ಲಂಡನ್ : ಉತ್ತರ ಐರ್ಲೆಂಡ್ನ ಬೆಲ್ಫಾಸ್ಟ್ ನಗರದಲ್ಲಿ ನಡೆದ ಭೀಕರ ಚಾಕು ಇರಿತದ ಘಟನೆಯು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಆಫ್ರಿಕಾ ಮೂಲದ ನಿರಾಶ್ರಿತನೊಬ್ಬ ವ್ಯಕ್ತಿಯೊಬ್ಬನ ಶಿರಚ್ಛೇದನಕ್ಕೆ ಯತ್ನಿಸಿರುವ ಘಟನೆ ನಡೆದಿದ್ದು, ಇದರಿಂದ ಆಕ್ರೋಶಗೊಂಡ ಜನರು ಬೀದಿಗಿಳಿದಿದ್ದಾರೆ. ಇದು ದೇಶಾದ್ಯಂತ ಬೃಹತ್ ವಲಸೆ ವಿರೋಧಿ ಹಿಂಸಾಚಾರ ಮತ್ತು ಗಲಭೆ ಭುಗಿಲೇಳುವಂತೆ ಮಾಡಿದೆ. ಸದ್ಯ ಸಂತ್ರಸ್ತ ವ್ಯಕ್ತಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಸಾರ್ವಜನಿಕರ ಆಕ್ರೋಶವು ಹಿಂಸಾತ್ಮಕ ರೂಪ ಪಡೆದುಕೊಂಡಿದೆ.
ಸೋಮವಾರ ರಾತ್ರಿ 40 ವರ್ಷದ ವ್ಯಕ್ತಿಯೊಬ್ಬರ ಮೇಲೆ ಸುಡಾನ್ ಮೂಲದ 30 ವರ್ಷದ ವಲಸಿಗ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾನೆ. ಜೊತೆಗೆ ಶಿರಚ್ಛೇದಕ್ಕೂ ಯತ್ನಿಸಿದ್ದಾನೆ. ದಾಳಿಗೊಳಗಾದ ವ್ಯಕ್ತಿಯ ಕುತ್ತಿಗೆ, ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳದಿಂದ ಚಾಕುವನ್ನು ವಶಪಡಿಸಿಕೊಂಡಿರುವ ಪೊಲೀಸರು, ಸುಡಾನ್ ಪ್ರಜೆಯ ಮೇಲೆ ಕೊಲೆ ಯತ್ನ, ಮಾರಕಾಸ್ತ್ರ ಕಾಯ್ದೆ ಉಲ್ಲಂಘನೆ ಮತ್ತು ಕೊಲೆ ಬೆದರಿಕೆ ಅಡಿಯಲ್ಲಿ ಮೊಕದ್ದಮೆ ಹೂಡಿದ್ದಾರೆ. ತನಿಖೆಯ ಪ್ರಕಾರ, ಈತ 2023ರ ಸೆಪ್ಟೆಂಬರ್ನಲ್ಲಿ ಬ್ರಿಟನ್ನಲ್ಲಿ ಉಳಿಯಲು ಅನುಮತಿ ಪಡೆದಿದ್ದ. ಈ ಹಿಂದೆ ಯಾವುದೇ ಅಪರಾಧ ಹಿನ್ನೆಲೆ ಹೊಂದಿರಲಿಲ್ಲ.
ಬೆಲ್ಫಾಸ್ಟ್ನಲ್ಲಿ ಭುಗಿಲೆದ್ದ ಹಿಂಸಾಚಾರ
ಆರೋಪಿಯ ಮೇಲೆ ಮೊಕದ್ದಮೆ ದಾಖಲಾಗುತ್ತಿದ್ದಂತೆ, ಬೆಲ್ಫಾಸ್ಟ್ನಾದ್ಯಂತ ನೂರಾರು ವಲಸೆ ವಿರೋಧಿ ಪ್ರತಿಭಟನಾಕಾರರು ಮುಖವಾಡ ಧರಿಸಿ ರಸ್ತೆಗಿಳಿದಿದ್ದಾರೆ. ಉದ್ರಿಕ್ತ ಗುಂಪುಗಳು ಪೂರ್ವ ಬೆಲ್ಫಾಸ್ಟ್ನಲ್ಲಿ ಬಸ್ ಸೇರಿದಂತೆ ಹತ್ತಾರು ವಾಹನಗಳಿಗೆ ಬೆಂಕಿ ಹಚ್ಚಿವೆ. ವಲಸಿಗರ ಮನೆಗಳನ್ನು ಗುರಿಯಾಗಿಸಿಕೊಂಡು ಕಿಟಕಿ ಗಾಜುಗಳನ್ನು ಪುಡಿಮಾಡಲಾಗಿದ್ದು, ಕೆಲವು ಮನೆಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಸಶಸ್ತ್ರ ವಾಹನಗಳನ್ನು ಬಳಸಬೇಕಾಗಿ ಬಂದಿದೆ. ಈ ಆಕ್ರೋಶದ ಪ್ರತಿಧ್ವನಿ ಲಂಡನ್ನ ಪಾರ್ಲಿಮೆಂಟ್ ಸ್ಕ್ವೇರ್ನಲ್ಲೂ ಕೇಳಿಬಂದಿದ್ದು, ಅಲ್ಲಿಯೂ ಸಣ್ಣ ಮಟ್ಟದ ಪ್ರತಿಭಟನೆಗಳು ನಡೆದಿವೆ.
ಶಾಂತಿಗೆ ಕರೆ ನೀಡಿದ ರಾಜಕೀಯ ನಾಯಕರು
ಉತ್ತರ ಐರ್ಲೆಂಡ್ನ ಸಹಾಯಕ ಮುಖ್ಯ ಕಾನ್ಸ್ಟೇಬಲ್ ರಯಾನ್ ಹೆಂಡರ್ಸನ್ ಈ ಘಟನೆಯನ್ನು ಅತ್ಯಂತ ಗಂಭೀರ ಎಂದು ಘೋಷಿಸಿದ್ದು, ಸಾರ್ವಜನಿಕರು ಶಾಂತಿ ಮತ್ತು ಸಂಯಮ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಉತ್ತರ ಐರ್ಲೆಂಡ್ನ ಪ್ರಮುಖ ರಾಜಕೀಯ ನಾಯಕರು ಜಂಟಿ ಹೇಳಿಕೆ ನೀಡಿ, ಈ ಚಾಕು ಇರಿತವನ್ನು ತೀವ್ರವಾಗಿ ಖಂಡಿಸಿದ್ದಾರೆ. ಆದರೆ, ಪ್ರತೀಕಾರದ ಹಿಂಸಾಚಾರವು ಸಮಾಜದಲ್ಲಿ ಮತ್ತಷ್ಟು ಕಂದಕವನ್ನು ಸೃಷ್ಟಿಸುತ್ತದೆ ಮತ್ತು ಸ್ಥಳೀಯ ಸಮುದಾಯಗಳಿಗೆ ಹಾನಿ ಉಂಟುಮಾಡುತ್ತದೆ ಎಂದು ಎಚ್ಚರಿಸಿದ್ದಾರೆ. ಸದ್ಯಕ್ಕೆ ಈ ಘಟನೆಯನ್ನು ಭಯೋತ್ಪಾದನಾ ಕೃತ್ಯ ಎಂದು ಪರಿಗಣಿಸಲಾಗಿಲ್ಲವಾದರೂ, ದೇಶಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ : ‘ಒಬ್ಬನೇ ವ್ಯಕ್ತಿ ಇದನ್ನು ಸರಿಪಡಿಸಬಲ್ಲ’ : ಜಯ್ ಶಾ ಕಾರ್ಯವೈಖರಿ ಬಗ್ಗೆ ಲಲಿತ್ ಮೋದಿ ಭವಿಷ್ಯ!



















