ಬೆಂಗಳೂರು : ಟೀಮ್ ಇಂಡಿಯಾದಲ್ಲಿ ಯುವ ವೇಗದ ಬೌಲರ್ಗಳಿಗೆ ಸತತವಾಗಿ ಅವಕಾಶ ನೀಡುತ್ತಿರುವುದರಿಂದ, ತಂಡದ ಪ್ರಮುಖ ಅನುಭವಿ ಬೌಲರ್ಗಳಾದ ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಅವರ ವೃತ್ತಿಜೀವನ ಮುಕ್ತಾಯದ ಹಂತ ತಲುಪಿದೆಯೇ ಎಂಬ ಪ್ರಶ್ನೆಗಳು ಕ್ರಿಕೆಟ್ ವಲಯದಲ್ಲಿ ಎದ್ದಿವೆ. ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ದಿಗ್ಗಜ ವೇಗಿ ಹಾಗೂ ವಿಶ್ವಕಪ್ ವಿಜೇತ ಆಟಗಾರ ಜಹೀರ್ ಖಾನ್ ಮೌನ ಮುರಿದಿದ್ದು, ಅನುಭವಿ ವೇಗಿಗಳ ಭವಿಷ್ಯದ ಕುರಿತು ತಮ್ಮ ಖಚಿತವಾದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಭಾರತ ತಂಡವು ಪ್ರಸ್ತುತ ಮುಂಬರುವ ದಿನಗಳ ದೃಷ್ಟಿಯಿಂದ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಯುವ ಆಟಗಾರರನ್ನು ಪರೀಕ್ಷಿಸುತ್ತಿದೆ. ಹಾಗೆಂದ ಮಾತ್ರಕ್ಕೆ ಹಿರಿಯ ಆಟಗಾರರ ಕಥೆ ಮುಗಿದೇ ಹೋಯಿತು ಎಂದು ಅರ್ಥವಲ್ಲ ಎಂಬುದಾಗಿ ಜಹೀರ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಶಮಿ ಮತ್ತು ಸಿರಾಜ್ ಕಥೆ ಮುಗಿದಿಲ್ಲ
ಭಾರತ ತಂಡದ ಮ್ಯಾನೇಜ್ಮೆಂಟ್ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಯುವ ಬೌಲರ್ಗಳಿಗೆ ಮಣೆ ಹಾಕುತ್ತಿರುವ ಹಿನ್ನೆಲೆಯಲ್ಲಿ, ಸಿರಾಜ್ ಮತ್ತು ಶಮಿಯ ಅವಕಾಶಗಳು ಬಂದ್ ಆಗಿವೆ ಎಂಬ ವಾದವನ್ನು ಜಹೀರ್ ಖಾನ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. “ಹೊಸ ಯುವ ಆಟಗಾರರಿಗೆ ಅವಕಾಶ ನೀಡುವಾಗ ಸಹಜವಾಗಿಯೇ ಹಿರಿಯ ಆಟಗಾರರಿಗೆ ಸ್ವಲ್ಪ ವಿರಾಮ ನೀಡಬೇಕಾಗುತ್ತದೆ.
ಆಯ್ಕೆ ಸಮಿತಿ ಶಮಿ ಹಾಗೂ ಸಿರಾಜ್ ಬಳಿ ಯಾವ ರೀತಿಯಲ್ಲಿ ಸಂವಹನ ನಡೆಸಿದೆಯೋ ಗೊತ್ತಿಲ್ಲ. ಆದರೆ, ಓರ್ವ ಆಟಗಾರನಾಗಿ ಯಾವ ಸಮಯದಲ್ಲಾದರೂ ಅವಕಾಶ ಸಿಕ್ಕಾಗ ಮೈದಾನಕ್ಕಿಳಿಯಲು ಸರ್ವಸನ್ನದ್ಧರಾಗಿರಬೇಕು. ನಿಮ್ಮ ನಿಯಂತ್ರಣದಲ್ಲಿರುವ ವಿಷಯಗಳ ಕಡೆಗೆ ಮಾತ್ರ ಗಮನಹರಿಸಬೇಕು” ಎಂದು ಅವರು ಕಿವಿಮಾತು ಹೇಳಿದ್ದಾರೆ. 2025ರ ಫೆಬ್ರವರಿಯಿಂದ ಶಮಿ ಭಾರತದ ಪರ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಮತ್ತೊಂದೆಡೆ ಸಿರಾಜ್ ಇತ್ತೀಚೆಗಷ್ಟೇ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು ಎಂಬುದನ್ನು ನಾವು ಇಲ್ಲಿ ಸ್ಮರಿಸಬಹುದು.
ದಿನೇಶ್ ಕಾರ್ತಿಕ್ ಉದಾಹರಣೆ ನೀಡಿದ ಜಹೀರ್ ಖಾನ್
ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ಸದ್ಯದ ಪ್ರಥಮ ಆದ್ಯತೆಯ ಪಟ್ಟಿಯಲ್ಲಿ ಶಮಿ ಹಾಗೂ ಸಿರಾಜ್ ಅವರ ಹೆಸರು ಇಲ್ಲದಿರಬಹುದು, ಆದರೆ ಭಾರತ ತಂಡದ ಸಮಗ್ರ ಭವಿಷ್ಯದ ಯೋಜನೆಗಳಲ್ಲಿ ಅವರು ಖಂಡಿತವಾಗಿಯೂ ಇದ್ದಾರೆ ಎಂದು ಜಹೀರ್ ಹೇಳಿದ್ದಾರೆ. “ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ದಿನೇಶ್ ಕಾರ್ತಿಕ್. ತಂಡದಿಂದ ಸುದೀರ್ಘ ಕಾಲ ಹೊರಗುಳಿದಿದ್ದರೂ ಸಹ ಅವರು ತಮ್ಮ ಸಾಮರ್ಥ್ಯವನ್ನು ಟಿ20 ಮಾದರಿಯಲ್ಲಿ ಸಾಬೀತುಪಡಿಸಿ, ಎಂತಹ ಭರ್ಜರಿ ಕಂಬ್ಯಾಕ್ ಮಾಡಿದರು. ಹೀಗಾಗಿ ಶಮಿ ಮತ್ತು ಸಿರಾಜ್ ಕೂಡ ಅವಕಾಶ ಸಿಕ್ಕಾಗಲೆಲ್ಲಾ ಶ್ರೇಷ್ಠ ಪ್ರದರ್ಶನ ನೀಡುತ್ತಾ, ಫಿಟ್ ಆಗಿರುವುದರತ್ತ ಗಮನ ಕೇಂದ್ರೀಕರಿಸಬೇಕು. ಸದ್ಯಕ್ಕೆ ಆಯ್ಕೆಗಾರರ ಮೊದಲ ಆದ್ಯತೆ ನೀವಲ್ಲದಿರಬಹುದು. ಆದರೆ ನಿಮಗಾಗಿ ಬಾಗಿಲು ಸಂಪೂರ್ಣವಾಗಿ ಮುಚ್ಚಿದೆ ಎಂದು ಇದರ ಅರ್ಥವಲ್ಲ” ಎಂದು ಜಹೀರ್ ಹುರಿದುಂಬಿಸಿದ್ದಾರೆ.
ಬಹು-ಆಯಾಮದ ಆಟಗಾರರಿಗೆ ಆಧ್ಯತೆ, ಭುವಿಗೆ ಅವಕಾಶ?
ಪ್ರಸ್ತುತ ಹರ್ಷಿತ್ ರಾಣಾನಂತಹ ಯುವ ವೇಗಿಗಳು ತಂಡಕ್ಕೆ ಆಯ್ಕೆಯಾಗುತ್ತಿರುವ ಹಿಂದಿನ ಗುಟ್ಟನ್ನೂ ಜಹೀರ್ ರಟ್ಟು ಮಾಡಿದ್ದಾರೆ. ಅಚ್ಚರಿ ಎಂದರೆ, ಆಯ್ಕೆ ಸಮಿತಿ ಹಾಗೂ ಮ್ಯಾನೇಜ್ಮೆಂಟ್ ಈಗ ಕೇವಲ ಬೌಲಿಂಗ್ ಮಾಡುವವರಿಗಿಂತ, ಕೆಳಕ್ರಮಾಂಕದಲ್ಲಿ ಉಪಯುಕ್ತ ರನ್ ಕಲೆಹಾಕಬಲ್ಲ ಸಾಮರ್ಥ್ಯ ಹೊಂದಿರುವ ಬೌಲರ್ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬಾಲ್ ಜೊತೆಗೆ ಬ್ಯಾಟ್ನಲ್ಲೂ ಕೊಡುಗೆ ನೀಡಬಲ್ಲ ಆಟಗಾರರ ಕಡೆಗೆ ಆಯ್ಕೆಗಾರರ ಒಲವು ಹೆಚ್ಚಿದೆ ಎಂದು ಜಹೀರ್ ವಿಶ್ಲೇಷಿಸಿದ್ದಾರೆ.
ಇದೇ ವೇಳೆ ಭುವನೇಶ್ವರ್ ಕುಮಾರ್ ಅವರ ಅದ್ಭುತ ಫಾರ್ಮ್ ಬಗ್ಗೆಯೂ ಮಾತನಾಡಿದ ಜಹೀರ್, ಈಗೇನಾದರೂ ಟಿ20 ವಿಶ್ವಕಪ್ ನಡೆಯುತ್ತಿದ್ದರೆ, ಐಪಿಎಲ್ 2026ರ ಭರ್ಜರಿ ಪ್ರದರ್ಶನದ ಆಧಾರದ ಮೇಲೆಯೇ ಭುವಿಗೆ ಮತ್ತೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡುವ ಬಗ್ಗೆ ಆಯ್ಕೆಗಾರರು ಗಂಭೀರವಾಗಿ ಯೋಚಿಸುತ್ತಿದ್ದರು ಎಂದಿದ್ದಾರೆ. “ತಂಡದ ಆಯ್ಕೆ ಆಟಗಾರರ ಕೈಯಲ್ಲಿಲ್ಲ. ತಾವು ಆಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಿಕೊಂಡು, ಮರಳಿ ತಂಡಕ್ಕೆ ಬರುವ ಇರಾದೆ ಇದ್ದರೆ ಅದಕ್ಕೆ ತಕ್ಕಂತೆ ಶಕ್ತಿಮೀರಿ ಪ್ರಯತ್ನಿಸುವುದಷ್ಟೇ ಆಟಗಾರರ ಕರ್ತವ್ಯ” ಎಂದು ಜಹೀರ್ ಖಾನ್ ಮಾರ್ಮಿಕವಾಗಿ ನುಡಿದಿದ್ದಾರೆ.
ಇದನ್ನೂ ಓದಿ : 2027ರ ಏಕದಿನ ವಿಶ್ವಕಪ್ಗೆ ಶಮಿ, ಭುವನೇಶ್ವರ್ ಕುಮಾರ್ ಫಿಟ್ : ಆರ್.ಅಶ್ವಿನ್ ಬೆಂಬಲ!


















