ಬೆಂಗಳೂರು, ಜುಲೈ 13 : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಸಂವಿಧಾನದ ವಿಧಿ 317(1)ರ ಅಡಿಯಲ್ಲಿ ಅವರ ವಿರುದ್ಧದ ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ತನಿಖೆ ನಡೆಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಾಗಿದೆ. ಕೈಗಾರಿಕಾ ವಿಸ್ತರಣಾ ಅಧಿಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ ಹಾಗೂ ಹಿತಾಸಕ್ತಿ ಸಂಘರ್ಷವನ್ನು ಮರೆಮಾಚಿದ ಆರೋಪಗಳು ಅವರ ವಿರುದ್ಧ ಕೇಳಿಬಂದಿವೆ.
ತಮ್ಮ ಇಬ್ಬರು ಪುತ್ರಿಯರಿಗೆ ಅಕ್ರಮವಾಗಿ ಲಾಭ ಕಲ್ಪಿಸಲು ನೇಮಕಾತಿ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸಿದ್ದು, ತಮ್ಮ ಪುತ್ರಿಯರ ಆಯ್ಕೆ ಪ್ರಕ್ರಿಯೆಯಿಂದ ದೂರ ಉಳಿಯದೆ ಕರ್ತವ್ಯ ನಿರ್ವಹಿಸಿದ್ದಾರೆ ಎಂಬುದು ಪ್ರಮುಖ ಆರೋಪವಾಗಿದೆ. ಇದಲ್ಲದೆ, ಕುಟುಂಬದ ವಾರ್ಷಿಕ ಆದಾಯವನ್ನು ಕೇವಲ 40 ಸಾವಿರ ಎಂದು ಘೋಷಿಸಿ ಪ್ರಮಾಣಪತ್ರ ಪಡೆದಿದ್ದು, ವಾಸ್ತವ ಆದಾಯವನ್ನು ಮರೆಮಾಚಿ ಒಬಿಸಿ ಮೀಸಲಾತಿ ಹಾಗೂ ಕ್ರೀಮಿ ಲೇಯರ್ ವಿನಾಯಿತಿಯ ಲಾಭ ಪಡೆಯಲು ಯತ್ನಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರದ ಆದೇಶದ ಪ್ರಕಾರ ಅವರ ಮಕ್ಕಳಿಗೆ ಒಬಿಸಿ ಮೀಸಲಾತಿ ಅನ್ವಯಿಸದಿದ್ದರೂ, ಮಾಹಿತಿ ಮರೆಮಾಚಿ ಮೀಸಲಾತಿಯ ಪ್ರಯೋಜನ ಪಡೆಯಲು ಪ್ರಯತ್ನಿಸಿರುವ ಆರೋಪವೂ ದಾಖಲಾಗಿದೆ. ಆದಾಯ, ಆಸ್ತಿ ವಿವರಗಳು ಸೇರಿದಂತೆ ಲಭ್ಯ ದಾಖಲೆಗಳು ಆರೋಪಗಳಿಗೆ ಪ್ರಾಥಮಿಕ ಬಲ ನೀಡುತ್ತಿದ್ದು, ಈ ಆರೋಪಗಳು “ದುರ್ನಡತೆ”ಗೆ ಸಮಾನವಾಗಿವೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆಸುವ ಉದ್ದೇಶದಿಂದ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಷ್ಟ್ರಪತಿಗಳ ಮುಂದಿನ ಆದೇಶದವರೆಗೆ ಅಮಾನತು ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ಕೆಪಿಎಸ್ಸಿಯ ಹಿರಿಯ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಆಯೋಗದ ವಿಶ್ವಾಸಾರ್ಹತೆ ಹಾಗೂ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಇದನ್ನೂ ಓದಿ : ‘ಸಿಎಂ ಬದಲಾದರೂ ಸರ್ವರ್ ಡೌನ್ ಆಡಳಿತ ಬದಲಾಗಿಲ್ಲ’ : ಆರ್.ಅಶೋಕ್ ಆಕ್ರೋಶ



















