ಮುರ್ಷಿದಾಬಾದ್: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ಡಂಗಾದಲ್ಲಿ ‘ಬಾಬರಿ ಮಸೀದಿ’ ಮಾದರಿಯ ಮಸೀದಿ ನಿರ್ಮಾಣದ ಶಂಕುಸ್ಥಾಪನೆ ಸಮಾರಂಭಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ತೃಣಮೂಲ ಕಾಂಗ್ರೆಸ್ನಿಂದ (ಟಿಎಂಸಿ) ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ನೇತೃತ್ವದಲ್ಲಿ ಇಂದೇ(ಡಿಸೆಂಬರ್ 6) ಈ ಕಾರ್ಯಕ್ರಮ ನಡೆಯಲಿದ್ದು, ಸುಮಾರು 3 ಲಕ್ಷ ಜನ ಸೇರುವ ನಿರೀಕ್ಷೆಯಿದೆ.
ಸೌದಿ ಅರೇಬಿಯಾದಿಂದ ಇಬ್ಬರು ಪ್ರಮುಖ ಧರ್ಮಗುರುಗಳು (ಖಾಜಿಗಳು) ವಿಶೇಷ ಬೆಂಗಾವಲು ಪಡೆಯೊಂದಿಗೆ ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ಆಗಮಿಸಲಿದ್ದಾರೆ. ಇದಲ್ಲದೆ, ವಿವಿಧ ರಾಜ್ಯಗಳ ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಸುಮಾರು 25 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭತ್ತದ ಗದ್ದೆಗಳ ಮಧ್ಯೆ ಬೃಹತ್ ವೇದಿಕೆ ನಿರ್ಮಿಸಲಾಗಿದೆ. 150 ಅಡಿ ಉದ್ದ ಮತ್ತು 80 ಅಡಿ ಅಗಲದ ಈ ವೇದಿಕೆಯಲ್ಲಿ 400 ಅತಿಥಿಗಳು ಕೂರಲು ಆಸನ ವ್ಯವಸ್ಥೆ ಮಾಡಲಾಗಿದ್ದು, ಇದರ ವೆಚ್ಚವೇ ಸುಮಾರು 10 ಲಕ್ಷ ರೂ. ಎನ್ನಲಾಗಿದೆ.
40 ಸಾವಿರ ಪ್ಯಾಕೆಟ್ ಬಿರಿಯಾನಿ ಊಟ:
ಸಮಾರಂಭಕ್ಕೆ ಬರುವ ಅತಿಥಿಗಳಿಗಾಗಿ ಬರೋಬ್ಬರಿ 40,000 ಪ್ಯಾಕೆಟ್ ಶಾಹಿ ಬಿರಿಯಾನಿಯನ್ನು ಮುರ್ಷಿದಾಬಾದ್ನ 7 ಪ್ರಸಿದ್ಧ ಕೇಟರಿಂಗ್ ಸಂಸ್ಥೆಗಳು ತಯಾರಿಸುತ್ತಿವೆ. ಸ್ಥಳೀಯರಿಗಾಗಿ ಹೆಚ್ಚುವರಿ 20,000 ಪ್ಯಾಕೆಟ್ ಊಟದ ವ್ಯವಸ್ಥೆ ಮಾಡಲಾಗಿದ್ದು, ಊಟಕ್ಕಾಗಿಯೇ ಸುಮಾರು 30 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ.

ಬಿಗಿ ಪೊಲೀಸ್ ಬಂದೋಬಸ್ತ್:
ರಾಷ್ಟ್ರೀಯ ಹೆದ್ದಾರಿ-12ರ (NH-12) ಪಕ್ಕದಲ್ಲೇ ಈ ಕಾರ್ಯಕ್ರಮ ನಡೆಯುತ್ತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ, ಕಲ್ಕತ್ತಾ ಹೈಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾ ಪೊಲೀಸ್ ಆಡಳಿತ ಬಿಗಿ ಭದ್ರತೆ ಏರ್ಪಡಿಸಿದೆ. ಬೆಲ್ಡಂಗಾ ಮತ್ತು ರಾಣಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 3,000 ಪೊಲೀಸರನ್ನು ನಿಯೋಜಿಸಲಾಗಿದ್ದು, ಹೆದ್ದಾರಿ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಶಾಸಕ ಕಬೀರ್ ಹೇಳಿಕೆ:
ಪಕ್ಷದಿಂದ ಅಮಾನತುಗೊಂಡಿದ್ದರೂ ಧೃತಿಗೆಡದ ಶಾಸಕ ಕಬೀರ್, “ಇದು ಈ ಭಾಗದ ಐತಿಹಾಸಿಕ ಕ್ಷಣ. ಧಾರ್ಮಿಕ ವಿಧಿವಿಧಾನಗಳೊಂದಿಗೆ ಬೆಳಿಗ್ಗೆ 10 ಗಂಟೆಗೆ ಕುರಾನ್ ಪಠಣ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಶಂಕುಸ್ಥಾಪನೆ ನಡೆಯಲಿದೆ. ಪೊಲೀಸ್ ನಿರ್ದೇಶನದಂತೆ ಸಂಜೆ 4 ಗಂಟೆಯೊಳಗೆ ಮೈದಾನ ಖಾಲಿ ಮಾಡಲಾಗುವುದು,” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಟ್ರಂಪ್ಗೆ ಕೊನೆಗೂ ಸಿಕ್ತು ಹೊಸ ಶಾಂತಿ ಪ್ರಶಸ್ತಿ | ಅಲ್ಲೂ ರಾಜಕೀಯ ತಂತ್ರವನ್ನೇ ಉಪಯೋಗಿಸ್ತಾ ದೊಡ್ಡಣ್ಣ?



















