ಬೆಂಗಳೂರು: ರಾಜ್ಯದಲ್ಲಿ ಹಕ್ಕಿ ಜ್ವರದ ಆತಂಕ ಮತ್ತೆ ತಲೆದೋರಿದ್ದು, H5N1 ಹಕ್ಕಿ ಜ್ವರ ವೈರಸ್ ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಚಿಂತೆ ಹೆಚ್ಚಿಸಿದೆ.
ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ನಡೆದ ತಪಾಸಣೆಯಲ್ಲಿ, ರಾಜ್ಯದ ಪೌಲ್ಟ್ರಿ ಫಾರಂನಲ್ಲಿ ಮೊದಲ ಹಂತದಲ್ಲೇ H5N1 ವೈರಸ್ ದೃಢಪಟ್ಟಿದೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಫಾರಂನಲ್ಲಿದ್ದ ಕೋಳಿಗಳನ್ನು ನಾಶಪಡಿಸಿ ಗುಂಡಿಯಲ್ಲಿ ಹೂಳಲಾಗಿದೆ.
ಬೆಂಗಳೂರು ಗ್ರಾಮಾಂತರ ಭಾಗದ ಹೆಸರಘಟ್ಟ ಪ್ರದೇಶದಲ್ಲಿರುವ ರಾಜ್ಯ ಸರ್ಕಾರದ ಪೌಲ್ಟ್ರಿ ಫಾರಂ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದೇ ಫಾರಂ ರಾಜ್ಯದ ವಿವಿಧ ಭಾಗಗಳಿಗೆ ಕೋಳಿ ಸರಬರಾಜು ಮಾಡುತ್ತಿದ್ದ ಪ್ರಮುಖ ಕೇಂದ್ರವಾಗಿತ್ತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪೌಲ್ಟ್ರಿ ಫಾರಂ ಕಾರ್ಮಿಕರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಸುತ್ತಮುತ್ತಲಿನ ಪಂಚಾಯಿತಿಗಳಿಗೆ ಎಚ್ಚರಿಕಾ ನೋಟಿಸ್ ನೀಡಲಾಗಿದ್ದು, ಕೋಳಿ ಅಂಗಡಿಗಳು ಮತ್ತು ಶೆಡ್ಗಳಲ್ಲಿ ಕಡ್ಡಾಯ ತಪಾಸಣೆ ಮಾಡಲು ಸೂಚಿಸಲಾಗಿದೆ.
ರಾಜ್ಯ ಸರ್ಕಾರವು ಪಶು ವೈದ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಯಾವುದೇ ಅನುಮಾನಾಸ್ಪದ ಪ್ರಕರಣ ಕಂಡುಬಂದರೆ ತಕ್ಷಣ ಮಾಹಿತಿ ನೀಡಲು ಆದೇಶಿಸಿದೆ.
ಜನರಿಗೆ ಸೂಚನೆಗಳು:
ಚೆನ್ನಾಗಿ ಬೇಯಿಸಿದ ಕೋಳಿ ಮಾಂಸ ಮಾತ್ರ ಸೇವಿಸಬೇಕು.
ಕಚ್ಚಾ ಮಾಂಸ ಸಂಪರ್ಕದ ನಂತರ ಕೈಗಳನ್ನು ಸ್ವಚ್ಛಗೊಳಿಸಬೇಕು.
ಅನಾರೋಗ್ಯದ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು.
ಬಿಸಿಲಿನ ತಾಪಮಾನ ಹೆಚ್ಚಿರುವ ಸಮಯದಲ್ಲೇ ಈ ವೈರಸ್ ಪತ್ತೆಯಾಗಿರುವುದು ವಿಶೇಷ.ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಅಗತ್ಯ ಎಂದು ಪಶು ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬ್ಲ್ಯಾಕ್ನಲ್ಲಿ ದುಪಟ್ಟು ಹಣಕ್ಕೆ IPL ಟಿಕೆಟ್ ಮಾರಾಟ – ಸಿಕ್ಕಿಬಿದ್ದ KSCA ಸಿಬ್ಬಂದಿ!


















