ನವದೆಹಲಿ: ಹೋಗಿದ್ದು ಕೇವಲ 8 ದಿನಗಳ ಕಾರ್ಯಾಚರಣೆಗಾಗಿ. ಆದರೆ, ತಂಗಿದ್ದು ಬರೋಬ್ಬರಿ 9 ತಿಂಗಳು!
ಭೂಮಿಯಿಂದ, ತಮ್ಮ ಕುಟುಂಬದಿಂದ, ಪ್ರೀತಿಪಾತ್ರರಿಂದ ಲಕ್ಷಗಟ್ಟಲೆ ಮೈಲು ದೂರದಲ್ಲಿ 9 ತಿಂಗಳು ಕಳೆಯುವುದೆಂದರೆ ಅದು ಸಾಮಾನ್ಯ ವಿಚಾರ ಅಲ್ಲವೇ ಅಲ್ಲ. ಅದರಲ್ಲೂ ತಾವು ಯಾವಾಗ ಭೂಮಿಗೆ ಮರಳುತ್ತೇವೆ ಎಂಬ ದಿನಾಂಕವೂ ಗೊತ್ತಿಲ್ಲದೇ ಅನಿಶ್ಚಿತತೆಯಿಂದ ದಿನ ದೂಡುವುದಿದೆಯಲ್ಲ, ಅದು ಹೇಳಲಾಗದ ಸಂಕಟ.
ಹೀಗಿದ್ದರೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಜೀವನೋತ್ಸಾಹವನ್ನು ಮಾತ್ರ ಕಳೆದುಕೊಂಡಿರಲಿಲ್ಲ. ವಯಸ್ಸು 59 ಆಗಿದ್ದರೂ, ಇನ್ನೂ 17ರ ಯುವತಿಯಂಥ ಉತ್ಸಾಹ ಅವರಲ್ಲಿತ್ತು, ಐಎಸ್ಎಸ್ ತನ್ನದೇ ಮನೆ ಎಂಬಂಥ ಸಕಾರಾತ್ಮಕ ಭಾವ ಅವರನ್ನು ಗಟ್ಟಿಗೊಳಿಸಿತ್ತು, ಭೂಮಿಗೆ ಒಂದಲ್ಲ ಒಂದು ದಿನ ಮರಳುತ್ತೇನೆ, ತನ್ನವರನ್ನು ಸೇರುತ್ತೇನೆ ಎಂಬ ಅಚಲ ನಂಬಿಕೆಯಿತ್ತು. ಆ ದಿಟ್ಟತನ, ಧೈರ್ಯ ಮತ್ತು ನಂಬಿಕೆಯೇ ಇಂದು ಅವರನ್ನು ಅವನಿ(ಭೂಮಿ)ಯತ್ತ ಮರಳಿ ಕರೆತರುತ್ತಿದೆ.
ಸುನೀತಾ ಅವರು ಸುರಕ್ಷಿತವಾಗಿ ಭೂಮಿಗೆ ಮರಳಲಿ ಎಂದು ಕಾದಿದ್ದು ಕೇವಲ ನಾಸಾ ಮಾತ್ರವಲ್ಲ. ಇಡೀ ಮನುಕುಲ. ಜಗತ್ತಿನ ಮೂಲೆ ಮೂಲೆಯ ಜನರೂ ಗಗನಯಾತ್ರಿಯ ಸುರಕ್ಷಿತ ಆಗಮನದ ಸುದ್ದಿ ಕೇಳಲು ತುದಿಗಾಲಲ್ಲಿ ನಿಂತಿದ್ದರು. ಭಾರತೀಯರಂತೂ ಸುನೀತಾ ಭಾರತದಲ್ಲೇ ಬಂದಿಳಿಯುತ್ತಾರೇನೋ ಎಂದೆನಿಸುವಷ್ಟರ ಮಟ್ಟಿಗೆ ಆಕೆಗಾಗಿ ಕಾದಿದ್ದರು. ಇದಕ್ಕೆ ಕಾರಣವೂ ಇದೆ. ಸುನೀತಾ ವಿಲಿಯಮ್ಸ್ ಅವರ ಮೂಲ ಗುಜರಾತ್. ಅವರು ಹುಟ್ಟಿದ್ದು ಅಮೆರಿಕದ ಓಹಿಯೋದಲ್ಲಿ(1965ರ ಸೆಪ್ಟೆಂಬರ್ 19ರಂದು). ಅವರ ತಂದೆಯ ಹೆಸರು ದೀಪಕ್ ಪಾಂಡ್ಯಾ, ತಾಯಿ ಬೋನಿ ಪಾಂಡ್ಯಾ. ಸುನೀತಾರ ತಂದೆ ದೀಪಕ್ ಪಾಂಡ್ಯಾ ಅವರು ವೃತ್ತಿಯಲ್ಲಿ ನರವಿಜ್ಞಾನಿ. ಗುಜರಾತ್ನ ಝುಲಾಸಾನ್ ಎಂಬ ಹಳ್ಳಿಯವರಾದ ದೀಪಕ್ ಅವರು 1957ರಲ್ಲಿ ಗುಜರಾತ್ ನಿಂದ ಅಮೆರಿಕಕ್ಕೆ ಹೋಗಿ, ಅಲ್ಲಿನವರೇ ಆದ ಬೋನಿ ಅವರನ್ನು ವಿವಾಹವಾಗುತ್ತಾರೆ.
ಝುಲಾಸಾನ್ ಎನ್ನುವುದು ಕೇವಲ 7 ಸಾವಿರ ಜನರಿರುವ ಪುಟ್ಟ ಹಳ್ಳಿ. ಆದರೆ, ಬಾಹ್ಯಾಕಾಶದವರೆಗೂ ತಲುಪಿರುವ ಸುನೀತಾ ವಿಲಿಯಮ್ಸ್ ಗೆ ನಮ್ಮ ನೆಲದ ನಂಟಿದೆ ಎನ್ನುವುದೇ ಈ ಹಳ್ಳಿಯ ಜನರಿಗೆ ಹೆಮ್ಮೆಯ ಸಂಗತಿ. ಇಲ್ಲಿ ಸುನೀತಾರ ಪೂರ್ವಿಕರ ಮನೆಯಿದೆ. ಜೊತೆಗೆ, ಅವರ ತಾತನ ಸ್ಮರಣಾರ್ಥ ಒಂದು ಗ್ರಂಥಾಲಯವನ್ನೂ ಇಲ್ಲಿ ನಿರ್ಮಿಸಲಾಗಿದೆ. ಹಾಗಂತ ಸುನೀತಾ ಅವರು ಇಲ್ಲಿನ ನಂಟನ್ನು ಕಳೆದುಕೊಂಡಿಲ್ಲ. ತಾವು ಬಾಹ್ಯಾಕಾಶ ವಿಜ್ಞಾನಿಯಾಗಿ, ಗಗನಯಾತ್ರಿಯಾಗಿ ಯಶಸ್ಸಿನ ಉತ್ತುಂಗಕ್ಕೆ ಏರಿದ ಬಳಿಕವೂ 1972, 2007 ಮತ್ತು 2013ರಲ್ಲಿ ಸುನೀತಾ ಝುಲಾಸಾನ್ ಗ್ರಾಮಕ್ಕೆ ಬಂದಿದ್ದರು. ಇಲ್ಲಿನ ಶಾಲೆಗೆ ದೇಣಿಗೆಯನ್ನೂ ನೀಡಿದ್ದರು.
2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತಲುಪಿದ ಸುನೀತಾ ಅವರು ಸದ್ಯಕ್ಕೆ ಭೂಮಿಗೆ ಮರಳಲಾರರು ಎಂಬ ಸುದ್ದಿಗಳು ಬರತೊಡಗಿದಾಗ ಈ ಹಳ್ಳಿಯ ಜನರಿಗೆ ಆಗಿರುವ ಆಘಾತ ಅಷ್ಟಿಷ್ಟಲ್ಲ. ಸುನೀತಾರ ಸುರಕ್ಷಿತ ಆಗಮನಕ್ಕಾಗಿ ಈ ಹಳ್ಳಿಯ ಜನ ಅಂದಿನಿಂದಲೂ ನಿತ್ಯ ಪ್ರಾರ್ಥನೆ ಮಾಡುತ್ತಿದ್ದಾರೆ. ತಮ್ಮ ಭರವಸೆಯ ಪ್ರತೀಕವಾಗಿ ಊರಿನಲ್ಲಿ ದೀಪವೊಂದನ್ನು ಹಚ್ಚಿಟ್ಟು, ಅದು ಆರದಂತೆ ನೋಡಿಕೊಂಡಿದ್ದಾರೆ. ಈಗ ಸುನೀತಾ ಭೂಮಿಯತ್ತ ಪ್ರಯಾಣ ಆರಂಭಿಸಿರುವುದು, ಈ ಗ್ರಾಮಸ್ಥರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.