ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ಇಲ್ಲಿನ ಮಾಳವೀಯ ನಗರದಲ್ಲಿ ಮುಂಜಾನೆ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. ಇಲ್ಲಿನ ‘ಲೆಮನ್ ಗ್ರೀನ್’ ರೆಸ್ಟೋರೆಂಟ್ ಮತ್ತು ಹೋಟೆಲ್ ಕಟ್ಟಡದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬೆಂಕಿ ಮತ್ತು ದಟ್ಟ ಹೊಗೆಯಿಂದ ರಕ್ಷಿಸಿಕೊಳ್ಳಲು ಮಹಿಳೆಯೊಬ್ಬರು ಮೇಲಿನ ಮಹಡಿಯಿಂದ ಕೆಳಗೆ ಜಿಗಿಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾಳವೀಯ ನಗರದ ಹೌಜ್ ರಾಣಿ ಭಾಗದ ಕಿರಿದಾದ ಗಲ್ಲಿಯೊಂದರಲ್ಲಿರುವ ಈ ಐದು ಅಂತಸ್ತಿನ ಹೋಟೆಲ್ ಕಟ್ಟಡದ ನೆಲಮಹಡಿಯಲ್ಲಿ ಇಂದು ಬೆಳಗ್ಗೆ ಸುಮಾರು 8.50ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. 9 ಗಂಟೆಯ ಸುಮಾರಿಗೆ ಬಂದ ತುರ್ತು ಕರೆಗೆ ಸ್ಪಂದಿಸಿದ ಅಗ್ನಿಶಾಮಕ ದಳವು ತಕ್ಷಣವೇ ಸ್ಥಳಕ್ಕೆ ಧಾವಿಸಿದೆ. ಘಟನಾ ಸ್ಥಳಕ್ಕೆ ಎರಡು ವಾಟರ್ ಟೆಂಡರ್ಗಳು, ಎರಡು ವಾಟರ್ ಬೌಸರ್ಗಳು ಮತ್ತು ಕ್ಷಿಪ್ರ ಕಾರ್ಯಪಡೆ ವಾಹನ ಸೇರಿದಂತೆ ಒಟ್ಟು ಹತ್ತಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳನ್ನು ರವಾನಿಸಿ, ಸತತ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಗಿದೆ.
ನಿದ್ರೆಯಲ್ಲೇ ಜವರಾಯನ ಪಾಲಾದ ವಿದೇಶಿ ಪ್ರಜೆಗಳು
ಸ್ಥಳೀಯ ನಿವಾಸಿಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಹೋಟೆಲ್ನಲ್ಲಿ ಸುಮಾರು 25 ಕೊಠಡಿಗಳಿದ್ದು, ದುರಂತದ ಸಮಯದಲ್ಲಿ ಕನಿಷ್ಠ 40 ಜನ ಪ್ರವಾಸಿಗರು ತಂಗಿದ್ದರು. ಇವರಲ್ಲಿ ಬಹುತೇಕರು ಭಾರತಕ್ಕೆ ವೈದ್ಯಕೀಯ ಚಿಕಿತ್ಸೆಗಾಗಿ ಬಂದಿದ್ದ ವಿದೇಶಿ ಪ್ರಜೆಗಳಾಗಿದ್ದಾರೆ. ಮುಂಜಾನೆ ಬೆಂಕಿ ಕಾಣಿಸಿಕೊಂಡಾಗ ಬಹುತೇಕ ಅತಿಥಿಗಳು ಗಾಢ ನಿದ್ರೆಯಲ್ಲಿದ್ದ ಕಾರಣ ತಕ್ಷಣವೇ ಹೊರಬರಲು ಸಾಧ್ಯವಾಗದೆ ಕೆಲವರು ಉಸಿರುಗಟ್ಟಿ ಸಾವಿಗೀಡಾದರೆ, ಮತ್ತೆ ಕೆಲವರು ಸಜೀವ ದಹನವಾಗಿದ್ದಾರೆ ಎಂದು ತಿಳಿದುಬಂದಿದೆ.
ರಕ್ಷಣಾ ಕಾರ್ಯಾಚರಣೆ
ದುರಂತದ ಆರಂಭಿಕ ಹಂತದಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಟ್ಟಡದ ನೆಲಮಹಡಿಯಿಂದ ಮೂವರನ್ನು ಯಶಸ್ವಿಯಾಗಿ ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರ ಸದ್ಯದ ಆರೋಗ್ಯ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಮತ್ತೊಂದೆಡೆ, ಪ್ರಾಣ ಉಳಿಸಿಕೊಳ್ಳಲು ಕೆಲವು ಅತಿಥಿಗಳು ಕಟ್ಟಡದಿಂದ ಕೆಳಗೆ ಜಿಗಿಯುತ್ತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸದ್ಯಕ್ಕೆ ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ನುಗ್ಗಿದ ಐರಾವತ ಬಸ್!



















