ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಬಗ್ಗೆ ಗಂಭೀರ ಆರೋಪ ಮಾಡಿದ್ದ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಮುಗಿ ಬಿದ್ದಿದೆ.
ಕೇತಗಾನಹಳ್ಳಿಯ ತೋಟಕ್ಕೆ ಕಬಳಿಸಿದ ಭೂಮಿ ಎಷ್ಟು? ಸಾಯಿ ವೆಂಕಟೇಶ್ವರ ಮಿನರಲ್ಸ್ ಯಾರ ಬೇನಾಮಿ ಕಂಪನಿ? ಎಂದು ಪ್ರಶ್ನಿಸಿದೆ. ಲ್ಲದೇ, ದಿನೇಶ್ ಗುಂಡೂರಾವ್ ಅವರನ್ನು ಗುಂಡಿರಾವ್ ಎಂದು ಮೂದಲಿಸಿದ್ದ ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿನ ಸರ್ಕಾರದ ಭೂಮಿಯನ್ನು ಕಬಳಿಸಿ ಕುಮಾರಸ್ವಾಮಿ ಅವರು ತೋಟ ಮಾಡಿದ್ದಾರೆ ಎಂಬ ಆರೋಪವಿದ್ದು, ಈ ಕುರಿತು ಕಾಂಗ್ರೆಸ್ ಧ್ವನಿ ಎತ್ತಿದೆ.
ಹೀಗಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, `ಕೇತಗಾನಹಳ್ಳಿಯ ತೋಟಕ್ಕೆ ಕಬಳಿಸಿದ ಭೂಮಿ ಎಷ್ಟು? ಸಾಯಿ ವೆಂಕಟೇಶ್ವರ ಮಿನರಲ್ಸ್ ಯಾರ ಬೇನಾಮಿ ಕಂಪೆನಿ? ಭೂಮಿ ಮಂಜೂರು ಮಾಡಿ ಸಹಿ ಹಾಕಿದ್ದ ಕುಮಾರಸ್ವಾಮಿಯವರಿಗೆ ಸಿಕ್ಕ ಲಾಭ ಏನು?” ಎಂದು ಪ್ರಶ್ನೆ ಮಾಡಿದೆ.
ಜೆಡಿಎಸ್ ಪಕ್ಷದ ಭಾಷೆ, ಅವರ ವಿಷಯ, ಅವರ ಚಿಂತನೆ, ಯೋಚನೆ ಥೇಟ್ ಅವರ “ಹಣ್ಣ“ನ ಮಾದರಿಯೇ! ಕೋಟಿ ಕೋಟಿ ಲೂಟಿ ಮಾಡಿಯೂ ”ಕರೆಂಟ್ ಕಳ್ಳ“ತನ ಮಾಡುವಷ್ಟು ಬರಗೆಟ್ಟ ಸ್ಥಿತಿಯಲ್ಲಿರುವ ಜೆಡಿಎಸ್ ಪಕ್ಷಕ್ಕೆ ನಮ್ಮ ಸರ್ಕಾರದ ಬಗ್ಗೆ, ನಮ್ಮ ಸಚಿವರ ಬಗ್ಗೆ ಟೀಕಿಸುವ ಯಾವುದೇ ನೈತಿಕತೆ ಉಳಿದಿಲ್ಲ ಎಂದು ಖಾರವಾಗಿ ಪ್ರಶ್ನಿಸಿದೆ.
ಕೊರೊನಾ ಸಂದರ್ಭದಲ್ಲಿ ಜನ ನರಳಿ ಸಾಯುತ್ತಿದ್ದಾಗ ಸ್ವಿಮ್ಮಿಂಗ್ ಪೂಲ್ ನಲ್ಲಿ ಮಜಾ ಉಡಾಯಿಸುತ್ತಿದ್ದವರ ಜೊತೆ ಕೈಗೊಡಿಸಿರುವ ಜೆಡಿಎಸ್ ಗೆ ಹಾಸನದ ಬಿಜೆಪಿ ನಾಯಕರು ಮೈತ್ರಿ ಪಾಠವನ್ನು ಚೆನ್ನಾಗಿ ಕಲಿಸುತ್ತಿದ್ದಾರೆ! ರಸ್ತೆ ಗುಂಡಿಗೆ ನೂರಾರು ಜನ ಬಲಿಯಾಗಿ ಹೈಕೋರ್ಟ್ ನಿಂದ ಛಿಮಾರಿ ಹಾಕಿಸಿಕೊಂಡ ಹಿಂದಿನ ಬಿಜೆಪಿ ಸರ್ಕಾರದ ಅವಾಂತರಗಳ ಕನಸು ಈಗ ಬೀಳುತ್ತಿರಬಹುದೇನೋ ಜೆಡಿಎಸ್ ಪಕ್ಷಕ್ಕೆ. ಇದೆಲ್ಲಕ್ಕಿಂತ ಮುಖ್ಯವಾಗಿ ಜೆಡಿಎಸ್ ರಾಜ್ಯದ ಜನಕ್ಕೆ ಉತ್ತರಿಸಬೇಕಾದ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಸವಾಲು ಹಾಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದ್ದ ಸಚಿವ ದಿನೇಶ್ ಗುಂಡೂರಾವ್ ಅವರನ್ನು ವ್ಯಂಗ್ಯವಾಡಿ ಜೆಡಿಎಸ್ ಪೋಸ್ಟ್ ಮಾಡಿತ್ತು. ‘ಮಜಾ’ರಾವ್ ಸ್ವಿಮ್ಮಿಂಗ್ ‘ಪೂಲ್ ಮಿನಿಸ್ಟರ್’ ದಿನೇಶ್ ಗುಂಡೂರಾವ್ ಎದ್ದೇಳಿ… ಗಾಂಧಿನಗರವನ್ನು ‘ಗುಂಡಿ ನಗರ’ ಮಾಡಿರುವ ಮಿಸ್ಟರ್ ‘ಗುಂಡಿ’ರಾವ್; ನೀವು ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಾ ಆರೋಗ್ಯ ಇಲಾಖೆಯನ್ನೇ ಐಸಿಯುನಲ್ಲಿಟ್ಟಿದ್ದೀರಲ್ಲವೇ ಈ ಸಾಧನೆಗೆ ಯಾವ ಪ್ರಶಸ್ತಿ, ಕಿರೀಟ ಕೊಡಬೇಕು? ಎಂದು ಜೆಡಿಎಸ್ ಪೋಸ್ಟ್ ಮಾಡಿತ್ತು.
ಹದಗೆಟ್ಟ ಆರೋಗ್ಯ ಇಲಾಖೆಯ ಸಚಿವರೇ.. ಜನರಿಗೆ ಉತ್ತಮ ಆರೋಗ್ಯ, ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಕೈಲಾಗದೇ ಬೆಂಗಳೂರನ್ನು ‘ಡೆಂಘೀಯೂರು’ ಮಾಡಿದ ಭ್ರಷ್ಟ ಸರ್ಕಾರ ನಿಮ್ಮದು. ಭ್ರಷ್ಟಚಾರದ ಆರೋಪದಲ್ಲಿ ಪ್ರಾಸಿಕ್ಯೂಷನ್ ಎದುರಿಸುತ್ತಿರುವ ಮೂಡರಾಮಯ್ಯನ ಪರವಾಗಿ ಊಳಿಡುತ್ತಾ ನಿಮ್ಮ ನರಿಬುದ್ಧಿ ಪ್ರದರ್ಶನ ಮಾಡುತ್ತಿದ್ದೀರಿ.. ಮುಖ್ಯಮಂತ್ರಿಗಳಿಗೆ “ವೈಟ್ನರ್” ಸಪ್ಲೈ ಮಾಡುವುದನ್ನು ಬಿಟ್ಟು ನಿಮ್ಮ ಆರೋಗ್ಯ ಇಲಾಖೆ ಬಗ್ಗೆ ಇನ್ನಾದರೂ ಗಮನ ಹರಿಸಿ.. ನಿಮ್ಮನ್ನು ಆಯ್ಕೆ ಮಾಡಿದ ಜನರ ಪ್ರಾಣ ಉಳಿಸಿ.. ಅವರ ಋಣ ತೀರಿಸಿ.. ಎಂದು ಟಾಂಗ್ ನೀಡಿತ್ತು. ಇದಕ್ಕೆ ಈಗ ಕಾಂಗ್ರೆಸ್ ಟಾಂಗ್ ಕೊಟ್ಟಿದೆ.