ಬೆಂಗಳೂರು: ನ್ಯಾಯಮೂರ್ತಿ ಅವರ ಹೆಸರಿನಲ್ಲಿ 7 ಜನರಿಗೆ ನಕಲಿ ಉದ್ಯೋಗ ನೇಮಕಾತಿ ನೀಡಿ ಬರೋಬ್ಬರಿ 49 ಲಕ್ಷ ರೂ. ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹೆಸರಿನಲ್ಲಿ 7 ಜನ ಉದ್ಯೋಗ ಆಕಾಂಕ್ಷಿತರಿಗೆ ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಲಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಲಿಕಾನ್ ಸಿಟಿಯ ಸಹಕಾರ ನಗರದ ನಿವಾಸಿ ಸಿದ್ದಲಿಂಗಯ್ಯ ಹಿರೇಮಠ್ ಹಾಗೂ ಲವೀನಾ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಆರ್.ಟಿ. ನಗರ ಕೌಸರ್ ಬಡಾವಣೆಯ ಅಬ್ದುಲ್ ರಜಾಕ್ ದೂರು ನೀಡಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಆರೋಪಿಗಳು ಒಟ್ಟು 7 ಜನ ಉದ್ಯೋಗ ಆಕಾಂಕ್ಷಿತರಿಗೆ ವಂಚಿಸಿರುವ ಕುರಿತು ಮಾಹಿತಿಯಿದೆ. ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ ನಂತರ ಈ ರೀತಿಯಾಗಿ ಎಷ್ಟು ಜನರಿಗೆ ವಂಚಿಸಿದ್ದಾರೆ ಎಂಬುವುದು ತಿಳಿದು ಬರಲಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.
ಕೊಪ್ಪಳದ ಸಿದ್ದಲಿಂಗಯ್ಯ ಹಿರೇಮಠ್ ಕೆಲವು ವರ್ಷಗಳಿಂದ ಸಹಕಾರ ನಗರದಲ್ಲಿ ವಾಸಿಸುತ್ತಿದ್ದರು. ತನಗೆ ನ್ಯಾಯಮೂರ್ತಿಗಳ ಪರಿಚಯವಿದ್ದು, ನೇರ ನೇಮಕಾತಿ ಮೂಲಕ ನ್ಯಾಯಾಲಯದಲ್ಲಿ ಕೆಲ ಹಂತದ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಉದ್ಯೋಗ ಆಕಾಂಕ್ಷಿಗಳಿಂದ ಹಂತಹಂತವಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರುದಾರ ಅಬ್ದುಲ್ ರಜಾಕ್ ನಾಗರಬಾವಿಯ ಪಾಪರೆಡ್ಡಿ ಪಾಳ್ಯದಲ್ಲಿ ಗೋಲ್ಡನ್ ಹ್ಯಾಂಡ್ಸ್ ಹೆಸರಿನಲ್ಲಿ ಮಹಿಳಾ ಪಿಜಿ ನಡೆಸುತ್ತಿದ್ದಾರೆ. ಅಲ್ಲದೇ ಎನ್ ಜಿಒ ನಡೆಸುತ್ತಿದ್ದಾರೆ. ಇವರಿಗೆ ಆರೋಪಿ ಸಿದ್ದಲಿಂಗಯ್ಯ ಪರಿಚಯವಾಗಿ, ಚಿಕ್ಕಬಳ್ಳಾಪುರದ ಕೆರೆಯೊಂದರಲ್ಲಿ ಹೂಳು ತೆಗೆಯುವ ಕೆಲಸ ಕೊಡಿಸುವುದಾಗಿ ನಂಬಿಸಿದ್ದರು. ನಂತರ ಆತನ ಕಚೇರಿಗೆ ತೆರಳಿದ್ದ ಸಂದರ್ಭದಲ್ಲಿ ಸರ್ಕಾರದಲ್ಲಿ ಈಗ ಅಗತ್ಯ ಹಣ ಇಲ್ಲ. ಅನುದಾನ ನೀಡಿದ ನಂತರ ಕೆಲಸ ಕೊಡಿಸುವುದಾಗಿ ಹೇಳಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ನಿಮ್ಮಲ್ಲಿ ಯಾರಿಗಾದರೂ ಕೆಲಸದ ಅಗತ್ಯವಿದ್ದರೆ ಹೇಳಿ. ನನಗೆ ನ್ಯಾಯಮೂರ್ತಿ ಪರಿಚಯವಿದ್ದು, ನ್ಯಾಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ಸಿದ್ಧಲಿಂಗಯ್ಯ ನಂಬಿಸಿದ್ದಾರೆ. ಇದನ್ನು ನಂಬಿದ ದೂರುದಾರ, ಸರ್ಕಾರಿ ಹುದ್ದೆಗಳು ಆನ್ ಲೈನ್ ಮೂಲಕ ಪ್ರಕ್ರಿಯೆ ಆಗಲಿದ್ದು, ಹೇಗೆ ಕೆಲಸ ಕೊಡಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ನ್ಯಾಯಾಧೀಶರು ತಮಗೆ ಪರಿಚಯ ಇರುವುದರಿಂದಾಗಿ ನೇರ ನೇಮಕಾತಿ ಮೂಲಕ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾರೆ ಎನ್ನಲಾಗಿದೆ.
ನಂತರ ಅಬ್ದುಲ್ ರಜಾಕ್ ತನ್ನ ಚಿಕ್ಕಪ್ಪನ ಪುತ್ರ ಜಾವೀದ್ ಗೆ ಕೆಲಸ ಕೊಡಿಸುವಂತೆ ಆರೋಪಿಯೊಂದಿಗೆ ಮಾತುಕತೆ ನಡೆಸಿದ್ದರು. ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದ ಜಾವೀದ್ ಗೆ ಸರ್ವರ್ ಹುದ್ದೆ ಕೊಡಿಸುವುದಾಗಿ ಹೇಳಿ ಸಿದ್ದಲಿಂಗಯ್ಯ ಹಂತ ಹಂತವಾಗಿ 7 ಲಕ್ಷ ರೂ. ಪಡೆದುಕೊಂಡಿದ್ದಾರೆ. ಆನಂತರ ಹೈಕೋರ್ಟ್ ನ್ಯಾಯಮೂರ್ತಿ ಹೆಸರಿನ ನಕಲಿ ಸಹಿಯುಳ್ಳ ನೇಮಕಾತಿ ಪತ್ರ ನೀಡಿದ್ದರು. ಜಾವೇದ್ ಜೊತೆಗೆ ಇನ್ನೂ 6 ಜನರಿಗೆ ಇದೇ ರೀತಿಯಲ್ಲಿ ವಂಚಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಉದ್ಯೋಗಿಗಳು ಕಲಬುರಗಿ ಕೋರ್ಟ್ ಗೆ ತೆರಳಿ ಅಲ್ಲಿ ನೇಮಕಾತಿ ಪತ್ರ ತೋರಿಸಿದಾಗ ಇದು ನಕಲಿ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ. ಆಗ ವಂಚನೆ ಬಯಲಿಗೆ ಬಂದಿದೆ.