ತುಮುಕೂರು : ತುಮಕೂರಿನ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಅದ್ದೂರಿ ಸ್ವಾಗತ ಸ್ವೀಕರಿಸಿದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ತಮ್ಮ ರಾಜಕೀಯ ಹಾಗೂ ವೈಯಕ್ತಿಕ ಜೀವನದ ಹಲವು ನೆನಪುಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. ಜೊತೆಗೆ ತಂದೆ ಗಂಗಾಧರಯ್ಯ ಅವರ ಕನಸು, ಶಿಕ್ಷಣದ ಮಹತ್ವ ಹಾಗೂ ರಾಜಕೀಯ ಜೀವನದ ಏಳು-ಬೀಳುಗಳನ್ನು ನೆನೆದು ಮನಬಿಚ್ಚಿ ಮಾತನಾಡಿದ್ದಾರೆ.
ತಾವು ಮೊದಲ ಬಾರಿಗೆ ಸಚಿವರಾಗಿ ಮನೆಗೆ ಬಂದಾಗ ತಂದೆ ಹಾರ ಹಾಕಿ ಕಣ್ಣೀರು ಹಾಕಿದ್ದನ್ನು ಸ್ಮರಿಸಿದ ಪರಮೇಶ್ವರ್, ಅದು ದುಃಖದ ಕಣ್ಣೀರು ಅಲ್ಲ, ಆನಂದ ಬಾಷ್ಪ ಎಂದು ತಂದೆ ಹೇಳಿದ್ದ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.
ಸಿದ್ದಾರ್ಥ ಶಿಕ್ಷಣ ಸಂಸ್ಥೆ ಸಾಮಾನ್ಯವಾಗಿ ಬೆಳೆದಿಲ್ಲ. ಅಟೆಂಡರ್ನಿಂದ ಪ್ರಾಂಶುಪಾಲರವರೆಗೆ ಎಲ್ಲರ ಶ್ರಮದಿಂದ ಇಂದು ವಿಶ್ವವಿದ್ಯಾಲಯ ಈ ಮಟ್ಟಕ್ಕೆ ಬೆಳೆದಿದೆ. ಶಿಕ್ಷಣ ಮನುಷ್ಯನ ವ್ಯಕ್ತಿತ್ವ, ಸಂಸ್ಕೃತಿ ಹಾಗೂ ಬದುಕನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಜಾತಿ, ಧರ್ಮದ ಭೇದಗಳನ್ನು ಮೀರಿಸಿ ಸಮಾಜದಲ್ಲಿ ಪರಿವರ್ತನೆ ತರುವ ಸಾಧನವೇ ಶಿಕ್ಷಣ. ಸಿದ್ದಾರ್ಥ ಸಂಸ್ಥೆಯ ವಿದ್ಯಾರ್ಥಿಗಳು ಇಂದು ಅಮೆರಿಕ, ಯುರೋಪ್, ಆಫ್ರಿಕಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ತಮ್ಮ ಜೀವನದ ಮಹತ್ವದ ತಿರುವಿನ ಬಗ್ಗೆಯೂ ಮಾತನಾಡಿದ ಪರಮೇಶ್ವರ್, ಪಿಎಚ್ಡಿ ನಂತರ ಅಮೆರಿಕ, ಫ್ರಾನ್ಸ್, ಕೆನಡಾ ಹಾಗೂ ಆಸ್ಟ್ರೇಲಿಯಾದಲ್ಲಿ ಅವಕಾಶಗಳು ಬಂದಿದ್ದರೂ ತಂದೆಯ ಮಾತಿನಂತೆ ಭಾರತಕ್ಕೆ ಮರಳಿ ಸಮಾಜ ಸೇವೆ ಮಾಡಲು ನಿರ್ಧರಿಸಿದ್ದಾಗಿ ಹೇಳಿದರು. ರಾಜಕೀಯಕ್ಕೆ ಬರುವ ಕಲ್ಪನೆಯೇ ಇರಲಿಲ್ಲ. ಆದರೆ ರಾಜೀವ್ ಗಾಂಧಿ ಅವರ ಸಂಪರ್ಕದಿಂದ ಕಾಂಗ್ರೆಸ್ ಪಕ್ಷ ಸೇರಿ ಸಾರ್ವಜನಿಕ ಜೀವನ ಆರಂಭವಾಯಿತು ಎಂದು ತಿಳಿಸಿದ್ದಾರೆ.
ಸುಮಾರು 40 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷ ಹಲವು ಮಹತ್ವದ ಜವಾಬ್ದಾರಿಗಳನ್ನು ನೀಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಹಿಡಿದು ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯತ್ವದವರೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದೇನೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ರಾಜಕೀಯ ಪಯಣದ ಏರುಪೇರುಗಳನ್ನು ನೆನೆದು ಭಾವುಕರಾದ ಅವರು, ಹಲವು ಬಾರಿ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ಸಂದರ್ಭಗಳ ನೋವನ್ನೂ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ಆದರೂ ಪಕ್ಷದ ಮೇಲಿನ ನಿಷ್ಠೆ ಕಳೆದುಕೊಳ್ಳದೆ ಸಾರ್ವಜನಿಕ ಸೇವೆಯನ್ನೇ ತಮ್ಮ ಗುರಿಯನ್ನಾಗಿ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ನಾವ್ಯಾರು ಶಾಶ್ವತ ಅಲ್ಲ, ಆದರೆ ನಾವು ಕಟ್ಟಿದ ಪರಂಪರೆ ಮುಂದುವರಿಯಬೇಕು ಎಂದು ಹೇಳಿದ ಪರಮೇಶ್ವರ್, ಶಿಕ್ಷಣ ಮತ್ತು ಸಮಾಜ ಸೇವೆಯೇ ತಮ್ಮ ಬದುಕಿನ ಮೂಲ ಧ್ಯೇಯ ಎಂದು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ : ‘ಇನ್ನೊಂದು ವರ್ಷದಲ್ಲಿ ರಾಜ್ಯ ಸರ್ಕಾರ ಬಿದ್ದೋಗುತ್ತೆ’ : ಶಾಸಕ ಸಮೃದ್ಧಿ ಮಂಜುನಾಥ್!



















