ಬೆಂಗಳೂರು : ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದ 100 ದಿನಗಳ ಸಾಧನಾ ಸಮಾವೇಶ ನಾಳೆ ಬೆಂಗಳೂರಿನಲ್ಲಿ ನಡೆಯಲಿದ್ದು, ಸಮಾವೇಶದ ಮೂಲಕ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಗೆ ಟಕ್ಕರ್ ನೀಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಸರ್ಕಾರದ ಶತದಿನಗಳ ಸಾಧನೆಗಳನ್ನು ಜನರ ಮುಂದಿಡುವುದರ ಜೊತೆಗೆ ‘ಮಣ್ಣಿನ ಮಗನ ಸರ್ಕಾರ’ ಎಂಬ ಸಂದೇಶವನ್ನು ಜನರಿಗೆ ರವಾನಿಸಲು ಡಿಕೆಶಿ ತಂಡ ಸಜ್ಜಾಗಿದೆ.
ಶತದಿನಗಳ ಸಂಭ್ರಮದ ಹಿನ್ನೆಲೆಯಲ್ಲಿ ಜನಪರ ಯೋಜನೆಗಳು, ರೈತರು ಹಾಗೂ ಬಡವರಿಗೆ ಬಂಪರ್ ಕೊಡುಗೆಗಳನ್ನು ಘೋಷಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ನಿರೀಕ್ಷೆಯೂ ಇದೆ.
ಡಿಕೆ ಸರ್ಕಾರದ ಸಂಭಾವ್ಯ ಘೋಷಣೆಗಳು ಹಾಗೂ ನಿರೀಕ್ಷೆಗಳು :
- ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಡಿ ಸಿಗುವ ₹6 ಸಾವಿರಕ್ಕೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ₹4 ಸಾವಿರ ಸೇರಿಸಿ, ರೈತರಿಗೆ ಒಟ್ಟು ₹10 ಸಾವಿರ ನೀಡುವ ಮಹತ್ವದ ಘೋಷಣೆ ಸಾಧ್ಯತೆ.
- ರೈತರಿಗೆ ವಿಶೇಷ ಬರ ಪರಿಹಾರ ಪ್ಯಾಕೇಜ್ ಅಥವಾ ಕೃಷಿ ಸಾಲ ಮನ್ನಾ ಕುರಿತು ಸಿಎಂ ಘೋಷಣೆ ಮಾಡುವ ನಿರೀಕ್ಷೆ.
- ಹೆಚ್ಚಿನ ಗೋಶಾಲೆಗಳ ಸ್ಥಾಪನೆ ಹಾಗೂ ಮೇವು ಒದಗಿಸಲು ಅನುದಾನ ಘೋಷಣೆ ಸಾಧ್ಯತೆ.
- ಆಹಾರ ಮತ್ತು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ವಿಶೇಷ ಅನುದಾನ.
- ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಕುರಿತು ಹೊಸ ಘೋಷಣೆ.
- ಬಡ ಮತ್ತು ಮಧ್ಯಮ ವರ್ಗದವರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಹೊಸ ಆರೋಗ್ಯ ಯೋಜನೆ ಘೋಷಣೆ ಸಾಧ್ಯತೆ.
- 100 ದಿನಗಳಲ್ಲಿ 100 ಸರ್ಕಾರಿ ಶಾಲೆಗಳ ನವೀಕರಣ ಹಾಗೂ ನಿವೇಶನ ರಹಿತರಿಗೆ ಪ್ರತಿ ಜಿಲ್ಲೆಯಲ್ಲಿ 50 ಸಾವಿರ ನಿವೇಶನ ಹಂಚಿಕೆಯಂತಹ ಪ್ರಮುಖ ಘೋಷಣೆಗಳ ನಿರೀಕ್ಷೆ.
- ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆ ಹಾಗೂ ರಸ್ತೆ ಸುಧಾರಣೆಗೆ ಸುಮಾರು ₹2 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ.
ಹೀಗಾಗಿ ನಾಳಿನ ಸಾಧನಾ ಸಮಾವೇಶದಲ್ಲಿ ಸರ್ಕಾರದ 100 ದಿನಗಳ ಸಾಧನೆಗಳ ಜೊತೆಗೆ ಹೊಸ ಯೋಜನೆಗಳು ಹಾಗೂ ಬಂಪರ್ ಕೊಡುಗೆಗಳ ಘೋಷಣೆಯಾಗಲಿದೆಯೇ ಎಂಬ ಕುತೂಹಲ ಮೂಡಿದೆ.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಸಚಿವ ಸತೀಶ್ ಜಾರಕಿಹೊಳಿಗೆ ED ಶಾಕ್ ; ಡಾಲರ್ಸ್ ಕಾಲೋನಿ ಮನೆ ಸೇರಿ ಹಲವೆಡೆ ರೇಡ್!


















