ಬೆಂಗಳೂರು : ಭ್ರಷ್ಟಾಚಾರ ಕರ್ಮಕಾಂಡಗಳ ಕೂಪವಾಗಿರುವ ಕೆಂಗೇರಿ ಉಪ ವಿಭಾಗದ ARO ಕಚೇರಿಯಲ್ಲಿ ನಡೆದಿರುವ ಮತ್ತಷ್ಟು ಅಕ್ರಮಗಳು ಮತ್ತು ಕೋಟ್ಯಾಂತರ ರೂ. ವಂಚನೆ ಕಾರ್ಯಗಳಿಗೆ ಸಂಬಂಧಿಸಿದಂತೆ ವಂಚಕ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ GBA ಮುಖ್ಯ ಆಯುಕ್ತ, ಪಶ್ಚಿಮ ನಗರ ಪಾಲಿಕೆ ಆಯುಕ್ತ ಹಾಗೂ ಲೋಕಾಯುಕ್ತಕ್ಕೆ ದಾಖಲೆಗಳೊಂದಿಗೆ ಬಿಜಿಪಿ ಮುಖಂಡ ಎನ್.ಆರ್ ರಮೇಶ್ ಅವರು ದೂರು ಸಲ್ಲಿಸಿದ್ದಾರೆ.
ರಾಜ್ಯದ ಐದು ಪಾಲಿಕೆಗಳ ಕಂದಾಯ ಇಲಾಖೆಯಲ್ಲಿ ಪ್ರತಿದಿನ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಹಲವು ಅಕ್ರಮಗಳು ದಾಖಲೆಗಳೊಂದಿಗೆ ಬೆಳಕಿಗೆ ಬರುತ್ತಿದ್ದರೂ, ತನಿಖಾ ಸಂಸ್ಥೆಗಳಲ್ಲಿ ದೂರುಗಳು ದಾಖಲಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಭಯವಿಲ್ಲದೆ ಅಕ್ರಮಗಳನ್ನು ಮುಂದುವರಿಸುತ್ತಿದ್ದಾರೆ ಎಂದು ಎನ್.ಆರ್. ರಮೇಶ್ ಆರೋಪಿಸಿದ್ದಾರೆ.

ಈ ಹಿಂದೆ ಎನ್. ವೆಂಕಟೇಶ್ ಎಂಬುವವರ ಹೆಸರಿಗೆ ನಕಲಿ e-PID ಸೃಷ್ಟಿಸಿ 6,600 ಚದರ ಅಡಿ ವಿಸ್ತೀರ್ಣದ ಆಸ್ತಿಗೆ ಕಾನೂನುಬಾಹಿರವಾಗಿ ‘ಎ’ ಖಾತಾ ಮಾಡಿಕೊಟ್ಟ ಪ್ರಕರಣ ಸಂಬಂಧ 2026ರ ಜೂನ್ 29ರಂದು ಕೆಂಗೇರಿ ಎಆರ್ಒ ರಂಗಸ್ವಾಮಿ, ಗುಮಾಸ್ತ ತೇಜಸ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಲಕ್ಷ್ಮಿ ವಿರುದ್ಧ ದಾಖಲೆಗಳೊಂದಿಗೆ ದೂರು ಸಲ್ಲಿಸಲಾಗಿತ್ತು. ಇದೀಗ ಅದೇ ಅಧಿಕಾರಿಗಳ ತಂಡ ಮತ್ತೊಂದು ದೊಡ್ಡ ಅಕ್ರಮ ನಡೆಸಿದೆ ಎಂದು ಎನ್.ಆರ್ ರಮೇಶ್ ಆರೋಪಿಸಿದ್ದಾರೆ.


ರೆವೆನ್ಯೂ ಬಡಾವಣೆಯ 15ಕ್ಕೂ ಹೆಚ್ಚು ಆಸ್ತಿಗಳಿಗೆ ಕಾನೂನು ಉಲ್ಲಂಘಿಸಿ ‘ಬಿ’ ಖಾತೆಯಿಂದ ನೇರವಾಗಿ ‘ಎ’ ಖಾತಾ ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದ್ದು, ಇದರಿಂದ ಬೆಂಗಳೂರು ಪಶ್ಚಿಮ ನಗರ ಪಾಲಿಕೆಗೆ ಒಂದೂವರೆ ಕೋಟಿ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಗ್ರಾಮದ 1ನೇ ಅಡ್ಡರಸ್ತೆಯಲ್ಲಿರುವ ಚಿಕ್ಕ ಗಾಳಪ್ಪ ಎಂಬುವವರ ಹೆಸರಿಗೆ 16/1, 16/2, 16/3 ಮತ್ತು 16/4 ಸಂಖ್ಯೆಯ ನಾಲ್ಕು ಆಸ್ತಿಗಳಿಗೆ ತಲಾ 1,500 ರಿಂದ 1,600 ಚದರ ಅಡಿ ವಿಸ್ತೀರ್ಣದ e-PID ಸೃಷ್ಟಿಸಿ ‘ಎ’ ಖಾತಾ ಮಾಡಿಕೊಡಲಾಗಿದೆ. ಈ ಆಸ್ತಿಗಳಿಗೆ ಪ್ರತ್ಯೇಕ ಕ್ರಯಪತ್ರಗಳೇ ಇಲ್ಲದಿದ್ದರೂ ಖಾತಾ ನೀಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಸ್ವತ್ತುಗಳಿಗೆ 2007ಕ್ಕೂ ಮೊದಲಿನ ಪುರಸಭೆ ಅವಧಿಯಿಂದ ಹಿಡಿದು ಬಿಬಿಎಂಪಿ ಹಾಗೂ ಈಗಿನ ಜಿಬಿಎ ಅವಧಿವರೆಗೂ ಒಂದು ರೂಪಾಯಿ ಕಂದಾಯವೂ ಪಾವತಿಸಿಲ್ಲ. ‘ಉಂಡೆ ಖಾತಾ’ ಅಥವಾ ‘ಉಂಡೆ ತೆರಿಗೆ’ ಕೂಡ ಇಲ್ಲ. ಆದರೂ ನಿಯಮಗಳನ್ನು ಉಲ್ಲಂಘಿಸಿ ನೇರವಾಗಿ ‘ಎ’ ಖಾತಾ ಮಾಡಿಕೊಟ್ಟಿರುವುದು ಗಂಭೀರ ಅಕ್ರಮ ಎಂದು ಎನ್.ಆರ್ ರಮೇಶ್ ಆರೋಪಿಸಿದ್ದಾರೆ.
ನಿಯಮದ ಪ್ರಕಾರ ಮೊದಲು ಬಾಕಿ ಕಂದಾಯವನ್ನು ಬಡ್ಡಿ ಸಮೇತ ಪಾವತಿಸಿ ‘ಬಿ’ ಖಾತಾ ಪಡೆಯಬೇಕು. ಬಳಿಕ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಆದ ನಂತರ ಸೂಚ್ಯಾಂಕ ದರದ ಶೇ.5ರಷ್ಟು ಶುಲ್ಕ ಮತ್ತು ಸುಧಾರಣಾ ಶುಲ್ಕ ಪಾವತಿಸಿ ಹಿರಿಯ ಅಧಿಕಾರಿಗಳ ಅನುಮೋದನೆ ಪಡೆದು ಮಾತ್ರ ‘ಎ’ ಖಾತಾ ನೀಡಬೇಕಾಗುತ್ತದೆ. ಆದರೆ ಈ ಎಲ್ಲಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಲಕ್ಷಾಂತರ ರೂಪಾಯಿ ಲಂಚ ಪಡೆದು ಖಾತಾ ಮಾಡಿಕೊಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು, ಯಾವುದೇ ಹೊಸ ಖಾತಾ ಅಥವಾ OTP ನೀಡುವಂತಿಲ್ಲ ಎಂಬ ಸ್ಪಷ್ಟ ಆದೇಶ ಇದ್ದರೂ, ಅದನ್ನು ಮೀರಿ ಅಕ್ರಮವಾಗಿ e-PID ಸೃಷ್ಟಿಸಿ ಖಾತಾ ಮಾಡಿಕೊಡಲಾಗಿದೆ. ಇದರಿಂದ ಸರ್ಕಾರದ ಆದಾಯಕ್ಕೂ ಭಾರಿ ನಷ್ಟ ಉಂಟಾಗಿದ್ದು, ಸಾರ್ವಜನಿಕರ ವಿಶ್ವಾಸಕ್ಕೂ ಧಕ್ಕೆ ಉಂಟಾಗಿದೆ ಎಂದು ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ಖಾತಾ ವರ್ಗಾವಣೆಯ ಪ್ರಕ್ರಿಯೆಯಲ್ಲಿಯೂ ಅಕ್ರಮ ನಡೆದಿರುವುದಾಗಿ ದೂರಿನಲ್ಲಿ ವಿವರಿಸಲಾಗಿದ್ದು, ಸಾಮಾನ್ಯವಾಗಿ ಆನ್ಲೈನ್ ಅರ್ಜಿ ಮೊದಲು ಆಡಿಟ್ ತಂಡಕ್ಕೆ ಹೋಗಿ ದಾಖಲೆ ಪರಿಶೀಲನೆ ನಡೆಯಬೇಕು. ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಅರ್ಜಿ ತಿರಸ್ಕಾರವಾಗಬೇಕು. ಆದರೆ ಭ್ರಷ್ಟ ಸಿಬ್ಬಂದಿ ತಮ್ಮ ಲಾಗಿನ್ಗೆ ಅರ್ಜಿಯನ್ನು Auto Forward ಮಾಡಿಕೊಂಡು Q.C. ಹೆಸರಿನಲ್ಲಿ Mutation ಪ್ರಕ್ರಿಯೆ ಮೂಲಕ ಅಕ್ರಮವಾಗಿ ಮುಂದಕ್ಕೆ ಕಳುಹಿಸಿ ಅನುಮೋದನೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿಯೂ ಕೆಂಗೇರಿ ಉಪ ವಿಭಾಗದ ಎಆರ್ಒ ರಂಗಸ್ವಾಮಿ, ಗುಮಾಸ್ತ ತೇಜಸ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಲಕ್ಷ್ಮಿ ಸೇರಿ ಅಕ್ರಮ ನಡೆಸಿದ್ದಾರೆ. ಜೊತೆಗೆ ಸೊನ್ನೇನಹಳ್ಳಿ ಕುಮಾರ ಹಾಗೂ ಮೈಲಸಂದ್ರ ಲೋಕೇಶ್ ಎಂಬ ಮಧ್ಯವರ್ತಿಗಳು ಕಚೇರಿಯಲ್ಲೇ ಕುಳಿತು ಹಲವು ಕಾನೂನುಬಾಹಿರ ಕಾರ್ಯಗಳನ್ನು ನಡೆಸಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಚೇರಿಯಲ್ಲಿ ಕೇವಲ ನಾಲ್ವರು ಗುಮಾಸ್ತರು ಇದ್ದರೂ 12ರಿಂದ 15 ಲಾಗಿನ್ಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಹಲವು ತಿಂಗಳ ಹಿಂದೆಯೇ ವರ್ಗಾವಣೆಯಾಗಿರುವ ಲಕ್ಷ್ಮೀನಾರಾಯಣ್, ಯೋಗೇಶ್, ಆರ್ಐ ವೇಣುಗೋಪಾಲ್, ಆರ್ಐ ಗೀತಾ ಹಾಗೂ ಉಪ ಆಯುಕ್ತ ಅಬ್ದುಲ್ ರಬ್ ಅವರ ಲಾಗಿನ್ಗಳನ್ನು ಇನ್ನೂ ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ ಎಂದು ಎನ್.ಆರ್ ರಮೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ಅಕ್ರಮಗಳ ಹಿನ್ನೆಲೆ ಎಆರ್ಒ ರಂಗಸ್ವಾಮಿ ಹಾಗೂ ಗುಮಾಸ್ತ ತೇಜಸ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕು, ಗುತ್ತಿಗೆ ಆಧಾರಿತ ಡೇಟಾ ಎಂಟ್ರಿ ಆಪರೇಟರ್ ಲಕ್ಷ್ಮಿಯನ್ನು ಸೇವೆಯಿಂದ ವಜಾಗೊಳಿಸಬೇಕು ಹಾಗೂ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ, ನಕಲಿ ದಾಖಲೆ ಸೃಷ್ಟಿ ಸೇರಿದಂತೆ ವಿವಿಧ ಆರೋಪಗಳಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಎನ್.ಆರ್. ರಮೇಶ್ ಒತ್ತಾಯಿಸಿದ್ದಾರೆ. ಜೊತೆಗೆ ಅಕ್ರಮವಾಗಿ ನೀಡಿರುವ ಎಲ್ಲಾ ‘ಎ’ ಖಾತಾಗಳನ್ನು ಕೂಡಲೇ ರದ್ದುಪಡಿಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಜಿಬಿಎಯಿಂದ ‘ಒಂದೇ ನಂಬರ್’ ಸಹಾಯವಾಣಿ : ಎಲ್ಲಾ ಇಲಾಖೆಗಳ ದೂರುಗಳಿಗೆ ಏಕೀಕೃತ ಆ್ಯಪ್!


















