ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಅಕ್ರಮವಾಗಿ ಮೊಬೈಲ್ ಪೂರೈಕೆ ಮಾಡಿದ್ದ ಬಾಣಸವಾಡಿಯ ನವೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ನವೀನ್ಗೆ ಪ್ರತಾಪ್ ರಾಯ್ ಎಂಬಾತನ ಪರಿಚಯವಾಗಿತ್ತು. ನವೀನ್ ಮೊಬೈಲ್ ಫೋನ್ ಅನ್ನು ಪ್ರತಾಪ್ ರಾಯ್ಗೆ ಪೂರೈಸಿದ್ದ. ಬಳಿಕ ಪ್ರತಾಪ್ ರಾಯ್ ಆ ಮೊಬೈಲ್ ಅನ್ನು ಪ್ರಜ್ವಲ್ ರೇವಣ್ಣ ಅವರಿಗೆ ನೀಡಿದ್ದ ಎಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜೈಲಿನೊಳಗೆ ಮೊಬೈಲ್ ಪೂರೈಕೆ ಮಾಡುವ ಸಂಬಂಧ ನವೀನ್ ಹಾಗೂ ಇತರರ ನಡುವೆ ಹಣದ ವ್ಯವಹಾರವೂ ನಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ಅಕ್ರಮವಾಗಿ ಮೊಬೈಲ್ ಪಡೆದ ಬಳಿಕ ಪ್ರಜ್ವಲ್ ರೇವಣ್ಣ ಮೊಬೈಲ್ಗೆ ಪಾಸ್ವರ್ಡ್ ಸೆಟ್ ಮಾಡಿಕೊಂಡಿದ್ದರು. ನಂತರ ಜೈಲಿನಲ್ಲಿದ್ದಾಗಲೇ ಮೊಬೈಲ್ ಮೂಲಕ ತಮಗೆ ಬೇಕಾದವರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್ ಪೂರೈಕೆ ಜಾಲದ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮೊಬೈಲ್ ಯಾರಿಂದ ಪಡೆದುಕೊಳ್ಳಲಾಗಿತ್ತು, ಹಣದ ವ್ಯವಹಾರದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಹಾಗೂ ಜೈಲಿನೊಳಗೆ ಮೊಬೈಲ್ ತಲುಪಲು ಸಹಕರಿಸಿದವರು ಯಾರು ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ : ಆಯುಷ್ಮಾನ್ ಭಾರತ್ ಯೋಜನೆ ಸೌಲಭ್ಯ ಪಡೆಯೋದು ಹೇಗೆ?


















