ವಾಷಿಂಗ್ಟನ್ : ಇರಾನ್ನ ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯು ಟೆಹ್ರಾನ್ನಲ್ಲಿ ನಡೆಯುತ್ತಿದ್ದು, ಇರಾನ್ನ ಲಕ್ಷಾಂತರ ಜನರು, ಪ್ರಮುಖ ನಾಯಕರು ಕಣ್ಣೀರು ಹಾಕುತ್ತಿರುವುದನ್ನು ಕಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಾನು ಇರಾನ್ನ ಜನತೆ ಖಮೇನಿಯನ್ನು ದ್ವೇಷಿಸುತ್ತಾರೆ ಎಂದೇ ಭಾವಿಸಿದ್ದೆ ಎಂದಿರುವ ಟ್ರಂಪ್, “ಬಹುಶಃ ಇವು ಮೊಸಳೆ ಕಣ್ಣೀರು ಇರಬಹುದು” ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಇರಾನ್ಗೆ ಹೊಸದಾಗಿ ಎಚ್ಚರಿಕೆ ನೀಡಿರುವ ಅವರು, ಪ್ರಸ್ತುತ ಅಂತ್ಯಕ್ರಿಯೆ ನಡೆಯುತ್ತಿರುವ ಸ್ಥಳದಲ್ಲೇ ಇರಾನ್ನ ಇಡೀ ನಾಯಕತ್ವ ಒಟ್ಟಿಗೆ ನೆರೆದಿದ್ದು, ನಾನು ಬಯಸಿದರೆ ಕೇವಲ ‘ಒಂದೇ ಏಟಿಗೆ’ ಇವರೆಲ್ಲರನ್ನೂ ಮಟ್ಟಹಾಕಬಹುದು ಎಂದು ಹೇಳಿದ್ದಾರೆ. ಆದರೆ, ಮಾತುಕತೆ ನಡೆಸಲು ಅಲ್ಲಿ ಯಾರೂ ಉಳಿಯುವುದಿಲ್ಲ ಎಂಬ ಕಾರಣಕ್ಕೆ ತಾವು ಹಾಗೆ ಮಾಡುತ್ತಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಮಾತುಕತೆಗೆ ಒಂದು ವಾರದ ಬಿಡುವು
ಅಮೆರಿಕ ಮತ್ತು ಇಸ್ರೇಲ್ ಫೆಬ್ರವರಿ 28ರಂದು ನಡೆಸಿದ್ದ ಜಂಟಿ ವೈಮಾನಿಕ ದಾಳಿಗೆ ಇರಾನ್ ಅನ್ನು 36 ವರ್ಷಗಳ ಕಾಲ ಆಳಿದ್ದ ಆಯತೊಲ್ಲಾ ಅಲಿ ಖಮೇನಿ ಹತರಾಗಿದ್ದರು. ಇರಾನ್ನಲ್ಲಿ ಯುದ್ಧದ ವಾತಾವರಣವಿದ್ದ ಕಾರಣ ಅವರ ಅಂತ್ಯಕ್ರಿಯೆಯ ಪ್ರಕ್ರಿಯೆಗಳು ವಿಳಂಬವಾಗಿದ್ದವು. ಇದೀಗ ಇರಾನ್, ಅಮೆರಿಕದ 250ನೇ ಸಂಸ್ಥಾಪನಾ ದಿನವಾದ ಜುಲೈ 4 ರಂದೇ ಈ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಆರಂಭಿಸಿದೆ.
ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಮುಗಿಯುವವರೆಗೆ ಉಭಯ ದೇಶಗಳು ಮಾತುಕತೆಯಿಂದ ಒಂದು ವಾರದ ಅವಧಿಗೆ ಬಿಡುವು ತೆಗೆದುಕೊಳ್ಳಲು ನಿರ್ಧರಿಸಿವೆ ಎಂದು ಟ್ರಂಪ್ ತಿಳಿಸಿದ್ದಾರೆ. “ನಾವು ವೆನೆಜುವೆಲಾವನ್ನು ಒಂದೇ ದಿನದಲ್ಲಿ ಸೋಲಿಸಿದೆವು ಮತ್ತು ಇರಾನ್ ಮೇಲೂ ಭೀಕರ ದಾಳಿ ನಡೆಸಿದೆವು. ಈಗ ಅವರು ಒಪ್ಪಂದ ಮಾಡಿಕೊಳ್ಳಲು ಹಪಹಪಿಸುತ್ತಿದ್ದಾರೆ. ನಾವು ಮಾನವೀಯತೆಯ ದೃಷ್ಟಿಯಿಂದ ಅಂತ್ಯಕ್ರಿಯೆಗಾಗಿ ಅವರಿಗೆ ಒಂದು ವಾರ ರಜೆ ನೀಡಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ. ಈ ಅವಧಿಯಲ್ಲಿ ಉಭಯ ದೇಶಗಳು ಪರಸ್ಪರ ದಾಳಿ ನಡೆಸುವುದಿಲ್ಲ ಎಂದೂ ತಿಳಿಸಿದ್ದಾರೆ.
ಕಣ್ಣೀರಿಟ್ಟ ಇರಾನ್ ನಾಯಕರು ; ಜುಲೈ 9ಕ್ಕೆ ದಫನ್
ಶನಿವಾರ ನಡೆದ ವಿದಾಯ ಸಮಾರಂಭದಲ್ಲಿ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಘಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಸೇರಿದಂತೆ ಪ್ರಮುಖ ನಾಯಕರು ತೀವ್ರ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಸದ್ಯ ಲಕ್ಷಾಂತರ ಇರಾನಿಗರು ರಸ್ತೆಗಿಳಿದು ಅಂತಿಮ ದರ್ಶನ ಪಡೆಯುತ್ತಿದ್ದು, ಜುಲೈ 7 ರಂದು ಪವಿತ್ರ ನಗರವಾದ ಕೋಮ್ನಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಅಂತಿಮವಾಗಿ ಜುಲೈ 9 ರಂದು ಖಮೇನಿ ಅವರ ತವರು ನಗರವಾದ ಮಶ್ಹಾದ್ನಲ್ಲಿ ದಫನ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
ಭದ್ರತಾ ಭೀತಿಯಿಂದ ತಂದೆಯ ಅಂತ್ಯಕ್ರಿಯೆಯಿಂದ ದೂರ ಉಳಿಯಲಿರುವ ಮಗ
ಇರಾನ್ನ ಪ್ರಸ್ತುತ ಸರ್ವೋಚ್ಚ ನಾಯಕ ಹಾಗೂ ಅಲಿ ಖಮೇನಿ ಅವರ ಪುತ್ರರಾದ ಮೊಜ್ತಬಾ ಖಮೇನಿ ಅವರು ಭದ್ರತಾ ಕಾರಣಗಳಿಗಾಗಿ ತಮ್ಮ ತಂದೆಯ ಅಂತ್ಯಕ್ರಿಯೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ವರದಿಯಾಗಿದೆ. ಇಸ್ರೇಲ್ನಿಂದ ಇರುವ ಜೀವಭಯದಿಂದಾಗಿ ಮೊಜ್ತಬಾ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅತ್ಯಂತ ಅಪಾಯಕಾರಿ ಎಂದು ಭಾರತದಲ್ಲಿರುವ ಅವರ ಪ್ರತಿನಿಧಿ ಆಯತೊಲ್ಲಾ ಹಕೀಮ್ ಎಲಾಹಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಸಚಿನ್ ತೆಂಡೂಲ್ಕರ್, ಷಫಾಲಿ ವರ್ಮಾ ದಾಖಲೆ ಉಡೀಸ್ ಮಾಡಿದ ಸೂರ್ಯವಂಶಿ!



















