ಗದಗ: ನವ ವಿವಾಹಿತೆಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದು, ಕಿರುಕುಳದಿಂದ ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅತ್ತೆ, ಬಾವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಕುರಿತು ಗದಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅತ್ತೆ ಶಶಿಕಲಾ ಹಾಗೂ ಬಾವ ವೀರನಗೌಡರನ್ನು ಬಂಧಿಸಿದ್ದಾರೆ. ಗದಗನ ಬೆಟಗೇರಿಯ ಶರಣಬಸವೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾಗಿರುವ ಸೊಸೆ ಪೂಜಾ, ಅತ್ತೆ ಬಾವನ ಹೆಸರು ಬರೆದಿಟ್ಟು ನೇಣು ಹಾಕಿಕೊಂಡಿದ್ದಾರೆ. ಪೂಜಾ ಗದಗನ ಶರಣಬಸವೇಶ್ವರ ನಗರದ ಅಮರೇಶ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಆದರೆ, ಪತಿಯ ಮನೆಯಲ್ಲಿ ಕಿರುಕುಳ ಹೆಚ್ಚಿತ್ತು ಎನ್ನಲಾಗಿದೆ. ಈ ವಿಷಯವಾಗಿ ಎರಡೂ ಕುಟುಂಬಗಳ ಮಧ್ಯೆ ತೀವ್ರ ಜಗಳ ಕೂಡ ನಡೆದಿದೆ ಎನ್ನಲಾಗಿದೆ.
ಈಗ ಪೂಜಾ ಕುಟುಂಬಸ್ಥರು ಅತ್ತೆ, ಬಾವನ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವಿಷಯವಾಗಿ ಹೈ ಡ್ರಾಮಾವೇ ನಡೆದಿದೆ.
ನಾ ಏನೂ ತಪ್ಪು ಮಾಡಿಲ್ಲ ಅಂತ ಅತ್ತೆ ಗೋಗೆರೆದರೆ, ಇತ್ತ ಅತ್ತೆಯಿಂದಲೇ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಕಣ್ಣೀರು ಸುರಿಸಿದ್ದಾರೆ. ಪೂಜಾ ಪ್ರತಿಯೊಂದು ವಿಷಯದಲ್ಲೂ ಅತ್ತೆಯಿಂದ ತೀವ್ರ ಕಿರುಕುಳ ಅನುಭವಿಸಿದ್ದಾರೆಂದು ಆರೋಪಿಸಿದ್ದಾರೆ. ಪೂಜಾ, ಅತ್ತೆಯ ಕಿರುಕುಳಕ್ಕೆ ಬೇಸತ್ತು ಊರಿಗೆ ಬರುವುದಾಗಿ ಪೋಷಕರ ಮುಂದೆ ಕಣ್ಣೀರು ಹಾಕಿದ್ದಳು. ಕಪ್ಪಗಿದ್ದಳು ಅಂತ ಸೊಸೆಯನ್ನು ಇಷ್ಟಪಡುತ್ತಿರಲಿಲ್ಲ. ಅಲ್ಲದೇ, ವರದಕ್ಷಿಣೆ ಕಿರುಕುಳ ನೀಡಿದ್ದಾಳೆ. ಹೀಗಾಗಿ ತಕ್ಕ ಶಿಕ್ಷೆಯಾಗಬೇಕು ಎಂದು ಪೂಜಾ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಗದಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.