ಬೆಂಗಳೂರು : ಡ್ರೀಮ್ & ಡೀಲ್ಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಿರುದ್ಧ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಕಂಪನಿಯು ವಂಚನೆ ನಡೆಸಿ ಠೇವಣಿದಾರರಿಗೆ ಹಣವನ್ನು ಹಿಂತಿರುಗಿಸಲು ವಿಫಲವಾಗಿದೆ ಎಂಬ ಆರೋಪಗಳ ಹಿನ್ನೆಲೆ, ಕರ್ನಾಟಕ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ–2004ರ ಅಡಿಯಲ್ಲಿ ಸರ್ಕಾರ ಅಧಿಕೃತವಾಗಿ ಕ್ರಮ ಆರಂಭಿಸಿದೆ. ಈ ಕುರಿತು ಜೂನ್ 24ರಂದು ಅಧಿಸೂಚನೆ ಹೊರಡಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸರ್ಕಾರಕ್ಕೆ ಸಲ್ಲಿಸಿದ ದೂರಿನಲ್ಲಿ, ಡ್ರೀಮ್ & ಡೀಲ್ಸ್ ಕಂಪನಿ ಡೈರೆಕ್ಟ್ ಸೆಲ್ಲಿಂಗ್ ಕಂಪನಿಯಾಗಿ ನೋಂದಾಯಿತವಾಗಿದ್ದರೂ, ವಾಸ್ತವದಲ್ಲಿ ಡೈರೆಕ್ಟ್ ಸೆಲ್ಲಿಂಗ್ನ ಮೂಲ ನಿಯಮಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದರು. ಉತ್ಪನ್ನಗಳ ಮಾರಾಟಕ್ಕಿಂತ ಹೊಸ ಸದಸ್ಯರನ್ನು ಸೇರಿಸುವುದರ ಮೇಲೆಯೇ ಕಂಪನಿ ಹೆಚ್ಚು ಒತ್ತು ನೀಡುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಇನ್ನು, ಹೊಸ ಸದಸ್ಯರಿಂದ ಹಣ ಹೂಡಿಕೆ ಮಾಡಿಸಿ, ಅವರು ಮತ್ತಷ್ಟು ಸದಸ್ಯರನ್ನು ಸೇರಿಸಿದರೆ ಕಮಿಷನ್ ಹಾಗೂ ಪ್ರೋತ್ಸಾಹಧನ ನೀಡುವ ಹಣಕಾಸು ಸರಪಳಿ ವ್ಯವಸ್ಥೆಯನ್ನು ಕಂಪನಿ ನಡೆಸುತ್ತಿದೆ ಎಂದು ದಿನೇಶ್ ಕಲ್ಲಹಳ್ಳಿ ಆರೋಪಿಸಿದ್ದರು. ಇದು ಸಾಮಾನ್ಯ ವ್ಯವಹಾರವಲ್ಲ, ಸದಸ್ಯರನ್ನು ಸೇರಿಸಿ ಹಣ ಸಂಗ್ರಹಿಸುವ ಮಾದರಿಯಾಗಿದೆ ಎಂದು ಅವರು ಸರ್ಕಾರದ ಗಮನಕ್ಕೆ ತಂದಿದ್ದರು.
ಇದರ ಜೊತೆಗೆ, ‘ಸೇವಿಂಗ್ ಸ್ಕೀಮ್’, ‘ಮಾಸಿಕ ಠೇವಣಿ ಯೋಜನೆ’, ‘ಉಳಿತಾಯ ಯೋಜನೆ’, ‘ಭವಿಷ್ಯದ ಬಹುಮಾನ ಯೋಜನೆ’ ಎಂಬ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂದು ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ತಿಳಿಸಿದ್ದರು. ಕಂಪನಿಯ ನೋಂದಣಿ ಉದ್ದೇಶ, ಹಣಕಾಸು ವ್ಯವಹಾರ, ಸದಸ್ಯತ್ವ ಆಧಾರಿತ ಕಮಿಷನ್ ವ್ಯವಸ್ಥೆ ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಿದ ಹಣದ ಮೂಲ ಮತ್ತು ಬಳಕೆಯ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದರು.
ಕಂಪನಿಯ ಈ ವ್ಯವಹಾರ ಮಾದರಿಯು Companies Act, 2013, Unregulated Deposit Schemes (Banning) Act, 2019, *Prize Chits and Money Circulation Schemes (Banning) Act, 1978 ಸೇರಿದಂತೆ ಹಲವು ಹಣಕಾಸು ಕಾನೂನುಗಳ ಉಲ್ಲಂಘನೆಯಾಗಿರುವ ಸಾಧ್ಯತೆ ಇದೆ ಎಂಬ ಅಂಶವನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ದಿನೇಶ್ ಕಲ್ಲಹಳ್ಳಿ ಸಲ್ಲಿಸಿದ ದೂರಿನ ಬೆನ್ನಲ್ಲೇ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡಿದೆ. ಕಂಪನಿಯ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಿ, ಠೇವಣಿದಾರರ ಹಿತಾಸಕ್ತಿ ಕಾಪಾಡಲು ಮುಂದಾಗಿದೆ. ಕಂಪನಿಯ ಆಸ್ತಿಗಳು ವಿವಿಧ ಜಿಲ್ಲೆಗಳಲ್ಲಿ ಹಾಗೂ ರಾಜ್ಯದ ಹೊರಗೂ ಇರಬಹುದಾದ ಹಿನ್ನೆಲೆ, ತನಿಖೆಯನ್ನು ಒಂದೇ ಪ್ರಾಧಿಕಾರದ ಮೂಲಕ ನಡೆಸಲು ಸರ್ಕಾರ ನಿರ್ಧರಿಸಿದೆ. ಎಲ್ಲಾ ಠೇವಣಿದಾರರ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿನ್ನೆಲೆ ರಾಮನಗರ ಉಪವಿಭಾಗದ ಸಹಾಯಕ ಆಯುಕ್ತರನ್ನು ಈ ಪ್ರಕರಣದ ಸಮರ್ಥ ಪ್ರಾಧಿಕಾರಿ (Competent Authority)ಯಾಗಿ ನೇಮಕ ಮಾಡಲಾಗಿದೆ. ಕಂಪನಿಯ ಆಸ್ತಿಗಳ ಪತ್ತೆ, ಸಾರ್ವಜನಿಕರಿಂದ ಸಂಗ್ರಹಿಸಿದ ಹಣದ ವಿವರ, ಠೇವಣಿದಾರರ ಹಕ್ಕು ಹಾಗೂ ಹಣ ಮರುಪಾವತಿ ಸಂಬಂಧಿತ ಎಲ್ಲಾ ಪ್ರಕ್ರಿಯೆಗಳನ್ನು ಈ ಪ್ರಾಧಿಕಾರ ಮುಂದುವರಿಸಲಿದೆ.
ಇದನ್ನೂ ಓದಿ : ಬೆಂಗಳೂರು ರಸ್ತೆ ಅಭಿವೃದ್ಧಿಗೆ ರಿಲೀಸ್ ಆದ ಕೋಟಿ ಕೋಟಿ ಹಣ ಎಲ್ಲೋಯ್ತು? – ತನಿಖೆಗೆ N.R ರಮೇಶ್ ಆಗ್ರಹ!


















