ಬೆಂಗಳೂರು : ನಗರದ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲೀವಿಂಗ್ ಆಶ್ರಮದ ವಿರುದ್ಧ ಕೇಳಿಬಂದಿರುವ ಭೂ ಒತ್ತುವರಿ ಮಹಾ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಸಮತಾ ಸೈನಿಕ ದಳ ಸಿಡಿದೆದ್ದಿದೆ. ಇದೇ ವಿಚಾರವಾಗಿ ಈ ಹಿಂದೆ (ಮಾರ್ಚ್ 4) ಬೃಹತ್ ಪ್ರತಿಭಟನೆ ನಡೆಸಿ, ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಮತಾ ಸೈನಿಕ ದಳ, “ಮೂಲ ಸರ್ಕಾರಿ ಸ್ವತ್ತನ್ನು ಸರ್ಕಾರದ ಸುಪರ್ದಿಗೆ ಪಡೆಯುವವರೆಗೂ ಹೋರಾಟ ನಿಲ್ಲುವುದಿಲ್ಲ” ಎಂದು ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೆ, ಇದೇ ಜುಲೈ 17ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಿದ್ದು, ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ಘೋಷಿಸಿದೆ.
ಆರ್ಟ್ ಆಫ್ ಲೀವಿಂಗ್ ಆಶ್ರಮ ವಿರುದ್ಧದ ಗಂಭೀರ ಆರೋಪಗಳು
ಉತ್ತರಹಳ್ಳಿ ಹೋಬಳಿಯ ಕಗ್ಗಲೀಪುರ ಗ್ರಾಮದ ಸರ್ವೆ ನಂ.46ರಲ್ಲಿ ಈ ಹಿಂದೆ 60 ಎಕರೆ ಸರ್ಕಾರಿ ಜಮೀನನ್ನು ಆರ್ಟ್ ಆಫ್ ಲೀವಿಂಗ್ನ ವೇದ ವಿಜ್ಞಾನ ಮಹಾವಿದ್ಯಾಪೀಠಕ್ಕೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಅವಧಿ ಮುಗಿದ ಬಳಿಕ ಮರು ಗುತ್ತಿಗೆಗೆ ಅರ್ಜಿ ಸಲ್ಲಿಸಿರುವ ವೇಳೆ 60 ಎಕರೆಯ ಬದಲು ಕೇವಲ 33 ಎಕರೆಗೆ ಮಾತ್ರ ಅರ್ಜಿ ಸಲ್ಲಿಸಿರುವುದು ಅನುಮಾನಾಸ್ಪದವಾಗಿದೆ. ಉಳಿದ 27 ಎಕರೆ ಸರ್ಕಾರಿ ಜಮೀನಿನ ಕುರಿತು ಸಂಪೂರ್ಣ ಸರ್ವೆ ನಡೆಸಿ, ಅದರ ಸ್ಥಿತಿಯನ್ನು ಪರಿಶೀಲಿಸಿ ಸರ್ಕಾರದ ಸುಪರ್ಧಿಗೆ ಪಡೆಯಬೇಕು. ಅಲ್ಲದೆ ಗುತ್ತಿಗೆ ಆದೇಶದ ನಿಯಮಗಳನ್ನು ಉಲ್ಲಂಘಿಸಿ ವಾಣಿಜ್ಯ ಚಟುವಟಿಕೆ, ವಸತಿ ಸಂಕೀರ್ಣ ಹಾಗೂ ಕಲ್ಯಾಣ ಮಂಟಪ ನಿರ್ಮಿಸಿರುವುದರಿಂದ ಮರು ಗುತ್ತಿಗೆ ನೀಡಬಾರದು ಎಂದು ಸಮತಾ ಸೈನಿಕ ದಳ ಒತ್ತಾಯಿಸಿದೆ. ಈ ಸಂಬಂಧ ಹೈಕೋರ್ಟ್ನಲ್ಲಿ WP (PIL) No.14387/2023 ಪ್ರಕರಣ ವಿಚಾರಣೆಯಲ್ಲಿದ್ದು, ತಕರಾರು ಅರ್ಜಿಯನ್ನೂ ಸಲ್ಲಿಸಲಾಗಿದೆ. ಗುತ್ತಿಗೆ ಮಂಜೂರು ಮಾಡಲು ಕಡತ ಮಂಡಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅಮಾನತುಗೊಳಿಸಬೇಕು ಎಂದು ಸಮತಾ ಸೈನಿಕ ದಳ ಆಗ್ರಹಿಸಿದೆ.
ಇನ್ನು ಕಗ್ಗಲೀಪುರ ಗ್ರಾಮದ ಸರ್ವೆ ನಂ.164ರಲ್ಲಿ ಸರ್ಕಾರಿ ರಾಜಕಾಲುವೆ ಒತ್ತುವರಿ ಮಾಡಿ, ಅದರ ಮೇಲೆಯೇ ಶ್ರೀ ಶ್ರೀ ಸುಮೇರು ರಿಯಾಲಿಟಿ ಪ್ರೈವೇಟ್ ಲಿಮಿಟೆಡ್ನ ಸೌಧಾಮಿನಿ ಅಪಾರ್ಟ್ಮೆಂಟ್ ಯೋಜನೆಯಡಿ 100ಕ್ಕೂ ಹೆಚ್ಚು ವಸತಿ ಸಮುಚ್ಚಯಗಳನ್ನು ನಿರ್ಮಿಸಿ ನೂರಾರು ಕೋಟಿ ರೂಪಾಯಿಗೆ ಫ್ಲಾಟ್ಗಳನ್ನು ಮಾರಾಟ ಮಾಡಲಾಗಿದೆ. ಈ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿ, ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಮತಾ ಸೈನಿಕ ದಳ ಆಗ್ರಹಿಸಿದೆ.
ಜೊತೆಗೆ ಕೆಂಗೇರಿ ಹೋಬಳಿಯ ಬಿ.ಎಂ. ಕಾವಲ್ ಸರ್ವೆ ನಂ.132ರಲ್ಲಿ ಸುಮಾರು 4 ಎಕರೆ ಮೂಲ ಸರ್ಕಾರಿ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯಬೇಕು ಎಂದು ಸಮತಾ ಸೈನಿಕ ದಳ ಒತ್ತಾಯಿಸಿದೆ.
ಹಾಗೆಯೇ ಆರ್ಟ್ ಆಫ್ ಲೀವಿಂಗ್ ಆಶ್ರಮದ ಸುತ್ತಮುತ್ತ ವಾಸಿಸುವ ದೀನದಲಿತರು ಹಾಗೂ ಹಿಂದುಳಿದ ವರ್ಗದ ಜನರ ಜಮೀನುಗಳನ್ನು ಸೆಕ್ಯೂರಿಟಿ ಗಾರ್ಡ್ಗಳ ಹೆಸರಿನಲ್ಲಿ ಗೂಂಡಾ ಪಡೆಗಳ ಮೂಲಕ ಆಶ್ರಮದವರು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸಂಘಟನೆ ಆರೋಪಿಸಿದ್ದು, ಸರ್ಕಾರಿ ರಸ್ತೆಗಳಿಗೆ ಗೇಟ್ ಅಳವಡಿಸಿ ರೈತರು ತಮ್ಮ ಜಮೀನಿಗೆ ತೆರಳುವುದಕ್ಕೂ ಅವಕಾಶ ನೀಡುತ್ತಿಲ್ಲ ಎಂದು ದೂರಿದೆ. ಅಲ್ಲದೆ ಸರ್ಕಾರಿ ಸ್ವತ್ತುಗಳನ್ನು ಅನಧಿಕೃತವಾಗಿ ತಮ್ಮ ವಶದಲ್ಲಿಟ್ಟುಕೊಂಡಿರುವುದರ ಜೊತೆಗೆ ಅಗತ್ಯ ಅನುಮತಿಗಳಿಲ್ಲದೆ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಆಗ್ರಹಿಸಿದೆ.
ಈ ಎಲ್ಲಾ ಆರೋಪಗಳ ಕುರಿತು ಸೂಕ್ತ ಕ್ರಮ ಕೈಗೊಂಡು ಭೂ ಒತ್ತುವರಿ ತೆರವುಗೊಳಿಸಿ ಮೂಲ ಸರ್ಕಾರಿ ಸ್ವತ್ತನ್ನು ಸರ್ಕಾರದ ಸುಪರ್ದಿಗೆ ಪಡೆಯುವವರೆಗೂ ಜುಲೈ 17ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಮತಾ ಸೈನಿಕ ದಳ ಘೋಷಿಸಿದೆ. ಈ ಕುರಿತು ರಾಜ್ಯ ಪೊಲೀಸ್ ಇಲಾಖೆ, ಕಂದಾಯ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸಮತಾ ಸೈನಿಕ ದಳ ಅಧಿಕೃತ ಪತ್ರದ ಮೂಲಕ ಮಾಹಿತಿ ನೀಡಿದೆ.
ಇದನ್ನೂ ಓದಿ : ಬವೇರಿಯಾ ನಿಯೋಗದೊಂದಿಗೆ ಡಿಸಿಎಂ ಸಭೆ


















