ಆಪರೇಷನ್ ಸಿಂಧೂರ್…ಭಾರತದ ಐತಿಹಾಸಿಕ ಸೇನಾ ಕಾರ್ಯಾಚರಣೆ ಅದೆಷ್ಟು ಪಕ್ವ, ಅದೆಷ್ಟು ನಿಖರ ಮತ್ತು ಸಂಘಟಿತವಾಗಿತ್ತು ಅನ್ನೋದು ಪಾಕಿಸ್ತಾನದ ಇಂದಿನ ಗತಿಯನ್ನು ಕಂಡ್ರೆ ಅರ್ಥವಾಗುತ್ತೆ. ಪಾಕಿಸ್ತಾನದೊಳಗೇ ನುಗ್ಗಿ ಶತ್ರು ಸಂಹಾರದಂಥಾ ದೊಡ್ಡ ಕಾರ್ಯಾಚರಣೆ ನಡೆಸೋದು ನಿಜಕ್ಕೂ ಸವಾಲಿನದ್ದೇ ಸರಿ. ಹಾಗಂತಾ ಅದಕ್ಕೊಂದು ಪೂರ್ವತಯಾರಿ, ಪಕ್ಕಾ ಪ್ಲ್ಯಾನಿಂಗ್ ಇದ್ರೆ, ಎಂಥದ್ದನ್ನೂ ಸಾಧಿಸಬಹುದು ಅನ್ನೋದನ್ನು ಹಿಂದೂಸ್ತಾನ ಸೇನೆ ಸಾಬೀತು ಮಾಡಿದೆ. ಹಾಗಂತಾ ಈ ಯಶಸ್ಸಿನ ಹಿಂದೆ ಕೇಳಿ ಬರ್ತಿರೋ ದೊಡ್ಡ ರಣತಂತ್ರವೆಂದ್ರೆ ಅದು ರೆಡ್ ಮೀಟಿಂಗ್.
ಏನಿದು ಸೇನೆಯ ಮಹತ್ವಾಕಾಂಕ್ಷಿ ರೆಡ್ ಮೀಟಿಂಗ್
ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತೀಕಾರಕ್ಕೆ ನಿರ್ಧರಿಸಿದ್ದ ಭಾರತ, ಪಾಕಿಸ್ತಾನದಲ್ಲಿ ಅಡಗಿದ್ದ ಉಗ್ರರನ್ನು ಸಂಹರಿಸೋ ಪ್ಲ್ಯಾನ್ ಮಾಡಿತ್ತು. ಹಾಗಂತಾ ಅದು ಸುಲಭದ ಕಾರ್ಯವಾಗಿರ್ಲಿಲ್ಲ. ಇದಕ್ಕೆಲ್ಲಾ ದೊಡ್ಡ ಮಟ್ಟದ ಪೂರ್ವ ತಯಾರಿ ಅತಿ ಅವಶ್ಯಕ. ಆದ್ರೆ ಅತ್ತು ಭಾರತದ ಬಳಿ ಸಮಯವಿರ್ಲಿಲ್ಲ. ಆದ್ರೆ ಈ ಹಿಂದೆಯೇ ರೂಪಿಸಿದ ರಣತಂತ್ರವೊಂದು ಅಂದು ಭಾರತದ ಬೆನ್ನೆಲುಬಾಗಿಬಿಡ್ತು. ಹೌದು, ಯಾವುದೇ ಶತ್ರುವಿನ ವಿರುದ್ಧ ಸಮರಕ್ಕಿಳಿಯೋ ಮುನ್ನ ಆ ಶತ್ರುವಿನಂತೆಯೇ ಯೋಚಿಸಬೇಕು ಮತ್ತು ರಣತಂತ್ರ ರೂಪಿಸಬೇಕು. ಇದರ ಭಾಗವಾಗಿಯೇ ಭಾರತೀಯ ಸೇನೆ ಹಿಂದೆ ಸೋವಿಯತ್ ಒಕ್ಕೂಟದ ಪರಿಕಲ್ಪನೆಯಲ್ಲಿ ಅನುಸರಿಸಿದ್ದ ಮಾದರಿಯನ್ನು ಅನುಷ್ಠಾನಕ್ಕೆ ತರಲಾಗಿತ್ತು. ಇದರ ಭಾಗವಾಗಿಯೇ ರೆಡ್ ಟೀಮ್ ಪರಿಕಲ್ಪನೆಯನ್ನು ಸೇನೆ ಅಳವಡಿಕೊಂಡು ತನ್ನ ವ್ಯೂಹ ಹೆಣೆದಿತ್ತು. ಇದರ ಫಲವಾಗಿಯೇ ಅಷ್ಟು ನಿಖರ ಮತ್ತು ತುರ್ತಾಗಿ ಪಾಕ್ ವಿರುದ್ಧ ಸಿಡಿದೇಳುವಂತಾಗಿದ್ದು. ಈ ರೆಡ್ ಮೀಟಿಂಗ್ ವಿಧಾನವನ್ನೇ ಅಮೆರಿಕ ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದೆ.
ಅಸಲಿಗೆ ಈ ರೆಡ್ ಟೀಮ್ ನ ಅರ್ಥವಾದ್ರು ಏನು
ಸೇನೆಯ ಸಮರಾಭ್ಯಾಸದ ಭಾಗವೇ ಈ ರೆಡ್ ಮತ್ತು ಬ್ಲೂ ಟೀಂ ಕಲ್ಪನೆ. ರೆಡ್ ಟೀಂ ಆ ದೇಶದ ತಂಡವಾಗಿದ್ರೆ ಬ್ಲೂ ಟೀಂ ಎದುರಾಳಿಗಳ ತಂಡವಾಗಿ ಅಭ್ಯಾಸ ನಡೆಸುತ್ತೆ. ಇದೇ ನೀಲನಕ್ಷೆಯನ್ನಿಟ್ಟುಕೊಂಡು, ಭಾರತೀಯ ಸೇನೆಯೂ ಪಾಕಿಸ್ತಾನ ಯೋಜಿಸಬಹುದಾದ ರಣತಂತ್ರ ರೂಪಿಸಬಹುದಾದ ಪ್ರತಿ ವ್ಯೂಹಗಳನ್ನು ಮೊದಲೇ ಕಲ್ಪಿಸಿ ಅದಕ್ಕೆ ಪ್ರತ್ಯುತ್ತರದ ಪ್ಲ್ಯಾನ್ ಬಿ ರೂಪಿಸಿತ್ತು. ಇದನ್ನೇ ಭಾರತೀಯ ಸೇನೆ ಮಹಾಭಾರತದ ಕುರುಕ್ಷೇತ್ರ ರಣತಂತ್ರದ ಪ್ರತೀಕವಾಗಿ ವಿದುರ ವಕ್ತ್ ಅಂತಾ ನಾಮಕರಣ ಮಾಡಿತ್ತು. ಮಹಾಭಾರತದಲ್ಲಿ ತಂತ್ರ ರೂಪಿಸೋ ಮಹಾ ಚತುರನಾಗಿದ್ದ ವಿದುರನ ಹೆಸರಿನಲ್ಲೇ ಈ ಕಾರ್ಯಾಚರಣೆಯನ್ನು ವಿಧುರ ವಕ್ತ್ ಅಂತಾ ಕರೆಯಲಾಗಿತ್ತು.
ಸೇನೆಯ ಮೂವರು ಕಮಾಂಡರ್ ಗಳಿಂದ ಹದ್ದಿನ ಕಣ್ಣು
ಇನ್ನು ಆಪರೇಷನ್ ಸಿಂಧೂರ್ ಈ ವಿಧುರ ವಕ್ತ್ ಕಾರ್ಯತಂತ್ರದಿಂದಲೇ ನಿರೀಕ್ಷೆಗೂ ಮೀರಿದ ಫಲ ಕಂಡಿತ್ತು. ಹಾಗಂತಾ ಅವತ್ತಿನ ಸೇನಾ ಕಾರ್ಯಾಚರಣೆಯನ್ನು ಮೂರು ಪಡೆಗಳ ಮುಖ್ಯಸ್ಥರು ಒಟ್ಟಿಗೆ ಕೂತು ವೀಕ್ಷಿಸಿದ್ರು. ಮುಂದಿನ ನಿರ್ದೇಶನಗಳನ್ನು ನೀಡೋದೇ ಆಗಿರ್ಲಿ, ಎದುರಾಗೋ ಪರಿಸ್ಥಿತಿಯನ್ನು ನಿಭಾಯಿಸೋದೇ ಆಗಿರ್ಲಿ ಎಲ್ಲವನ್ನು ನಿರ್ವಹಿಸೋ ನಿಟ್ಟಿನಲ್ಲೇ ಅಂದು ಭೂಸೇನೆ, ವಾಯು ಸೇನೆ ಮತ್ತು ನೌಕಾ ಪಡೆಗಳ ಮುಖ್ಯಸ್ಥರು ಒಟ್ಟಿಗಿದ್ದು, ಆಪರೇಷನನ್ನು ಮಾನಿಟರಿಂಗ್ ಮಾಡಿದ್ರು. ಇದರ ಫೋಟೋವನ್ನು ಕೂಡಾ ಈ ಸೇನೆ ರಿಲೀಸ್ ಮಾಡಿದೆ.