ಇವತ್ತು ಬೆಳ್ಳಂಬೆಳಗ್ಗೆಯೇ ಕಾಂಗ್ರೆಸ್ ನ ಅತಿರಥ ನಾಯಕರಿಗೆ ಬಿಗ್ ಶಾಕ್ ಎದುರಾಗಿದೆ. ನಿನ್ನೆ ರಾತ್ರಿ ಸಖತ್ ಊಟ ಮಾಡಿ, ಗಡದ್ ನಿದ್ರೆಗೆ ಜಾರಿದ್ದ ಕೈ ಕಲಿಗಳಿಗೆ ಇವತ್ತು ಮುಂಜಾನೆ ಇಡಿ ಅಧಿಕಾರಿಗಳು ಶಾಕಿಂಗ್ ಗುಡ್ ಮಾರ್ನಿಂಗ್ ಹೇಳಿದ್ದಾರೆ. ಹೌದು, ರಾಜ್ಯದ ಐದು ಕಡೆ ಏಕಕಾಲಕ್ಕೆ ಮೆಗಾ ದಾಳಿ ಮಾಡಲಾಗಿದೆ.
ವಾಲ್ಮೀಕಿ ಗಂಟಿನ ಗುಟ್ಟು ಬೇಧಿಸಲು ಮುಂದಾದ ಇಡಿ
ಅದೊಂದು ಮೊಬೈಲ್ ಇಡಿಗೆ ನೀಡ್ತಾ ದೊಡ್ಡ ಸಾಕ್ಷ್ಯ
ರಾಜ್ಯದ ವಾಲ್ಮೀಕಿ ನಿಗಮದ 21 ಕೋಟಿ ರೂ. ಹಣವನ್ನು ಅಕ್ರಮವಾಗಿ ದುರುಪಯೋಗ ಮಾಡಿಕೊಳ್ಳಲಾಗಿದೆ ಅನ್ನೋ ಆರೋಪವಿದೆ. ಕಾಂಗ್ರೆಸ್ ನ ಬಳ್ಳಾರಿ ಗ್ರಾಮಾಂತರದ ಶಾಸಕ ಬಿ ನಾಗೇಂದ್ರ ಈ ಹಗರಣದ ಮಾಸ್ಟರ್ ಮೈಂಡ್ ಅಂತಲೇ ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲಾ ಈಗಾಗಲೇ ನಾಗೇಂದ್ರ ಈ ಪ್ರಕರಣದಲ್ಲಿ ಜೈಲಿಗೆ ಹೋಗಿ ಇದೀಗ ಬೇಲ್ ಮೇಲೆ ಹೊರಗಿದ್ದಾರೆ.
ಅಷ್ಟಕ್ಕೂ ಇವತ್ತಿನ ಇಡಿ ದಾಳಿ ವಾಲ್ಮೀಕಿ ನಿಗಮದ 21 ಕೋಟಿಯ ಗಂಟಿನ ಅವ್ಯವಹಾರದ ರಹಸ್ಯ ಬೇಧಿಸುವ ಭಾಗವೇ ಆಗಿದೆ. ಅದರಲ್ಲೂ ನಾಗೇಂದ್ರರ ಪಿಎ ಆಗಿದ್ದ ವಿಜಯ್ ಕುಮಾರ್ ಮೊಬೈಲ್ ನಲ್ಲಿ ಈ 21 ಕೋಟಿ ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡಿದ್ದಕ್ಕೆ ಸಾಕ್ಷ್ಯ ಲಭ್ಯವಾಗಿತ್ತು. ಇದನ್ನ ಆಧರಿಸಿಯೇ ಇವತ್ತು ದಾಳಿ ಕೈಗೊಳ್ಳಲಾಗಿದೆ.
ಐದು ಸ್ಥಳ, ಕಾಂಗ್ರೆಸ್ ನ 7 ಮುಖಂಡರು ಟಾರ್ಗೆಟ್
ಇನ್ನು ಇವತ್ತಿನ ರೇಡ್ ರಾಜ್ಯದ ಐದು ಕಡೆ ಏಕಕಾಲಕ್ಕೆ ಮಾಡಲಾಗಿದೆ. ಅಂದಾಜು 60ಕ್ಕೂ ಹೆಚ್ಚು ಅಧಿಕಾರಿಗಳ ತಂಡ ರೇಡ್ ಮಾಡಿದೆ. ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಯ ನಿವಾಸ, ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ. ಇತ್ತ ಕಂಪ್ಲಿಯ ಶಾಸಕ ಗಣೇಶ್ ರ ಕುರಗೋಡು ಕಚೇರಿ, ನಿವಾಸ, ಬಳ್ಳಾರಿ ಸಂಸದ ತುಕಾರಂ, ಸಂಡೂರು ಶಾಸಕಿ ಅನ್ನಪೂರ್ಣರ ಮನೆ, ಆಫೀಸ್ ಗಳಲ್ಲಿ ಶೋಧ ಕಾರ್ಯ ನಡೆಸಲಾಯ್ತು. ಉಳಿದಂತೆ, ಕೂಡ್ಲಿಗಿ ಕೈ ಎಂಎಲ್ ಎ ಶ್ರೀನಿವಾಸ್ ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕ ಬಿ ನಾಗೇಂದ್ರರ ಬೆಂಗಳೂರು ನಿವಾಸ ಮತ್ತು ಶಾಸಕರ ಭವನದ ರೂಂನಲ್ಲೂ ತಲಾಶ್ ಮಾಡಲಾಯ್ತು.
ಬಳ್ಳಾರಿ ಚುನಾವಣೆಗೆ ನಿಗಮದ ಹಣ ಬಳಕೆ
ಪ್ರತಿ ಮತದಾರರಿಗೆ 200 ರೂಪಾಯಿ ಹಂಚಿಕೆ
ಇನ್ನು ವಾಲ್ಮೀಕಿ ನಿಗಮ ಹಗರಣದ ತನಿಖೆ ನಡೆಸಿರುವ ಇಡಿ ಹಲವು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಬಳ್ಳಾರಿ ಚುನಾವಣೆಯಲ್ಲಿ ನಿಗಮದ ಹಣದಲ್ಲಿ ಪ್ರತಿ ಮತದಾರರಿಗೆ ತಲಾ 200 ರೂಪಾಯಿಯಂತೆ ಹಣ ಹಂಚಲಾಗಿದೆ. ಇದರೊಟ್ಟಿಗೆ ಕಂತೆ ಕಂತೆ ನೋಟುಗಳಿರೋ ಪೋಟೋಗಳು ಕೂಡಾ ನಾಗೇಂದ್ರ ಪಿಎ ಮೊಬೈಲ್ ನಲ್ಲಿ ಸಿಕ್ಕಿವೆ. ಇಡಿ ಕಲೆ ಹಾಕಿರುವ ಮಾಹಿತಿಯಂತೆ ಬಳ್ಳಾರಿ ಚುನಾನವಣೆಯಲ್ಲಿ ಮತದಾರರಿಗೆ ಹಣದ ಹೊಳೆಯನ್ನೇ ಹರಿಸಲಾಗಿದೆ.
ಈ ಪೈಕಿ ಬಳ್ಳಾರಿ ಗ್ರಾಮಾಂತರದಲ್ಲಿ 5,23,72,400, ಬಳ್ಳಾರಿ ನಗರ ಮತದಾರರಿಗೆ 3,75,00,000. ಕಂಪ್ಲಿಯಲ್ಲಿ 3,38,00,000 ಹಾಗೂ ಕೂಡ್ಲಿಗಿ ಮತಕ್ಷೇತ್ರದಲ್ಲಿ– 3,16,00,00 ಹಣ ಹಂಚಲಾಗಿದೆ ಎನ್ನಲಾಗ್ತಿದೆ. ಈ ಮಾಹಿತಿ ಆಧರಿಸಿಯೇ ಇದೀಗ ಕೈ ಕಲಿಗಳ ವಿರುದ್ಧ ಇಡಿ ಸಮರ ಸಾರಿದ್ದು, ಪೂರಕ ಸಾಕ್ಷ್ಯ ಮತ್ತು ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಹೀಗಾಗಿ ನಾಗೇಂದ್ರ ಬೆನ್ನಲ್ಲೇ, ಸಂಸದರು, ಶಾಸಕರಿಗೂ ಈಗ ಬಂಧನ ಭೀತಿ ಶುರುವಾಗಿದೆ.