ನವದೆಹಲಿ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ, ಕೇಂದ್ರ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತಾವು ಕೈಗೊಂಡಿದ್ದ 26 ದಿನಗಳ ನಿರಾಹಾರ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ ಕ್ಷಣದ ಭಾವಚಿತ್ರಗಳನ್ನು ಬಹಿರಂಗಪಡಿಸುವುದಿಲ್ಲ ಎಂಬ ಭರವಸೆಯನ್ನು ಮೀರಿ ಕೇಂದ್ರ ಸಚಿವರು ನಡೆದುಕೊಂಡಿದ್ದಾರೆ ಎಂದು ಪರಿಸರ ಹಾಗೂ ಶಿಕ್ಷಣ ಹೋರಾಟಗಾರ ಸೋನಂ ವಾಂಗ್ಚುಕ್ ಆರೋಪಿಸಿದ್ದಾರೆ.
ಮಾಧ್ಯಮ ಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ಕೊಟ್ಟ ಮಾತನ್ನು ತಪ್ಪಿ, ಫೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಮೂಲಕ ನಂಬಿಕೆದ್ರೋಹ ಎಸಗಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ನೀಟ್ (NEET) ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಜೂನ್ 28 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ವಾಂಗ್ಚುಕ್, ಆರೋಗ್ಯ ಸ್ಥಿತಿ ಕ್ಷೀಣಿಸಿದ ಹಿನ್ನೆಲೆಯಲ್ಲಿ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 24ರ ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಕಠಿಣ ಪರೀಕ್ಷಾ ಅಕ್ರಮ ತಡೆ ಕಾಯ್ದೆಯ ಭರವಸೆ ನೀಡಿದ ಬಳಿಕ, ಕೇಂದ್ರ ಸಚಿವರು ಆಸ್ಪತ್ರೆಗೆ ಆಗಮಿಸಿ, ನನ್ನ ಮನವೊಲಿಸಿದ್ದರು. ನಂತರ ಜ್ಯೂಸ್ ನೀಡಿ ಉಪವಾಸ ಅಂತ್ಯಗೊಳಿಸಿದ್ದರು. ಆದರೆ, ಈ ಇದನ್ನು ಕೇವಲ ಆಡಳಿತಾರೂಢ ಪಕ್ಷದ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು ಮತ್ತು ಪ್ರತಿಪಕ್ಷಗಳು ಹಾಗೂ ವಿದ್ಯಾರ್ಥಿ ನಾಯಕರ ಸಮ್ಮುಖದಲ್ಲೇ ಈ ಸುದ್ದಿಯನ್ನು ಜಂಟಿಯಾಗಿ ಮಾಧ್ಯಮಗಳಿಗೆ ತಿಳಿಸಬೇಕು ಎಂದು ನಾನು ಷರತ್ತು ವಿಧಿಸಿದ್ದೆ ಎಂದು ವಾಂಗ್ಚುಕ್ ಸ್ಪಷ್ಟಪಡಿಸಿದ್ದಾರೆ.
ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿಗಳ ಎದುರಲ್ಲೇ ವಚನಭಂಗ
ಸಚಿವರು ಕರೆತಂದಿದ್ದ ಛಾಯಾಗ್ರಾಹಕರು ಫೋಟೋ ತೆಗೆಯಲು ಅನುಮತಿ ನೀಡುವಾಗ, ಈ ಚಿತ್ರಗಳನ್ನು ತಕ್ಷಣವೇ ಮಾಧ್ಯಮಗಳಿಗೆ ನೀಡಬಾರದು ಎಂದು ಸಚಿವರಿಗೆ ಹಾಗೂ ಅಲ್ಲಿದ್ದ ಇಂಟೆಲಿಜೆನ್ಸ್ ಬ್ಯೂರೋ (IB) ಅಧಿಕಾರಿಗಳಿಗೆ ಸಾಕ್ಷಿಯಾಗಿ ವಿನಂತಿಸಿಕೊಳ್ಳಲಾಗಿತ್ತು. ಆದರೆ, ಮಾತುಕತೆ ಮುಗಿದ ಐದೇ ನಿಮಿಷಗಳಲ್ಲಿ ಆ ಫೋಟೋಗಳು ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗತೊಡಗಿದವು. ಸರ್ಕಾರ ಮತ್ತು ರಾಜಕಾರಣಿಗಳು ಯಾವುದೇ ಸಿದ್ಧಾಂತಕ್ಕೆ ಬದ್ಧರಾಗಿರದೆ ತಮ್ಮ ಸ್ವಾರ್ಥಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ ಎಂಬುದು ಇದರಿಂದ ಸಾಬೀತಾಗಿದ್ದು, ದೇಶದ ರಾಜಕೀಯ ನಾಯಕರ ಮೇಲಿದ್ದ ನಂಬಿಕೆಯೇ ಹೊರಟುಹೋಗಿದೆ ಎಂದು ವಾಂಗ್ಚುಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಪಪ್ರಚಾರಕ್ಕೆ ಸೋನಮ್ ವಾಂಗ್ಚುಕ್ ತಿರುಗೇಟು
ಸರ್ಕಾರದೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡು ಉಪವಾಸ ಅಂತ್ಯಗೊಳಿಸಿದ್ದಾರೆ ಎಂಬ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಅವರು, “ನನಗೆ ಸರ್ಕಾರದಿಂದ ಹುದ್ದೆ ಅಥವಾ ಸ್ವಾರ್ಥದ ಲಾಭ ಪಡೆಯುವ ಉದ್ದೇಶವಿದ್ದರೆ 26 ದಿನಗಳ ಕಾಲ ಕಠಿಣ ಉಪವಾಸ ಕುಳಿತುಕೊಳ್ಳುವ ಅಗತ್ಯವಿರಲಿಲ್ಲ. ಆರಂಭದಲ್ಲೇ ‘ನನ್ನನ್ನು ಶಿಕ್ಷಣ ಸಚಿವನನ್ನಾಗಿ ಮಾಡಿ’ ಎಂದು ಒಪ್ಪಂದ ಮಾಡಿಕೊಳ್ಳಬಹುದಿತ್ತು. ಭಾರತದ ಯುವಜನರ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹೋರಾಟ ನಡೆಸಿದ ನನ್ನ ಮೇಲೆ ಇಂತಹ ಆರೋಪ ಮಾಡುವುದು ಅತ್ಯಂತ ವಿಷಾದನೀಯ” ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ : ಭಾರತೀಯ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಜ್ಜಾದ ಪ್ರೀಮಿಯಂ ಹ್ಯಾಚ್ಬ್ಯಾಕ್ ಕಾರುಗಳು


















