ಬೆಂಗಳೂರು: ಚಿರಂಜೀವಿ ಹೆಸರಿನಲ್ಲಿ ಮೋಸವೊಂದು ನಡೆದಿರುವ ಘಟನೆ ನಡೆದಿದೆ. ಇದು ಅವರ ಗಮನಕ್ಕೆ ಬಂದಿದ್ದು, ಟ್ವೀಟ್ ಮಾಡುವ ಮೂಲಕ ಅವರು ಎಚ್ಚರಿಕೆ ನೀಡಿದ್ದಾರೆ.
ಮೋಸ ಹೋಗದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಚಿರಂಜೀವಿ ಸದ್ಯ ಇಂಗ್ಲೆಂಡ್ನಲ್ಲಿದ್ದಾರೆ. ಲಂಡನ್ನಲ್ಲಿರು ಪಾರ್ಲಿಮೆಂಟ್ನಲ್ಲಿ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ ಸಿಕ್ಕಿದೆ. ಪ್ರಶಸ್ತಿ ಸ್ವೀಕರಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
‘ನನ್ನ ಅಭಿಮಾನಿಗಳೇ, ಇಂಗ್ಲೆಂಡ್ನಲ್ಲಿ ನನ್ನ ಭೇಟಿಗೆ ನೀವು ತೋರುತ್ತಿರುವ ಪ್ರೀತಿ ಹಾಗೂ ವಾತ್ಸಲ್ಯ ನನಗೆ ಖುಷಿ ಕೊಟ್ಟಿದೆ. ಕೆಲವು ವ್ಯಕ್ತಿಗಳು ಅಭಿಮಾನಿಗಳ ಸಭೆಗಳಿಗೆ ಶುಲ್ಕ ವಿಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನನಗೆ ತಿಳಿದು ಬಂದಿದೆ. ಈ ನಡವಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ’ ಎಂದು ಕಿಡಿಕಾರಿದ್ದಾರೆ.
ಹಣ ಪಾವತಿಸಿದ್ದರೆ ತಕ್ಷಣವೇ ಮರುಪಾವತಿಸಲಾಗುತ್ತದೆ. ದಯವಿಟ್ಟು ಜಾಗರೂಕರಾಗಿರಿ ಮತ್ತು ನಾನು ಈ ರೀತಿಯ ವಿಚಾರಗಳನ್ನು ಎಂದಿಗೂ ಬೆಂಬಲಿಸುವುದಿಲ್ಲ. ನಾವು ಹಂಚಿಕೊಳ್ಳುವ ಪ್ರೀತಿ ಮತ್ತು ವಾತ್ಸಲ್ಯದ ಬಂಧವು ಅಮೂಲ್ಯವಾದುದು. ಇದನ್ನು ಯಾರೂ ಬಿಸ್ನೆಸ್ ಮಾಡಬಾರದು. ನಮ್ಮ ಮಾತುಕತೆ ಶೋಷಣೆಯಿಂದ ಮುಕ್ತವಾಗಿರಿಸಿಕೊಳ್ಳೋಣ’ ಎಂದು ಚಿರಂಜೀವಿ ಟ್ವೀಟ್ ಮೂಲಕ ಹೇಳಿದ್ದಾರೆ.