ದಾವಣಗೆರೆ : ಜಿಲ್ಲೆಯ ಜಗಳೂರು ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ಕಾಣೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಶಶಿನಾಯ್ಕ್ ಅವರ ಪುತ್ರ ಆದಿತ್ಯ (7) ಮೃತಪಟ್ಟ ಬಾಲಕನಾಗಿದ್ದಾನೆ.
ಆದಿತ್ಯ ತನ್ನ ಸಂಬಂಧಿ ತಾವರನಾಯ್ಕ್ ಅವರೊಂದಿಗೆ ಜೇನು ಕೀಳಲು ಹೋಗಿದ್ದನು ಎಂದು ತಿಳಿದುಬಂದಿದೆ. ಬೆಳಿಗ್ಗೆ ಮನೆಯಿಂದ ತೆರಳಿದ್ದ ಬಾಲಕ ಮಧ್ಯಾಹ್ನವಾದರೂ ಮನೆಗೆ ಮರಳದ ಕಾರಣ ಕುಟುಂಬಸ್ಥರು ಆತಂಕಗೊಂಡಿದ್ದರು.
ಬಾಲಕನಿಗಾಗಿ ಕುಟುಂಬದವರು ಹಾಗೂ ಗ್ರಾಮಸ್ಥರು ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಬಳಿಕ ಲಕ್ಕೇನಹಳ್ಳಿ ಸರ್ಕಾರಿ ಅರಣ್ಯ ಪ್ರದೇಶದ ಹಳ್ಳದಲ್ಲಿ ಆದಿತ್ಯನ ಶವ ಪತ್ತೆಯಾಗಿದೆ.
ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಬಾಲಕನೊಂದಿಗೆ ಹೋಗಿದ್ದ ತಾವರನಾಯ್ಕ್ ವಿರುದ್ಧ ಕೊಲೆ ಶಂಕೆ ವ್ಯಕ್ತಪಡಿಸಿ ಕುಟುಂಬಸ್ಥರು ದೂರು ನೀಡಿದ್ದಾರೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಾಲಕನ ಸಾವಿಗೆ ನಿಖರ ಕಾರಣ ಏನು ಎಂಬುದು ತನಿಖೆಯ ನಂತರವೇ ತಿಳಿದುಬರಬೇಕಿದೆ.
ಇದನ್ನೂ ಓದಿ : ತೃಣಮೂಲ ಕಾಂಗ್ರೆಸ್ನಲ್ಲಿ ಬಂಡಾಯದ ಬಿರುಗಾಳಿ ಮಧ್ಯೆ ಸಂಸದ ಬಾಬುಲ್ ನಿಗೂಢ ನಡೆ!



















