ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಳೆದ 7 ತಿಂಗಳಲ್ಲಿ 340ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿರುವುದು ಕಾಂಗ್ರೆಸ್ ಸರ್ಕಾರದ ಅರಾಜಕತೆಯ ಆಡಳಿತಕ್ಕೆ ಹಿಡಿದ ಕೈ ಗನ್ನಡಿ ಎಂಬ ಬಿಜೆಪಿ ಟ್ವೀಟ್ ಮಾಡಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿಯ ಸರ್ವೋಚ್ಛ ನಾಯಕ ಈಗ ಪೋಕ್ಸೋ ಕಾಯ್ದೆಯಡಿ ಜೈಲಿಗೆ ಹೋಗುವ ದಾರಿಯಲ್ಲಿದ್ದಾರೆಂದು ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಗೋಳಾಡುತ್ತಿರುವ ರಾಜ್ಯದ ಬಿಜೆಪಿ ನಾಯಕರೇ, ಮಹಿಳಾ ಭಕ್ಷಣೆ ಮತ್ತು ಮಹಿಳಾ ಭಕ್ಷಕರಿಗೆ ರಕ್ಷಣೆ ಕೊಡುವುದನ್ನು ನೀವು ನಿಲ್ಲಿಸಿದರೆ ರಾಜ್ಯದಲ್ಲಿ ಮಹಿಳೆಯರು ಮಾತ್ರವಲ್ಲ ಬಾಲಕಿಯರೂ ಸುರಕ್ಷಿತರಾಗಿರುತ್ತಾರೆ. ರಾಜ್ಯವೂ ಮಹಿಳೆಯರ ಪಾಲಿಗೆ ಸುರಕ್ಷಿತವಾಗಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿರುವ ನಿಮ್ಮ ಪಕ್ಷದ ಒಬ್ಬ ಸರ್ವೊಚ್ಚ ನಾಯಕರು ಪೋಕ್ಸೊ ಕಾಯ್ದೆಯಡಿ ಜೈಲಿಗೆ ಹೋಗುವ ದಾರಿಯಲ್ಲಿದ್ದಾರೆ. ನಿಮ್ಮ ಮಿತ್ರಪಕ್ಷವಾದ ಜೆಡಿ(ಎಸ್)ನ ಮಾಜಿ ಸಂಸದ ನೂರಾರು ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ, ಶಾಸಕರಾಗಿರುವ ಅವನ ತಂದೆ ಮೇಲೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ, ಅದೇ ಕುಟುಂಬದ ಇನ್ನೊಬ್ಬ ಶಾಸಕ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗಿದ್ದಾನೆ. ಇಂತಹ ಮಹಿಳಾ ಭಕ್ಷಕರನ್ನು ಕಟ್ಟಿಕೊಂಡು ಮೆರೆಯುತ್ತಿರುವ ನಿಮಗೆ ನಮ್ಮ ಸರ್ಕಾರದ ವಿರುದ್ದ ಆರೋಪ ಮಾಡುವ ಯಾವ ನೈತಿಕತೆ ಇದೆ ಎಂದು ವಿರೋಧಿಗಳಿಗೆ ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಅವರ ಬೇಟಿ ಬಚಾವೋ, ಬೇಟಿ ಪಡಾವೋ ಘೋಷಣೆಯ ಹಿಂದಿನ ಹಿಪಾಕ್ರಸಿಯನ್ನು ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ಬಂಡಿ ಸಂಜೀವ್ ಕುಮಾರ್ ಲೋಕಸಭೆಯಲ್ಲಿ ದಾಖಲೆ ಸಹಿತ ಬಿಡಿಸಿಟ್ಟಿದ್ದಾರೆ. 2014ರಲ್ಲಿ ದೇಶದ 3,39,457 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದ್ದರೆ 2022ರಲ್ಲಿ ಈ ಸಂಖ್ಯೆ 4,45,256ಕ್ಕೆ ಏರಿದೆ. ಇದೇ ಅವಧಿಯಲ್ಲಿ ಮಕ್ಕಳ ಮೇಲಿನ ಅತ್ಯಾಚಾರಗಳ ಸಂಖ್ಯೆ 89,423 ರಿಂದ 1,62,449ಕ್ಕೆ ಹೆಚ್ಚಿದೆ ಎಂದು ಸಚಿವರು ಕಳೆದ ಜುಲೈ 30ರಂದು ಲೋಕಸಭೆಯಲ್ಲಿ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ. ಇದೇನಾ ನೀವು ಹೇಳುತ್ತಿರುವ ಬೇಟಿ ಬಚಾವೋ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.