ಪುಣೆ: ಮಹಾರಾಷ್ಟ್ರದ ಪ್ರವಾಸಿ ತಾಣ ಲೋಹಗಢ ಕೋಟೆಯಲ್ಲಿ ಜೂನ್ 18ರಂದು ನಡೆದ 26 ವರ್ಷದ ಉದ್ಯಮಿ ಕೇತನ್ ಅಗರ್ವಾಲ್ ಸಾವಿನ ಪ್ರಕರಣ ಬೇಧಿಸುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಿಶ್ಚಿತಾರ್ಥವಾಗಿದ್ದ ಯುವಕನ ಸಾವಿನ ಹಿಂದೆ ಆತನ ಭಾವಿ ಪತ್ನಿ ಸಿಯಾ ಗೋಯಲ್ (20) ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (22) ಕೈವಾಡವಿದೆ ಎಂದು ಪುಣೆ ಗ್ರಾಮಾಂತರ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಆದರೆ, ಮಾಧ್ಯಮಗಳ ಮುಖ್ಯಾಂಶಗಳಲ್ಲಿ ಇರುವ ಈ ಕಥೆಯನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವುದು ಪೊಲೀಸರಿಗೆ ಅಷ್ಟು ಸುಲಭವಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಿಯಾಗೆ ಕೇತನ್ ಜೊತೆಗಿನ ನಿಶ್ಚಿತಾರ್ಥ ಹಾಗೂ ನಿಗದಿಯಾಗಿದ್ದ ಮದುವೆ ಇಷ್ಟವಿರಲಿಲ್ಲ. ಚೇತನ್ನನ್ನು ಗಾಢವಾಗಿ ಪ್ರೀತಿಸುತ್ತಿದ್ದ ಆಕೆ, ತನ್ನ ಪ್ರಿಯಕರನೊಂದಿಗೆ ಸೇರಿ ಭಾವಿ ಪತಿಯನ್ನು ಮುಗಿಸಲು ಸಂಚು ರೂಪಿಸಿದ್ದಳು. ಇದಕ್ಕಾಗಿ ಇಬ್ಬರೂ ಕೆಫೆಯಲ್ಲಿ ಗಂಟೆಗಟ್ಟಲೆ ಕೂತು ಪ್ಲ್ಯಾನ್ ಕೂಡ ಮಾಡಿದ್ದರು. ಕೊಲೆಗೆ ತಾಲೀಮನ್ನೂ (ರಿಹರ್ಸಲ್) ನಡೆಸಿದ್ದರು, ಒಮ್ಮೆ ವಿಫಲ ಯತ್ನವನ್ನೂ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳ ಈ ಕೃತ್ಯದ ಉದ್ದೇಶವನ್ನು ಸಾಬೀತುಪಡಿಸಲು ಫೋನ್ ರೆಕಾರ್ಡ್ಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಲೊಕೇಶನ್ ಡೇಟಾಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ನೇರ ಸಾಕ್ಷ್ಯಗಳ ಕೊರತೆ
ಈ ಇಡೀ ಪ್ರಕರಣವು ಸಂಪೂರ್ಣವಾಗಿ ಸಾಂದರ್ಭಿಕ ಸಾಕ್ಷ್ಯಗಳ (Circumstantial Evidence) ಮೇಲೆ ನಿಂತಿದೆ. ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಸುಳ್ಳು ಪತ್ತೆ ಪರೀಕ್ಷೆಯ (Lie-detector test) ಅರ್ಜಿಯಲ್ಲಿ, ಘಟನೆಗೆ ಯಾವುದೇ ನೇರ ಪ್ರತ್ಯಕ್ಷದರ್ಶಿಗಳಾಗಲೀ ಅಥವಾ ಕೇತನ್ನನ್ನು ಯಾರು ತಳ್ಳಿದರು ಎಂಬುದಕ್ಕೆ ನಿರ್ಣಾಯಕ ಪುರಾವೆಗಳಾಗಲೀ ತಮ್ಮ ಬಳಿ ಇಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರ ಬಳಿ ಇರುವುದು ಆರೋಪಿಗಳು ನೀಡಿರುವ ತಪ್ಪೊಪ್ಪಿಗೆ ಹೇಳಿಕೆಗಳು (Confessions) ಮಾತ್ರ. ಆದರೆ, ದೇಶದ ಪ್ರಮುಖ ಕ್ರಿಮಿನಲ್ ಡಿಫೆನ್ಸ್ ವಕೀಲರಾದ ತನ್ವೀರ್ ಅಹ್ಮದ್ ಮಿರ್ ಅವರ ಪ್ರಕಾರ, ಪೊಲೀಸ್ ಕಸ್ಟಡಿಯಲ್ಲಿ ನೀಡುವ ಇಂತಹ ಒಪ್ಪಿಗೆ ಹೇಳಿಕೆಗಳಿಗೆ ನ್ಯಾಯಾಲಯದಲ್ಲಿ ಯಾವುದೇ ಕಾನೂನು ಮಾನ್ಯತೆ ಇರುವುದಿಲ್ಲ. ಸಾರ್ವಜನಿಕರ ಆಕ್ರೋಶ ಅಥವಾ ಮಾಧ್ಯಮಗಳ ಕಲ್ಪನೆಗಳ ಆಧಾರದ ಮೇಲೆ ನ್ಯಾಯಾಲಯಗಳು ತೀರ್ಪು ನೀಡುವುದಿಲ್ಲ, ಬದಲಿಗೆ ಕಠಿಣ ಸಾಕ್ಷ್ಯಗಳನ್ನು ಮಾತ್ರ ಕೇಳುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆರುಷಿ ತಲ್ವಾರ್ ಪ್ರಕರಣವೇ ಉದಾಹರಣೆ
ಭಾರತೀಯ ಕಾನೂನಿನ ಪ್ರಕಾರ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಶಿಕ್ಷೆ ವಿಧಿಸಬಹುದು. ಆದರೆ, 1984ರ ಸುಪ್ರೀಂ ಕೋರ್ಟ್ನ ಪ್ರಸಿದ್ಧ ‘ಶರದ್ ಬಿರ್ಧೀಚಂದ್ ಶಾರ್ದಾ’ ಪ್ರಕರಣದ ‘ಪಂಚಶೀಲ’ ತತ್ವಗಳ ಪ್ರಕಾರ, ಸಾಂದರ್ಭಿಕ ಸಾಕ್ಷ್ಯಗಳ ಸರಣಿಯಲ್ಲಿ ಯಾವುದೇ ಒಂದು ಕೊಂಡಿ (Link) ಮುರಿದರೂ ಅದರ ಸಂಪೂರ್ಣ ಲಾಭ ಆರೋಪಿಗಳಿಗೆ ಸಿಗುತ್ತದೆ. 2008ರ ದೇಶವನ್ನೇ ನಡುಗಿಸಿದ್ದ ಆರುಷಿ-ಹೇಮರಾಜ್ ಕೊಲೆ ಪ್ರಕರಣದಲ್ಲೂ ಸಹ ಇದೇ ನಡೆದಿತ್ತು. ಸಾರ್ವಜನಿಕವಾಗಿ ಆರುಷಿಯ ಪೋಷಕರೇ ಕೊಲೆಗಾರರು ಎಂಬ ಚಿತ್ರಣ ಸೃಷ್ಟಿಯಾಗಿದ್ದರೂ, ತನಿಖಾ ಸಂಸ್ಥೆಯ ಸಾಕ್ಷ್ಯಗಳ ಕೊಂಡಿ ಅಪೂರ್ಣವಾಗಿದ್ದರಿಂದ ಅಲಹಾಬಾದ್ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿತ್ತು.
ಕೋಟೆಯ ಬಂಡೆಯ ಮೇಲಷ್ಟೇ ಇದೆ ಅಂತಿಮ ಸತ್ಯ
ಪುಣೆ ಪೊಲೀಸರು ತನಿಖೆಯಲ್ಲಿ ಎಷ್ಟೇ ಮುನ್ನಡೆ ಸಾಧಿಸಿದರೂ, ಅಂತಿಮವಾಗಿ ಪ್ರಕರಣವು ಕೇತನ್ ಬಿದ್ದು ಮೃತಪಟ್ಟ ಲೋಹಗಢ ಕೋಟೆಯ ಆ ಕೆಲವು ಅಡಿಗಳ ಬಂಡೆಯ ಮೇಲಷ್ಟೇ ಬಂದು ನಿಲ್ಲುತ್ತದೆ. ಕೇವಲ ಪ್ರೇಮ ವೈಫಲ್ಯ, ಕೆಫೆ ಭೇಟಿ ಅಥವಾ ಕೊಲೆಯ ಯೋಜನೆಗಳು ಮಾತ್ರವೇ ಕೋಟೆಯಿಂದ ತಳ್ಳಿದ್ದಕ್ಕೆ ಸಾಕ್ಷಿಯಾಗಲು ಸಾಧ್ಯವಿಲ್ಲ. ಕೇತನ್ ಕಾಲು ಜಾರಿ ಬಿದ್ದನೇ? ಅಥವಾ ವಾದ-ವಿವಾದದ ನಡುವೆ ಆಕಸ್ಮಿಕವಾಗಿ ಬಿದ್ದನೇ? ಎಂಬ ಪ್ರಶ್ನೆಗಳಿಗೆ ಪೊಲೀಸರು ವೈಜ್ಞಾನಿಕ ಪುರಾವೆ ಒದಗಿಸಬೇಕಿದೆ. ಕೋಟೆಯ ಇಳಿಜಾರು, ಬಂಡೆಯ ಅಂಚು, ಕೇತನ್ ಧರಿಸಿದ್ದ ಪಾದರಕ್ಷೆಗಳು ಮತ್ತು ಆತನ ದೇಹದ ಮೇಲಿನ ಗಾಯದ ಗುರುತುಗಳು ಮಾತ್ರವೇ ಈ ನಿಗೂಢ ಸಾವಿನ ಹಿಂದಿನ ಅಸಲಿ ಸತ್ಯವನ್ನು ಬಿಚ್ಚಿಡಬೇಕಿದೆ.



















