ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮುಂಬರುವ ಚುನಾವಣೆಗೆ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷವು ತನ್ನ ಅಧಿಕೃತ ಅಭ್ಯರ್ಥಿಯಾಗಿ ಹಿರಿಯ ಶಿಕ್ಷಣತಜ್ಞ, ನಿವೃತ್ತ ಶಿಕ್ಷಕ ಹಾಗೂ ಪ್ರಾಂಶುಪಾಲರಾದ ಡಾ. ಜಿ.ಆರ್ ಹೆಬ್ಬುರೂ ಅವರನ್ನು ಘೋಷಿಸಿದೆ.
ಜುಲೈ 14ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ಈ ಘೋಷಣೆ ಮಾಡಿದ್ದಾರೆ. ಹಲವು ವರ್ಷಗಳ ಕಾಲ ಶಿಕ್ಷಕರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಡಾ. ಹೆಬ್ಬುರೂ ಅವರು ಶಿಕ್ಷಣ ಕ್ಷೇತ್ರದ ಸವಾಲುಗಳು, ಶಿಕ್ಷಕರ ಸಮಸ್ಯೆಗಳು, ಶೈಕ್ಷಣಿಕ ವ್ಯವಸ್ಥೆಯ ಅಗತ್ಯಗಳು ಹಾಗೂ ಶಿಕ್ಷಕರ ಹಕ್ಕುಗಳ ಬಗ್ಗೆ ಆಳವಾದ ಅನುಭವ ಮತ್ತು ಅರಿವು ಹೊಂದಿದ್ದು, ಶಿಕ್ಷಕರ ನಿಜವಾದ ಧ್ವನಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಪಕ್ಷ ತಿಳಿಸಿದೆ.

ಈ ವೇಳೆ ಮಾತನಾಡಿದ ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು, ದೇಶದ ಕೇವಲ ಆರು ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್ ವ್ಯವಸ್ಥೆ ಇದ್ದು, ಶಿಕ್ಷಕರು, ಪದವೀಧರರು ಹಾಗೂ ವಿವಿಧ ಕ್ಷೇತ್ರಗಳ ಪರಿಣಿತರನ್ನು ಶಾಸನ ಪ್ರಕ್ರಿಯೆಯಲ್ಲಿ ಭಾಗಿಯಾಗಿಸಲು ಈ ವ್ಯವಸ್ಥೆ ರೂಪಿಸಲಾಗಿದೆ. ವಿಧಾನಸಭೆಯಲ್ಲಿ ಸರ್ಕಾರದ ನಿರ್ಧಾರಗಳ ಕುರಿತು ಗುಣಾತ್ಮಕ ಚರ್ಚೆ ನಡೆಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಮಹತ್ವದ ಜವಾಬ್ದಾರಿ ವಿಧಾನ ಪರಿಷತ್ತಿನ ಮೇಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಪವಿತ್ರ ಸದನ ತನ್ನ ಮೂಲ ಉದ್ದೇಶದಿಂದ ದೂರ ಸರಿದು ಭ್ರಷ್ಟ ರಾಜಕಾರಣಿಗಳ ತಾಣವಾಗಿ ಮಾರ್ಪಡುತ್ತಿರುವುದು ವಿಷಾದನೀಯ ಎಂದು ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆಗಳಲ್ಲೂ ಹಣ, ಮದ್ಯ, ಉಡುಗೊರೆ ಹಾಗೂ ವಿವಿಧ ಆಮಿಷಗಳ ಪ್ರಭಾವ ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಸಮಾಜಕ್ಕೆ ಜ್ಞಾನ ನೀಡುವ ಶಿಕ್ಷಕರು ಇಂತಹ ಆಮಿಷಗಳಿಗೆ ಮಾರುಹೋಗದೆ ಮೌಲ್ಯಾಧಾರಿತ ಹಾಗೂ ಪ್ರಾಮಾಣಿಕ ರಾಜಕಾರಣವನ್ನು ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ. ರಾಜಕಾರಣ ಪವಿತ್ರ ಕ್ಷೇತ್ರವಾಗಿದ್ದು, ಭ್ರಷ್ಟರನ್ನು ತಿರಸ್ಕರಿಸಿ ಪ್ರಾಮಾಣಿಕರನ್ನು ಆಯ್ಕೆ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದ್ದಾರೆ.
ಇದುವರೆಗೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಬಹುತೇಕ ಪ್ರತಿನಿಧಿಗಳು ಶಿಕ್ಷಕರ ನೈಜ ಸಮಸ್ಯೆಗಳನ್ನು ಸಮರ್ಪಕವಾಗಿ ಪ್ರತಿನಿಧಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ ರವಿ ಕೃಷ್ಣಾರೆಡ್ಡಿ ಅವರು, ಶಿಕ್ಷಕರ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವು ಶಿಕ್ಷಕರಿಗೇ ಇರುತ್ತದೆ. ಶಿಕ್ಷಕರಾಗಿ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಡಾ. ಜಿ.ಆರ್. ಹೆಬ್ಬುರೂ ಅವರಿಗೆ ಶಿಕ್ಷಣ ವ್ಯವಸ್ಥೆಯ ಸವಾಲುಗಳು, ಶಿಕ್ಷಕರ ಹಕ್ಕುಗಳು ಹಾಗೂ ಸಮಸ್ಯೆಗಳ ಕುರಿತು ಆಳವಾದ ಅನುಭವವಿರುವುದರಿಂದ ಅವರು ವಿಧಾನ ಪರಿಷತ್ತಿನಲ್ಲಿ ಶಿಕ್ಷಕರ ಪರವಾಗಿ ಪರಿಣಾಮಕಾರಿಯಾಗಿ ಧ್ವನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಕರ ವೇತನ ತಾರತಮ್ಯದ ವಿಷಯವನ್ನೂ ಪ್ರಸ್ತಾಪಿಸಿದ ಅವರು, ಸರ್ಕಾರಿ ಶಾಲೆಗಳ ಖಾಯಂ ಶಿಕ್ಷಕರಿಗೆ ಉತ್ತಮ ವೇತನ ದೊರೆಯುತ್ತಿರುವಾಗ, ಅದೇ ವಿದ್ಯಾರ್ಹತೆ ಮತ್ತು ಅದೇ ಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸುವ ಅತಿಥಿ ಶಿಕ್ಷಕರು ಹಾಗೂ ಖಾಸಗಿ ಶಾಲಾ ಶಿಕ್ಷಕರು ಕೇವಲ ₹10,000 ರಿಂದ ₹15,000 ಸಂಬಳಕ್ಕೆ ದುಡಿಯಬೇಕಾಗಿರುವುದು ತೀವ್ರ ಶೋಷಣೆ ಎಂದು ಹೇಳಿದರು. ಒಂದೇ ರೀತಿಯ ವಿದ್ಯಾರ್ಹತೆ ಮತ್ತು ಜವಾಬ್ದಾರಿ ಹೊಂದಿದ್ದರೂ ವೇತನದಲ್ಲಿ ಇಷ್ಟೊಂದು ತಾರತಮ್ಯ ಇರುವುದು ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಶಿಕ್ಷಕರ ವೇತನ ತಾರತಮ್ಯ, ಖಾಸಗಿ ಹಾಗೂ ಅತಿಥಿ ಶಿಕ್ಷಕರ ಸಮಸ್ಯೆಗಳು ಸೇರಿದಂತೆ ಶಿಕ್ಷಣ ಕ್ಷೇತ್ರದ ಅನ್ಯಾಯಗಳ ಕುರಿತು ವಿಧಾನ ಪರಿಷತ್ತಿನಲ್ಲಿ ಬಲವಾಗಿ ಹೋರಾಡಬೇಕಾದ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು KRS ಪಕ್ಷ ಆರೋಪಿಸಿದೆ. ವಿಧಾನ ಪರಿಷತ್ತಿನ ಘನತೆಯನ್ನು ಮರುಸ್ಥಾಪಿಸಲು, ಶಿಕ್ಷಣ ಕ್ಷೇತ್ರದಲ್ಲಿನ ಶೋಷಣೆಗೆ ಅಂತ್ಯ ಹಾಡಲು ಹಾಗೂ ಶಿಕ್ಷಕರ ನಿಜವಾದ ಧ್ವನಿಯಾಗಿ ಕಾರ್ಯನಿರ್ವಹಿಸಲು ಡಾ. ಜಿ. ಆರ್. ಹೆಬ್ಬುರೂ ಅವರನ್ನು ಭಾರಿ ಬಹುಮತದಿಂದ ಗೆಲ್ಲಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಸಮಸ್ತ ಶಿಕ್ಷಕರಲ್ಲಿ ಮನವಿ ಮಾಡಿದೆ.
ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ರಘು ಜಾಣಗೆರೆ, ಕಾರ್ಯದರ್ಶಿ ನರಸಿಂಹಮೂರ್ತಿ, ಜಂಟಿ ಕಾರ್ಯದರ್ಶಿ ಎಲ್. ಜೀವನ್, ಸಂಘಟನಾ ಕಾರ್ಯದರ್ಶಿಗಳಾದ ಆರೋಗ್ಯ ಸ್ವಾಮಿ, ಕೃಷ್ಣ ವಿ. ಬಿ., ಆನಂದ್, ರಘುನಂದನ್ ಹಾಗೂ ಬೆಂಗಳೂರಿನ ವಿವಿಧ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ : ತಪ್ಪು ಮಾಡಿದ್ರೆ ನಂಗೆ ಪೊರಕೆಯಲ್ಲಿ ಹೊಡೀರಿ, ಹೊಡೆಸಿಕೊಳ್ತೀನಿ : ಸಿಎಂ ಡಿಕೆಶಿ



















