ಬೆಂಗಳೂರು : ರಾಜ್ಯದ ಸಣ್ಣ ಹಾಗೂ ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಗಂಗಾ ಕಲ್ಯಾಣ ಯೋಜನೆ ಜಾರಿಗೊಳಿಸಿದೆ. ಯೋಜನೆ ಅಡಿಯಲ್ಲಿ ರೈತರ ಜಮೀನುಗಳಲ್ಲಿ ಕೊಳವೆಬಾವಿ ಕೊರೆಸಿ, ಪಂಪ್ ಸೆಟ್ ಅಳವಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರವೇ ಸಹಾಯಧನ ನೀಡುತ್ತದೆ. ಈಗ ರಾಜ್ಯ ಸರ್ಕಾರವು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ರೈತರು ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.
ಸಹಾಯಧನ ಎಷ್ಟು?
ಆಯಾ ಜಿಲ್ಲೆಗಳಿಗೆ ಅನುಗುಣವಾಗಿ ಯೋಜನೆ ಅಡಿಯಲ್ಲಿ ಸರ್ಕಾರ ಸಹಾಯಧನ ನೀಡುತ್ತದೆ. ಬೆಂಗಳೂರು ನಗರ, ಗ್ರಾಮಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಒಟ್ಟು ಘಟಕ ವೆಚ್ಚ 3.75 ಲಕ್ಷದಿಂದ 4 ಲಕ್ಷಗಳವರೆಗೆ ಇರುತ್ತದೆ (ಇದರಲ್ಲಿ ಬಹುಪಾಲು ಉಚಿತ ಸಹಾಯಧನ). ಇತರ ಜಿಲ್ಲೆಗಳಲ್ಲಿ ಘಟಕ ವೆಚ್ಚ 2.50 ಲಕ್ಷದಷ್ಟಿದ್ದು, ಇದರಲ್ಲಿ 2 ಲಕ್ಷ ಉಚಿತ ಸಹಾಯಧನ ಮತ್ತು ರೂ. 50,000 ಅತ್ಯಲ್ಪ ಬಡ್ಡಿದರದ ಸಾಲವಾಗಿರುತ್ತದೆ. ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಬೋರ್ವೆಲ್ ಬದಲಿಗೆ ತೆರೆದ ಬಾವಿ ಸೌಲಭ್ಯ ನೀಡಲಾಗುತ್ತದೆ.
ಅರ್ಹತಾ ಮಾನದಂಡಗಳೇನು?
- ಅರ್ಹ ವರ್ಗಗಳು : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯದ ಸಣ್ಣ/ಅತಿ ಸಣ್ಣ ರೈತರು ಯೋಜನೆಯ ಲಾಭ ಪಡೆಯಬಹುದು.
- ಜಮೀನಿನ ಮಿತಿ : ಕನಿಷ್ಠ 1 ರಿಂದ 5 ಎಕರೆ ಒಣಭೂಮಿ/ಖುಷ್ಕಿ ಜಮೀನು ಹೊಂದಿರಬೇಕು (ಕರಾವಳಿ/ಮಲೆನಾಡು ಭಾಗಗಳಲ್ಲಿ ಕನಿಷ್ಠ 1 ಎಕರೆ).
- ಆದಾಯ ಮಿತಿ : ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ 96 ಸಾವಿರ ರೂ. (ಅಥವಾ ನಿಗಮಗಳ ಮಾನದಂಡದಂತೆ) ಮೀರಬಾರದು.
- ವಯೋಮಿತಿ : 18 ರಿಂದ 55 ವರ್ಷದೊಳಗಿರಬೇಕು. ಸರ್ಕಾರದಿಂದ ಈಗಾಗಲೇ ಯಾವುದೇ ನೀರಾವರಿ ಯೋಜನೆಯ ಲಾಭ ಪಡೆದಿರಬಾರದು.
ಯಾವ ದಾಖಲೆಗಳು ಬೇಕು?
ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಜಮೀನಿನ ಪಹಣಿ ಹಾಗೂ ಖಾತಾ ಉತಾರ, ಸಣ್ಣ/ಅತಿ ಸಣ್ಣ ರೈತ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಭೂ ಕಂದಾಯ ಪಾವತಿಸಿದ ರಸೀದಿ, ಸ್ವಯಂ ಘೋಷಣಾ ಪತ್ರ ಮತ್ತು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ನೀಡಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು sevasindhu.karnataka.gov.inಗೆ ಭೇಟಿ ನೀಡಬೇಕು. ಆಫ್ ಲೈನ್ ಮೂಲಕ ಆದರೆ, ನಿಮ್ಮ ತಾಲೂಕು/ಜಿಲ್ಲಾ ಮಟ್ಟದ ಆಯಾ ಸಮುದಾಯ ಅಭಿವೃದ್ಧಿ ನಿಗಮದ ಕಚೇರಿಗೆ (ಉದಾ: ದೇವರಾಜ ಅರಸು ನಿಗಮ/ಅಂಬೇಡ್ಕರ್ ನಿಗಮ) ಭೇಟಿ ನೀಡಿ ಅರ್ಜಿ ಫಾರ್ಮ್ ಪಡೆದು, ಭರ್ತಿ ಮಾಡಿ ದಾಖಲೆಗಳೊಂದಿಗೆ ಸಲ್ಲಿಸಬಹುದು.
ಇದನ್ನೂ ಓದಿ : UPI Charges : ಉಚಿತ ಯುಪಿಐಗೆ ಶುಲ್ಕದ ಶಾಕ್? ಗ್ರಾಹಕರಿಗೆ ಹಣ ಕಟ್ ಆಗಲ್ಲ ; ಅಸಲಿ ಕಥೆ ಏನು?


















