ಬೆಂಗಳೂರು : ಭಾರತೀಯ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿರುವ 15 ವರ್ಷದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಕುರಿತು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಯುವ ಪ್ರತಿಭೆಯ ಮೇಲೆ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ತಕ್ಷಣವೇ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸಕ್ಕಾಗಿ ಭಾರತದ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ವೈಭವ್, ಮುಂಬರುವ 2026ರ ಏಷ್ಯನ್ ಗೇಮ್ಸ್ಗಾಗಿ ಪ್ರಕಟಿಸಲಾದ ಪೂರ್ಣ ಪ್ರಮಾಣದ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಅವನನ್ನು ಅವನ ಪಾಡಿಗೆ ಆಡಲು ಬಿಡಿ
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಯುವ ಪ್ರತಿಭೆಗಳನ್ನು ಬೆಂಬಲಿಸುವಲ್ಲಿ ಸೌರವ್ ಗಂಗೂಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ಇದೀಗ ವೈಭವ್ ಸೂರ್ಯವಂಶಿ ಕುರಿತು ಮಾತನಾಡಿರುವ ಅವರು, “ಅವನನ್ನು ಅವನ ಪಾಡಿಗೆ ಬಿಡಿ. ಆರಂಭದಲ್ಲಿಯೇ ಅವನಿಂದ ಇಡೀ ಜಗತ್ತನ್ನೇ ನಿರೀಕ್ಷಿಸಬೇಡಿ. ಭಾರತದಲ್ಲಿರುವ ಇತರ ಅನೇಕ ಆಟಗಾರರಂತೆ ಅವನಲ್ಲೂ ಅಪಾರ ಪ್ರತಿಭೆ ಇದೆ. ಆದ್ದರಿಂದ ಮೊದಲು ಅವನಿಗೆ ತಂಡದಲ್ಲಿ ಹೊಂದಿಕೊಳ್ಳಲು ಅವಕಾಶ ಮಾಡಿಕೊಡಿ” ಎಂದು ಹೇಳಿದ್ದಾರೆ. ಕೇವಲ 15 ವರ್ಷ ವಯಸ್ಸಿನ ಈ ಆಟಗಾರ ಐಪಿಎಲ್ ಟೂರ್ನಿಯಲ್ಲಿ ಯಾವುದೇ ಒತ್ತಡವಿಲ್ಲದೆ ಆಡಿದ್ದನ್ನು ನಾವು ನೋಡಿದ್ದೇವೆ, ಅದೇ ರೀತಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅವನಿಗೆ ಮುಕ್ತವಾಗಿ ಆಡಲು ಬಿಡಬೇಕು ಎಂದು ಗಂಗೂಲಿ ಸಲಹೆ ನೀಡಿದ್ದಾರೆ.
ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ನಡುವಿನ ವ್ಯತ್ಯಾಸ
ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಗಾಯಗೊಂಡಾಗ, ಬದಲಿ ಆಟಗಾರನಾಗಿ ಅವಕಾಶ ಪಡೆದ ವೈಭವ್ ಸೂರ್ಯವಂಶಿ, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕಾಯಂ ಸ್ಥಾನ ಭದ್ರಪಡಿಸಿಕೊಂಡಿದ್ದರು. ಆದರೆ, ಐಪಿಎಲ್ ಆಡುವುದಕ್ಕೂ ಹಾಗೂ ಭಾರತ ತಂಡವನ್ನು ಪ್ರತಿನಿಧಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ ಎಂಬುದನ್ನು ಗಂಗೂಲಿ ಎತ್ತಿ ತೋರಿಸಿದ್ದಾರೆ. “ಭಾರತಕ್ಕಾಗಿ ಆಡುವುದು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಅದರಲ್ಲೂ ವಿದೇಶಿ ಪ್ರವಾಸಗಳಲ್ಲಿನ ಪಿಚ್ಗಳು ಸವಾಲಿನಿಂದ ಕೂಡಿರುತ್ತವೆ. ಹೊಸ ಚೆಂಡಿನಲ್ಲಿ ವೇಗ, ಬೌನ್ಸ್ ಹಾಗೂ ಸ್ವಿಂಗ್ ಹೆಚ್ಚಾಗಿರುತ್ತದೆ. ಹೀಗಾಗಿ ಅಲ್ಲಿನ ಆಟದ ಶೈಲಿಯೇ ಬೇರೆಯಾಗಿರುತ್ತದೆ. ಆದರೂ, ಅವನಲ್ಲಿ ಅಪಾರವಾದ ನೈಸರ್ಗಿಕ ಪ್ರತಿಭೆ ಇದೆ” ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಐರ್ಲೆಂಡ್ ಸರಣಿಯಲ್ಲಿ ಪದಾರ್ಪಣೆಯ ನಿರೀಕ್ಷೆ
ಕಿರಿಯರ ಕ್ರಿಕೆಟ್ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿ ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಕಾಲಿಡುತ್ತಿರುವ ವೈಭವ್ ಸೂರ್ಯವಂಶಿಗೆ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದಲ್ಲಿ ಸ್ಥಾನ ಪಡೆಯಲು ತೀವ್ರ ಪೈಪೋಟಿ ಎದುರಾಗಲಿದೆ. ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರಂತಹ ಅನುಭವಿ ಆಟಗಾರರ ನಡುವೆ ಈ ಯುವ ಪ್ರತಿಭೆ ತನ್ನ ಸ್ಥಾನವನ್ನು ಕಂಡುಕೊಳ್ಳಬೇಕಿದೆ. ಯುವ ಆಟಗಾರನ ಬಗ್ಗೆ ಇರುವ ಭಾರಿ ನಿರೀಕ್ಷೆಗಳನ್ನು ಗಮನಿಸಿದರೆ, ಜೂನ್ 26 ರಂದು ಪ್ರಾರಂಭವಾಗಲಿರುವ ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವು ವೈಭವ್ ಸೂರ್ಯವಂಶಿಗೆ ಪದಾರ್ಪಣೆ
ಇದನ್ನೂ ಓದಿ : ಸೂರ್ಯಕುಮಾರ್ ಬದಲಿಗೆ ಶ್ರೇಯಸ್ ಅಯ್ಯರ್ : ಬಿಸಿಸಿಐ ನಿರ್ಧಾರ ಬೆಂಬಲಿಸಿದ ಕಪಿಲ್ ದೇವ್!



















