ಬೆಂಗಳೂರು : ಭಾರತೀಯ ಕ್ರಿಕೆಟ್ ತಂಡದ ಆಟಗಾರರನ್ನು ಕಾಡುತ್ತಿರುವ ಗಾಯದ ಸಮಸ್ಯೆ ಮತ್ತು ಚೇತರಿಕೆ ವಿಳಂಬದ ನಡುವೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (CoE)ನಲ್ಲಿ Sports Science and Medicine Head ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಇತ್ತೀಚಿನ ದಿನಗಳಲ್ಲಿ ಪ್ರಮುಖ ಆಟಗಾರರು ಸತತವಾಗಿ ಗಾಯಕ್ಕೆ ಒಳಗಾಗುತ್ತಿರುವುದು ಹಾಗೂ ಚೇತರಿಕೆ ಪ್ರಕ್ರಿಯೆ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರ ಬಗ್ಗೆ ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ ಈ ನೇಮಕಾತಿಗೆ ಹೆಚ್ಚಿನ ಮಹತ್ವ ಬಂದಿದೆ. ಜಸ್ಪ್ರೀತ್ ಬುಮ್ರಾ, ನಿತೀಶ್ ಕುಮಾರ್ ರೆಡ್ಡಿ, ಹಾರ್ದಿಕ್ ಪಾಂಡ್ಯ ಮತ್ತು ವರುಣ್ ಚಕ್ರವರ್ತಿ ಸೇರಿದಂತೆ ಹಲವು ಆಟಗಾರರು ಗಾಯದ ಸಮಸ್ಯೆ ಎದುರಿಸಿರುವುದು ಬಿಸಿಸಿಐನ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ವ್ಯವಸ್ಥೆಯ ಮೇಲಿನ ಗಮನವನ್ನು ಹೆಚ್ಚಿಸಿದೆ.
ಬಹುದಿನಗಳಿಂದ ಖಾಲಿ ಇದ್ದ ಮಹತ್ವದ ಹುದ್ದೆ
ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಸ್ಪೋರ್ಟ್ಸ್ ಸೈನ್ಸ್ ಮತ್ತು ಮೆಡಿಸಿನ್ ವಿಭಾಗದ ಮುಖ್ಯಸ್ಥರ ಹುದ್ದೆ 2025ರ ಆರಂಭದಲ್ಲಿ ನಿತಿನ್ ಪಟೇಲ್ ನಿರ್ಗಮಿಸಿದ ಬಳಿಕ ಖಾಲಿಯಾಗಿತ್ತು. ಸದ್ಯ ಧನಂಜಯ್ ಕೌಶಿಕ್ ಅವರು ಬೆಂಗಳೂರಿನ ಕ್ರೀಡಾ ವಿಜ್ಞಾನ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದಾರೆ. ಇದೀಗ ಈ ವಿಭಾಗಕ್ಕೆ ಪೂರ್ಣಕಾಲಿಕ ಮುಖ್ಯಸ್ಥರನ್ನು ನೇಮಿಸಲು ಬಿಸಿಸಿಐ ಮುಂದಾಗಿದೆ. ಆಯ್ಕೆಯಾಗುವ ವ್ಯಕ್ತಿ ಆಟಗಾರರ ಆರೋಗ್ಯ, ಗಾಯ ತಡೆಗಟ್ಟುವಿಕೆ, ಪುನರ್ವಸತಿ, ದೈಹಿಕ ಸಾಮರ್ಥ್ಯ ಮತ್ತು ದೀರ್ಘಕಾಲೀನ ಅಭಿವೃದ್ಧಿಗೆ ಸಂಬಂಧಿಸಿದ ಸಂಪೂರ್ಣ ವ್ಯವಸ್ಥೆಯ ನೇತೃತ್ವ ವಹಿಸಲಿದ್ದಾರೆ.
ವಿವಿಎಸ್ ಲಕ್ಷ್ಮಣ್ಗೆ ನೇರವಾಗಿ ವರದಿ
ಹೊಸ ಮುಖ್ಯಸ್ಥರು ಕೇವಲ ವೈದ್ಯಕೀಯ ಚಟುವಟಿಕೆಗಳಿಗೆ ಸೀಮಿತವಾಗದೆ, ಆಟಗಾರರ ಗಾಯದ ಅಪಾಯ ನಿರ್ವಹಣೆ, ಚೇತರಿಕೆ, ವೆಲ್ನೆಸ್, ಸಂಶೋಧನೆ ಮತ್ತು ಹೊಸ ತಂತ್ರಜ್ಞಾನಗಳ ಬಳಕೆಯಲ್ಲೂ ಪ್ರಮುಖ ಪಾತ್ರ ವಹಿಸಲಿದ್ದಾರೆ. ಬಿಸಿಸಿಐನ ಹೆಡ್ ಆಫ್ ಕ್ರಿಕೆಟ್ ಆಗಿರುವ ವಿವಿಎಸ್ ಲಕ್ಷ್ಮಣ್ ಅವರಿಗೆ ನೇರವಾಗಿ ವರದಿ ಮಾಡುವ ವ್ಯವಸ್ಥೆ ಇರಲಿದೆ. ಹುದ್ದೆಗೆ ಅರ್ಜಿ ಸಲ್ಲಿಸುವವರು ಸ್ಪೋರ್ಟ್ಸ್ ಸೈನ್ಸ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಕನಿಷ್ಠ ಐದು ವರ್ಷಗಳ ಬಹುಶಿಸ್ತೀಯ ಹೈ-ಪರ್ಫಾರ್ಮೆನ್ಸ್ ತಂಡಗಳ ನೇತೃತ್ವದ ಅನುಭವವೂ ಅಗತ್ಯವಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30ರ ಸಂಜೆ 5 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಹುದ್ದೆ ಖಾಲಿಯಿರುವುದರಿಂದ ಸೆಂಟರ್ ಆಫ್ ಎಕ್ಸಲೆನ್ಸ್ನ ಚಟುವಟಿಕೆಗಳು ಸ್ಥಗಿತಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಸೂಕ್ತ ಅರ್ಹತೆ ಮತ್ತು ಅನುಭವ ಹೊಂದಿರುವ ವ್ಯಕ್ತಿಯನ್ನೇ ನೇಮಿಸುವ ಉದ್ದೇಶದಿಂದ ನೇಮಕಾತಿಗೆ ಸಮಯ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಗಾಯದ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ನೇಮಕಾತಿ ಭಾರತೀಯ ಕ್ರಿಕೆಟ್ನ ಆಟಗಾರರ ಆರೋಗ್ಯ ಮತ್ತು ಫಿಟ್ನೆಸ್ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿದೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : ‘ಇಂಥ ದೊಡ್ಡ ಕ್ರಿಕೆಟಿಗನಾದರೂ ಸರಳ ವ್ಯಕ್ತಿ’ ; ಲಂಡನ್ನಲ್ಲಿ ಕೊಹ್ಲಿಯನ್ನು ಭೇಟಿಯಾದ ಏಕನಾಥ್ ಶಿಂಧೆ!



















