ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ತಮ್ಮ ಹೊಸ ಕಚೇರಿಯಾದ ಸೇವಾ ತೀರ್ಥವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಹೀಗೆ ಕಚೇರಿ ಪ್ರವೇಶಿಸಿದ ಮೊದಲ ದಿನವೇ ಅವರು ಮಹತ್ವದ ಯೋಜನೆಗೆ ಸಹಿ ಹಾಕಿದ್ದಾರೆ. ಹೌದು, ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಒಂದೂವರೆ ಲಕ್ಷ ರೂಪಾಯಿವರೆಗೆ ನಗದು ರಹಿತ ಚಿಕಿತ್ಸೆ ನೀಡುವ ಪಿಎಂ ರಾಹತ್ ಯೋಜನೆಗೆ (PM RAHAT-Road Accident Victim Hospitalisation and Assured Treatment) ಮೋದಿ ಚಾಲನೆ ನೀಡಿದ್ದಾರೆ. ಯೋಜನೆಯ ಲಾಭವೇನು ಎಂಬುದರ ಮಾಹಿತಿ ಇಲ್ಲಿದೆ.
ರಸ್ತೆ ಅಪಘಾತಕ್ಕೀಡಾದವರಿಗೆ ತುರ್ತು ಸಮಯದಲ್ಲಿ ಹಣದ ಕೊರತೆಯಿಂದ ಚಿಕಿತ್ಸೆ ವಿಳಂಬವಾಗದಂತೆ ನೋಡಿಕೊಳ್ಳುವ ಉದ್ದೇಶ ಹೊಂದಿದೆ. ರಸ್ತೆ ಅಪಘಾತಕ್ಕೀಡಾದವರಿಗೆ 1.5 ಲಕ್ಷ ರೂ. ಉಚಿತ ಮತ್ತು ನಗದು ರಹಿತ ವೈದ್ಯಕೀಯ ಚಿಕಿತ್ಸೆ ಲಭ್ಯವಿರುತ್ತದೆ. ಅಪಘಾತ ಸಂಭವಿಸಿದ ದಿನಾಂಕದಿಂದ ಮೊದಲ 7 ದಿನಗಳವರೆಗೆ ಪಿಎಂ ರಾಹತ್ ಯೋಜನೆ ಅನ್ವಯ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುತ್ತದೆ.
ರಸ್ತೆ ಅಪಘಾತದ ನಂತರದ ಮೊದಲ ಒಂದು ಗಂಟೆಯ ನಿರ್ಣಾಯಕ ಸಮಯದಲ್ಲಿ ತಕ್ಷಣದ ವೈದ್ಯಕೀಯ ನೆರವು ನೀಡುವುದಕ್ಕೆ ಇದು ಆದ್ಯತೆ ನೀಡುತ್ತದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದವರನ್ನು “ರಾಹ್ ವೀರ್’’ ಎಂದು ಕರೆಯುವ ಮೂಲಕ ಅವರಿಗೆ ಗೌರವ ನೀಡಲಾಗುತ್ತದೆ.
ಅಪಘಾತ ಸಂಭವಿಸಿದಾಗ ಸಂತ್ರಸ್ತರು ಅಥವಾ ಸಾರ್ವಜನಿಕರು 112 ಸಹಾಯವಾಣಿಗೆ ಕರೆ ಮಾಡಿ ಹತ್ತಿರದ ಆಸ್ಪತ್ರೆಗೆ ದಾಖಲಾಗಬಹುದು. ಇದಕ್ಕೆ ಆಂಬುಲೆನ್ಸ್ ಸೇವೆಯನ್ನು ಪಡೆಯಬಹುದು. ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಅಥವಾ ನಗರದ ರಸ್ತೆಗಳು ಸೇರಿ ಯಾವುದೇ ರಸ್ತೆಯಲ್ಲಿ ನಡೆದ ಅಪಘಾತಗಳಿಗೂ ಅನ್ವಯಿಸುತ್ತದೆ.
ಇದನ್ನೂ ಓದಿ : ‘ನಾದಬ್ರಹ್ಮ’ ಮೆಚ್ಚಿದ ‘ವೀರ ಕಂಬಳ’ ಟ್ರೈಲರ್..!



















