ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ಎಡಿಎಲ್ಆರ್ ಕಚೇರಿಯಲ್ಲಿ 200 ಎಕರೆಯಷ್ಟು ಸರ್ಕಾರಿ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಖಾತೆ ಮಾಡಿರುವ ಬೃಹತ್ ಹಗರಣವನ್ನು ಲೋಕಾಯುಕ್ತ ಪೊಲೀಸರು ಬಯಲಿಗೆಳೆದಿದ್ದಾರೆ. ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಓರ್ವ ಖಾಸಗಿ ವ್ಯಕ್ತಿ ಸೇರಿದಂತೆ 9 ಸರ್ಕಾರಿ ನೌಕರರನ್ನು ಬಂಧಿಸಲಾಗಿದ್ದು, ಎಡಿಎಲ್ಆರ್ ಮಹಮ್ಮದ್ ಹುಸೇನ್ ಬಂಧನ ಭೀತಿಯಿಂದ ಪರಾರಿಯಾಗಿದ್ದಾರೆ.
ತನಿಖೆ ವೇಳೆ ಸರ್ಕಾರಿ ನೌಕರನ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿತೀನ್ ಪ್ರೇಮಾನಂದ ಮಹಾಲೆ ಅವರನ್ನು ಲೈಸೆನ್ಸ್ ಸರ್ವೇಯರ್ ಎಂದು ನಮೂದಿಸಿ ಅಕ್ರಮ ಚಟುವಟಿಕೆ ನಡೆಸಿರುವುದು ಪತ್ತೆಯಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ತಹಶೀಲ್ದಾರ್ ಕಚೇರಿ, ಎಡಿಎಲ್ಆರ್ ಕಚೇರಿ, ಮಹದೇವಪುರ ಪಿಡಿಓ ಕಚೇರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ಪೊಲೀಸರು ಶೋಧ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದಲ್ಲಿ ಖಾಸಗಿ ಡಾಟಾ ಎಂಟ್ರಿ ಆಪರೇಟರ್ ನಿತೀನ್ ಪ್ರೇಮಾನಂದ ಮಹಾಲೆ, ಸರ್ವೇ ಸೂಪರ್ವೈಸರ್ ಯೋಗರಾಜ್ ಹಾಗೂ ಭೂ ಮಾಪಕರಾದ ಅರವಿಂದ್, ಜಯಬೋರೇಗೌಡ, ದಯಾನಂದ್, ಮಧು, ರಮೇಶ್, ಹರೀಶ್ ಮತ್ತು ನೇಶಾ ಸಾರಿಕ ಅವರನ್ನು ಬಂಧಿಸಲಾಗಿದೆ. ಸರ್ಕಾರಿ ಮೋಜಿಣಿ ತಂತ್ರಾಂಶ ಬಳಸುವ ಅಧಿಕಾರಿಗಳ ಪಾಸ್ವರ್ಡ್, ಯೂಸರ್ ಐಡಿ ಹಾಗೂ ಒಟಿಪಿಗಳನ್ನು ಪಡೆದು ನಿತೀನ್ ಪ್ರೇಮಾನಂದ ಮಹಾಲೆ ಅಕ್ರಮವಾಗಿ ಆಕಾರ್ಬಂದ್ ದಾಖಲೆಗಳನ್ನು ಡಿಜಿಟಲೀಕರಣ ಮಾಡಿಸುತ್ತಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಎಡಿಎಲ್ಆರ್ ಮಹಮ್ಮದ್ ಹುಸೇನ್, ಸರ್ವೇ ಸೂಪರ್ವೈಸರ್ ಯೋಗರಾಜ್ ಹಾಗೂ ಭೂ ಮಾಪಕರಾದ ಅರವಿಂದ್, ದಯಾನಂದ್, ಮಧು ಮತ್ತು ರಮೇಶ್ ಅವರು ಖಾಸಗಿ ವ್ಯಕ್ತಿ ನಿತೀನ್ಗೆ ಸಂಬಳ ನೀಡುತ್ತಿದ್ದರು ಎಂಬ ಮಾಹಿತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ನಿತೀನ್ ಪ್ರೇಮಾನಂದ ಮಹಾಲೆ ಮತ್ತು ಮಹಮ್ಮದ್ ಹುಸೇನ್ ವಾಸವಿದ್ದ ಶ್ರೀರಂಗಪಟ್ಟಣದ ಮನೆಯಲ್ಲಿ ಸರ್ಕಾರಿ ಅಧಿಕಾರಿಗಳ ಸೀಲುಗಳು ಪತ್ತೆಯಾಗಿದ್ದು, ಸಕಲೇಶಪುರ, ಹುಣಸೂರು ಹಾಗೂ ಮುಳುಬಾಗಿಲು ತಾಲೂಕಿನ ಭೂ ಮಾಪನ ಶಾಖೆಗಳ ಸೀಲುಗಳನ್ನೂ ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದೇ ವೇಳೆ ಮಹಮ್ಮದ್ ಹುಸೇನ್ ಹಾಗೂ ನಿತೀನ್ ವಾಸವಿದ್ದ ಮನೆಯಲ್ಲಿ ಯಾವುದೇ ದಾಖಲೆ ಇಲ್ಲದ ₹1.40 ಲಕ್ಷ ನಗದು ಹಣವೂ ಪತ್ತೆಯಾಗಿದೆ. ಪ್ರಕರಣ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಹಗರಣದಲ್ಲಿ ಇತರ ಅಧಿಕಾರಿಗಳ ಪಾತ್ರದ ಬಗ್ಗೆಯೂ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ : ವಿಜಯನಗರದಲ್ಲಿ ಪತಿಯಿಂದಲೇ ಪತ್ನಿಯ ಭೀಕರ ಹತ್ಯೆ!


















