ಬೆಂಗಳೂರು : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ಸದ್ಯದಲ್ಲೇ ಮಹತ್ವದ ಬದಲಾವಣೆಗಳು ನಡೆಯುವ ಮುನ್ಸೂಚನೆ ಸಿಕ್ಕಿದ್ದು, ಭಾರತ ತಂಡದ ಮಾಜಿ ದಿಗ್ಗಜ ಬ್ಯಾಟರ್ ಹಾಗೂ ಪ್ರಸ್ತುತ ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರಿಗೆ ಬಿಸಿಸಿಐನ ‘ಕ್ರಿಕೆಟ್ ನಿರ್ದೇಶಕ’ ಎಂಬ ಬಹುದೊಡ್ಡ ಜವಾಬ್ದಾರಿಯನ್ನು ನೀಡುವ ಸಾಧ್ಯತೆಯಿದೆ.
ಸದ್ಯ ಬೆಂಗಳೂರಿನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಯುವ ಆಟಗಾರರನ್ನು ಪಳಗಿಸುತ್ತಿರುವ ಲಕ್ಷ್ಮಣ್, ಮುಂದಿನ ದಿನಗಳಲ್ಲಿ ಸಂಪೂರ್ಣ ಭಾರತೀಯ ಕ್ರಿಕೆಟ್ನ ಆಗುಹೋಗುಗಳನ್ನು ನಿರ್ವಹಿಸುವ ಅತ್ಯುನ್ನತ ಹುದ್ದೆಗೇರುವ ನಿರೀಕ್ಷೆ ದಟ್ಟವಾಗಿದೆ. ಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಸಿಸಿಐನ ಪ್ರಮುಖ ಹುದ್ದೆಗಳಲ್ಲಿ ರದ್ದಲಬದಲು ನಡೆಯುವ ಸಾಧ್ಯತೆಗಳಿದ್ದು, ಇದರ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆಯ ವರದಿಗಳು ಹೊರಬಿದ್ದಿವೆ.
ಸೆಪ್ಟೆಂಬರ್ನಲ್ಲಿ ಮಹತ್ವದ ಬದಲಾವಣೆಗಳ ನಿರೀಕ್ಷೆ
ಮುಂಬರುವ ಸೆಪ್ಟೆಂಬರ್ ತಿಂಗಳು ಭಾರತೀಯ ಕ್ರಿಕೆಟ್ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಪ್ರಸ್ತುತ ಹಿರಿಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುವ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಸೆಪ್ಟೆಂಬರ್ನಲ್ಲಿ ಮುಕ್ತಾಯಗೊಳ್ಳಲಿದೆ. ಒಂದು ವೇಳೆ ಬಿಸಿಸಿಐ ಅವರ ಅಧಿಕಾರಾಸೆಪ್ಟೆಂಬರ್ನಲ್ಲಿ ಮಹತ್ವದ ಬದಲಾವಣೆಗಳ ನಿರೀಕ್ಷೆವಧಿಯನ್ನು ೨೦೨೭ರ ಜೂನ್ವರೆಗೆ ವಿಸ್ತರಿಸದೇ ಇದ್ದರೆ, ಆಯ್ಕೆ ಸಮಿತಿಯಲ್ಲಿಯೂ ಬದಲಾವಣೆಗಳು ಅನಿವಾರ್ಯವಾಗಲಿವೆ. ಇದರ ಜೊತೆಗೆ ರಾಷ್ಟ್ರೀಯ ತಂಡದ ಕೋಚಿಂಗ್ ವ್ಯವಸ್ಥೆಯ ಮೇಲೂ ಮಂಡಳಿ ಹದ್ದಿನ ಕಣ್ಣಿಟ್ಟಿದೆ.
೨೦೨೭ರ ಏಕದಿನ ವಿಶ್ವಕಪ್ಗೆ ಈಗಿನಿಂದಲೇ ತಂಡವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಬಿಸಿಸಿಐ ಈ ಕಠಿಣ ಹಾಗೂ ಮಹತ್ವದ ಹೆಜ್ಜೆಗಳನ್ನು ಇಡುತ್ತಿದ್ದು, ಈ ಎಲ್ಲಾ ಪ್ರಕ್ರಿಯೆಗಳ ಸುಗಮ ನಿರ್ವಹಣೆಗಾಗಿ ವಿವಿಎಸ್ ಲಕ್ಷ್ಮಣ್ ಅವರನ್ನು ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಿಸಲು ಮಂಡಳಿ ಗಂಭೀರ ಚಿಂತನೆ ನಡೆಸಿದೆ.
‘ಕ್ರಿಕೆಟ್ ನಿರ್ದೇಶಕ’ ಹುದ್ದೆಯ ಜವಾಬ್ದಾರಿಗಳೇನು?
ಬಿಸಿಸಿಐನ ಅಂತಿಮ ರೂಪುರೇಷೆಗಳ ಆಧಾರದ ಮೇಲೆ ಕ್ರಿಕೆಟ್ ನಿರ್ದೇಶಕರ ಹುದ್ದೆಯ ಜವಾಬ್ದಾರಿಗಳು ನಿರ್ಧಾರವಾಗಲಿವೆ. ಆದರೆ, ಈ ಹುದ್ದೆಯು ಲಕ್ಷ್ಮಣ್ ಅವರನ್ನು ಭಾರತೀಯ ಕ್ರಿಕೆಟ್ ಕಾರ್ಯಾಚರಣೆಯ ಕೇಂದ್ರಬಿಂದುವನ್ನಾಗಿ ಮಾಡಲಿದೆ. ಹಿರಿಯ ರಾಷ್ಟ್ರೀಯ ತಂಡ, ಆಯ್ಕೆದಾರರು, ಕೋಚ್ಗಳು, ಸೆಂಟರ್ ಆಫ್ ಎಕ್ಸಲೆನ್ಸ್ ಮತ್ತು ವಿವಿಧ ಹಂತಗಳ ಯುವ ಆಟಗಾರರ ನಡುವೆ ಸಮನ್ವಯ ಸಾಧಿಸುವ ಪ್ರಮುಖ ಜವಾಬ್ದಾರಿ ಈ ಹುದ್ದೆಯದ್ದಾಗಿರುತ್ತದೆ.
ಪ್ರತಿಭಾವಂತ ಆಟಗಾರರನ್ನು ಗುರುತಿಸುವುದು, ಅವರ ಕೌಶಲ್ಯ ಅಭಿವೃದ್ಧಿ ಹಾಗೂ ಉನ್ನತ ಮಟ್ಟದ ಪ್ರದರ್ಶನಕ್ಕೆ ಅಗತ್ಯವಿರುವ ಭವಿಷ್ಯದ ಯೋಜನೆಗಳನ್ನು ರೂಪಿಸುವಲ್ಲಿ ಈ ಹುದ್ದೆ ಪ್ರಮುಖ ಪಾತ್ರ ವಹಿಸುತ್ತದೆ. ಈಗಾಗಲೇ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಲಕ್ಷ್ಮಣ್ ಅವರು ಇದೇ ರೀತಿಯ ಕೆಲಸಗಳನ್ನು ಮಾಡುತ್ತಿರುವುದರಿಂದ, ಈ ಹೊಸ ಜವಾಬ್ದಾರಿಯು ಅವರ ಪ್ರಸ್ತುತ ಕಾರ್ಯವ್ಯಾಪ್ತಿಯ ಮುಂದುವರಿದ ಭಾಗವಾಗಿರಲಿದೆ.
ರಾಷ್ಟ್ರೀಯ ತಂಡದೊಂದಿಗೆ ಲಕ್ಷ್ಮಣ್ ಅವರ ಯಶಸ್ವಿ ಒಡನಾಟ
ವಿವಿಎಸ್ ಲಕ್ಷ್ಮಣ್ ಅವರು ಈಗಾಗಲೇ ಹಿರಿಯ ರಾಷ್ಟ್ರೀಯ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮುಖ್ಯ ಕೋಚ್ಗಳ ಅನುಪಸ್ಥಿತಿಯಲ್ಲಿ ಅವರು ಹಲವು ಬಾರಿ ಹಂಗಾಮಿ ಕೋಚ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸದ ನಂತರ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಅವರ ಸಹಾಯಕ ಸಿಬ್ಬಂದಿಗೆ ವಿಶ್ರಾಂತಿ ನೀಡಿದ್ದಾಗ, ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ್ದ ಯುವ ಭಾರತ ತಂಡಕ್ಕೆ ಲಕ್ಷ್ಮಣ್ ಮಾರ್ಗದರ್ಶನ ನೀಡಿದ್ದರು.
ಅವರ ಗರಡಿಯಲ್ಲಿ ಪಳಗಿದ ಯುವ ಪಡೆ ಜಿಂಬಾಬ್ವೆ ವಿರುದ್ಧ ಟಿ೨೦ ಸರಣಿಯನ್ನು ೩-೦ ಅಂತರದಿಂದ ಗೆದ್ದು ಬೀಗಿತ್ತು. 2025ರಲ್ಲಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಗಿದಾಗ, ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೇರುವ ಅವಕಾಶವಿದ್ದರೂ ಲಕ್ಷ್ಮಣ್ ಅವರು ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿಯೇ ಮುಂದುವರಿಯಲು ಒಲವು ತೋರಿದ್ದರು. ಇದೀಗ ಕ್ರಿಕೆಟ್ ನಿರ್ದೇಶಕರ ಹುದ್ದೆಯು ಅಂತಿಮಗೊಂಡರೆ, ಲಕ್ಷ್ಮಣ್ ಅವರು ಕೇವಲ ಒಂದು ವಿಭಾಗಕ್ಕೆ ಸೀಮಿತವಾಗದೆ ಇಡೀ ಭಾರತೀಯ ಕ್ರಿಕೆಟ್ನ ವಿವಿಧ ಪ್ರಮುಖ ಇಲಾಖೆಗಳನ್ನು ಬೆಸೆಯುವ ಅತಿಮುಖ್ಯ ಕೊಂಡಿಯಾಗಿ ಹೊರಹೊಮ್ಮಲಿದ್ದಾರೆ.
ಇದನ್ನೂ ಓದಿ : ‘ಬುಮ್ರಾ ರಾಷ್ಟ್ರೀಯ ಸಂಪತ್ತು, ಅವರನ್ನು ಜತನದಿಂದ ಕಾಪಾಡಿಕೊಳ್ಳಿ’ : ಆಕಾಶ್ ಚೋಪ್ರಾ ಮಹತ್ವದ ಹೇಳಿಕೆ


















