಿದ್ದು, ಅವರ ಚಿಕಿತ್ಸೆ, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಟುಂಬದ ಸಂಪೂರ್ಣ ಜವಾಬ್ದಾರಿ ಶೀನ ಪೂಜಾರಿ ಅವರ ಮೇಲಿತ್ತು. ಸ್ವಾಭಿಮಾನದಿಂದ ದುಡಿದು ಜೀವನ ನಡೆಸುತ್ತಿದ್ದ ಅವರ ಬದುಕು 2025ರ ಆಗಸ್ಟ್ 24ರಂದು ನಡೆದ ಘಟನೆಯಿಂದ ಸಂಪೂರ್ಣ ಬದಲಾಗಿತ್ತು.
ಪರಿಚಯಸ್ಥರಾದ ಉದಯ ಶೆಟ್ಟಿ ಅವರನ್ನು ಗಂಗೊಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದ ಶೀನ ಪೂಜಾರಿ, ಠಾಣೆಯ ಹೊರಭಾಗದಲ್ಲಿ ತಮ್ಮ ರಿಕ್ಷಾ ನಿಲ್ಲಿಸಿ ಕಾಯುತ್ತಿದ್ದರು. ಈ ವೇಳೆ ಪೊಲೀಸರು ಅವರನ್ನು ಠಾಣೆಯೊಳಗೆ ಕರೆಸಿಕೊಂಡು, ಔಪಚಾರಿಕ ಪ್ರಕ್ರಿಯೆ ಎಂದು ಹೇಳಿ ದಾಖಲೆಯೊಂದಕ್ಕೆ ಸಹಿ ಪಡೆದಿದ್ದರು. “ನನಗೆ ಓದಲು-ಬರೆಯಲು ಬರುವುದಿಲ್ಲ. ಇದಕ್ಕೆ ಯಾಕೆ ಸಹಿ ಹಾಕಬೇಕು?” ಎಂದು ಶೀನ ಪೂಜಾರಿ ಪ್ರಶ್ನಿಸಿದರೂ, ಇದು ಕೇವಲ ಔಪಚಾರಿಕ ಪ್ರಕ್ರಿಯೆ ಎಂದು ಪೊಲೀಸರು ತಿಳಿಸಿದ್ದರು ಎನ್ನಲಾಗಿದೆ. ಪೊಲೀಸರ ಮಾತನ್ನು ನಂಬಿದ ಅವರು ದಾಖಲೆಗೆ ಶೀನ ಪೂಜಾರಿ ಸಹಿ ಹಾಕಿದ್ದರು.
ಆದರೆ ಕೆಲವೇ ದಿನಗಳ ಬಳಿಕ ನ್ಯಾಯಾಲಯದಿಂದ ನೋಟಿಸ್ ಬಂದಿರುವ ವಿಚಾರ ತಿಳಿದು, ಸಮನ್ಸ್ ಓದಿಸಿಕೊಂಡಾಗ ಶೀನ ಪೂಜಾರಿ ಬೆಚ್ಚಿಬಿದ್ದಿದ್ದರು. ತಾವು ಮಾಡದ ಅಪರಾಧವೊಂದರಲ್ಲಿ ತಮ್ಮ ಹೆಸರನ್ನು ಆರೋಪಿಯಾಗಿ ದಾಖಲಿಸಿರುವುದು ಅವರಿಗೆ ತಿಳಿದುಬಂದಿತ್ತು. ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಕೋರೆ ನಡೆಸಿ ಕೆಂಪುಕಲ್ಲು ಕಳವು ಮಾಡಿದ ಪ್ರಕರಣದಲ್ಲಿ ಉದಯ ಶೆಟ್ಟಿಯವರೊಂದಿಗೆ ಶೀನ ಪೂಜಾರಿ ಅವರನ್ನು ಕೂಡ ಎರಡನೇ ಆರೋಪಿಯನ್ನಾಗಿ ಸೇರಿಸಲಾಗಿತ್ತು. ಕಲ್ಲುಕೋರೆ ವ್ಯವಹಾರದ ಬಗ್ಗೆ ಯಾವುದೇ ಮಾಹಿತಿ ಇಲ್ಲದ, ಕೇವಲ ರಿಕ್ಷಾ ಚಾಲಕರಾಗಿದ್ದ ಶೀನ ಪೂಜಾರಿ ಏಕಾಏಕಿ ಕ್ರಿಮಿನಲ್ ಪ್ರಕರಣದ ಆರೋಪಿಯಾಗಿ ನ್ಯಾಯಾಲಯದ ಮುಂದೆ ನಿಲ್ಲುವಂತಾಗಿತ್ತು.
ಪ್ರಕರಣದ ಬಗ್ಗೆ ವಿಚಾರಿಸಿದ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡರೆ ಒಂದೆರಡು ವಿಚಾರಣೆಯಲ್ಲೇ ಪ್ರಕರಣ ಮುಗಿಯುತ್ತದೆ ಎಂಬ ರೀತಿಯ ಸಲಹೆ ದೊರೆತಿತ್ತು ಎಂದು ಶೀನ ಪೂಜಾರಿ ಆರೋಪಿಸಿದ್ದಾರೆ. ಆದರೆ ತಾವು ಮಾಡದ ತಪ್ಪನ್ನು ಒಪ್ಪಿಕೊಳ್ಳಲು ಅವರ ಆತ್ಮಸಾಕ್ಷಿ ಒಪ್ಪಲಿಲ್ಲ. ಹೀಗಾಗಿ ನ್ಯಾಯಕ್ಕಾಗಿ ಅವರು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೊರೆ ಹೋದರು. ಪ್ರತಿಷ್ಠಾನವು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಿದ ಬಳಿಕ ಶೀನ ಪೂಜಾರಿ ಅವರ ಪರವಾಗಿ ಕರ್ನಾಟಕ ಹೈಕೋರ್ಟ್ನಲ್ಲಿ ಕಾನೂನು ಹೋರಾಟ ಆರಂಭಿಸಿತು.
ಪ್ರತಿಷ್ಠಾನದ ವಕೀಲ ಎನ್. ವಿವೇಕಾನಂದ ಅವರ ಮೂಲಕ ಸಲ್ಲಿಸಲಾದ ಅರ್ಜಿ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಶೀನ ಪೂಜಾರಿ ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲು ಇರುವ ಆಧಾರಗಳೇನು ಎಂಬುದರ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಗೆ ಹೈಕೋರ್ಟ್ ಸ್ಪಷ್ಟನೆ ಕೇಳಿತ್ತು. ಆದರೆ ನಾಲ್ಕು ಬಾರಿ ಅವಕಾಶ ನೀಡಿದರೂ ಸೂಕ್ತ ಉತ್ತರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ, 2026ರ ಆಗಸ್ಟ್ 6ರಂದು ಹೈಕೋರ್ಟ್ ಮಹತ್ವದ ಆದೇಶ ನೀಡಿತು. ಶೀನ ಪೂಜಾರಿ ಅವರ ಹೆಸರನ್ನು ದೋಷಾರೋಪಣ ಪಟ್ಟಿಯಿಂದ ಕೈಬಿಟ್ಟು, ಅವರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿತು.
ಇದರೊಂದಿಗೆ ಸುಮಾರು ಒಂದೂವರೆ ವರ್ಷಗಳ ಕಾಲ ಕ್ರಿಮಿನಲ್ ಪ್ರಕರಣದ ಆರೋಪಿಯಾಗಿ ಬದುಕಿದ್ದ ಶೀನ ಪೂಜಾರಿಗೆ ಕೊನೆಗೂ ನ್ಯಾಯ ದೊರೆತಿದೆ. ಆದರೆ ತಾನು ಮಾಡದ ತಪ್ಪಿಗೆ ಆರೋಪಿಯಾಗಿ ನಿಲ್ಲಬೇಕಾದ ಪರಿಸ್ಥಿತಿ, ನ್ಯಾಯಾಲಯದ ಮೆಟ್ಟಿಲೇರುವಂತಾದ ನೋವು, ಮಾನಸಿಕ ಯಾತನೆ ಹಾಗೂ ಸಾಮಾಜಿಕ ಅವಮಾನಗಳ ಕಹಿ ನೆನಪು ಮಾತ್ರ ಉಳಿದಿದೆ. ತಾನು ಅನುಭವಿಸಿದ ಅನ್ಯಾಯ ಮತ್ತೊಬ್ಬ ಅಮಾಯಕನಿಗೂ ಆಗಬಾರದು ಎಂಬುದು ಶೀನ ಪೂಜಾರಿ ಅವರ ನೋವಾಗಿದೆ. ತನಗಾದ ಅವಮಾನಕ್ಕೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಅವರು ತಿಳಿಸಿದ್ದಾರೆ.
ಶೀನ ಪೂಜಾರಿ ಬಯಸಿದಲ್ಲಿ ಸಂಬಂಧಪಟ್ಟವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸಂಪೂರ್ಣ ಕಾನೂನು ಸಹಕಾರ ನೀಡಲಿದೆ ಎಂದು ಪ್ರತಿಷ್ಠಾನದ ರವೀಂದ್ರನಾಥ ಶಾನುಭಾಗ್ ತಿಳಿಸಿದ್ದಾರೆ.
ಈ ಪ್ರಕರಣವು ಯಾವುದೇ ದಾಖಲೆ ಅಥವಾ ಹೇಳಿಕೆಯ ಮೇಲೆ ಸಹಿ ಮಾಡುವ ಮುನ್ನ ಅದರ ಸಂಪೂರ್ಣ ವಿವರವನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂಬ ಎಚ್ಚರಿಕೆಯನ್ನೂ ನೀಡಿದೆ. ವಿಶೇಷವಾಗಿ ಓದಲು-ಬರೆಯಲು ಬಾರದವರು ಯಾವುದೇ ದಾಖಲೆಗೆ ಸಹಿ ಮಾಡುವ ಮೊದಲು ವಿಶ್ವಾಸಾರ್ಹ ವ್ಯಕ್ತಿಗಳಿಂದ ಅದರ ವಿಷಯವನ್ನು ಓದಿಸಿಕೊಂಡು, ಸಂಪೂರ್ಣವಾಗಿ ಅರ್ಥ ಮಾಡಿಕೊಂಡ ಬಳಿಕವೇ ಸಹಿ ಮಾಡಬೇಕು ಎಂಬ ಸಂದೇಶವನ್ನು ಈ ಪ್ರಕರಣ ಸಮಾಜಕ್ಕೆ ನೀಡಿದೆ.
ಇದನ್ನೂ ಓದಿ : ಪಾಕಿಸ್ತಾನ ಕ್ರಿಕೆಟ್ ವಿರುದ್ಧ ಜೇಸನ್ ಗಿಲೆಸ್ಪಿ ಗಂಭೀರ ಆರೋಪ : ‘ನನ್ನ ಸಾವಿರಾರು ಡಾಲರ್ ಹಣ ಇನ್ನೂ ಬಾಕಿಯಿದೆ’


















